ಜಯಪುರ: ವರ್ಷದ ಮೊದಲ ಮಳೆ ಸುರಿದ ಸಂತಸದಲ್ಲಿ ಹೋಬಳಿಯಾದ್ಯಂತ ಕೃಷಿ ಚುಟುವಟಿಕೆಗಳು ಗರಿಗೆದರಿವೆ.
ಭರಣಿ ಮಳೆಯು ಇತ್ತೀಚೆಗೆ ಉತ್ತಮವಾಗಿ ಸುರಿದಿದೆ. ಮಳೆಯಾಶ್ರಿತ ಬೇಸಾಯ ಮಾಡುವ ರೈತರು ತಮ್ಮ ಜಮೀನುಗಳಲ್ಲಿದ್ದ ಹತ್ತಿ, ತೊಗರಿ ಕೂಳೆಗಳು ಹಾಗೂ ಕಳೆ ಗಿಡ ತೆಗೆದಿದ್ದಾರೆ. ಭೂಮಿಗೆ ಕೊಟ್ಟಿಗೆ ಗೊಬ್ಬರ ಹರಡಿದ್ದು, ಭೂಮಿ ಹದಗೊಳಿಸಲು ಮುಂದಾಗಿದ್ದಾರೆ.
ಮೈಸೂರು ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭರಣಿ ಮಳೆಗೆ ಬಿಳಿಜೋಳ, ಅಲಸಂದೆ, ತೊಗರಿ, ದೊಡ್ಡ ಅವರೆ ಕಾಳು, ಉದ್ದು, ಹೆಸರುಕಾಳು ಬಿತ್ತನೆ ಮಾಡುವುದು ವಾಡಿಕೆ.
ಈಗಾಗಲೇ ರೈತರು ಟ್ರ್ಯಾಕ್ಟರ್ ಮೂಲಕ ಜಮೀನು ಉಳುಮೆ ಮಾಡಿಸುತ್ತಿದ್ದಾರೆ. ಉತ್ತಮ ಮಳೆಯಾದ್ದರಿಂದ ಟ್ರ್ಯಾಕ್ಟರ್ಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ರೈತರು ಕಾದು ಕುಳಿತು ಜಮೀನು ಉಳುಮೆ ಮಾಡಿಸಲು ಚಿತ್ತ ಹರಿಸಿದ್ದಾರೆ.
ಟ್ರ್ಯಾಕ್ಟರ್ನಲ್ಲಿ ಒಂದು ಗಂಟೆ ಉಳುಮೆಗೆ ಡಿಸ್ಕ್ಗೆ ₹1 ಸಾವಿರ, ಕಲ್ಟಿವೇಟರ್ ₹1 ಸಾವಿರ, ರೋಟವೇಟರ್ ₹1200, ಐದು ನೆಗಿಲು ₹1ಸಾವಿರ ದರವಿದೆ. ಟ್ರ್ಯಾಕ್ಟರ್ನಲ್ಲಿ ಒಂದು ಫುಲ್ ಲೋಡ್ ಕೊಟ್ಟಿಗೆ ಗೊಬ್ಬರಕ್ಕೆ ₹10,500 ದರವಿದ್ದು, ಬೇಡಿಕೆಯೂ ಹೆಚ್ಚಿದೆ.
ಭರಣಿ ಮಳೆಗೆ ಬಿತ್ತನೆ ಕಾರ್ಯ ಮುಗಿಸಬೇಕೆಂಬುದು ರೈತರ ಚಿಂತನೆಯಾಗಿದೆ. ತ್ವರಿತಗತಿಯಲ್ಲಿ ಜಮೀನು ಹಸನುಗೊಳಿಸಿಕೊಳ್ಳುತ್ತಿದ್ದಾರೆ. ಹವಾಮಾನ ಇಲಾಖೆಯು ಮುಂದಿನ ಏಳು ದಿನ ಉತ್ತಮ ಮಳೆಯಾಗಲಿದೆ ಎಂಬ ಮಾಹಿತಿ ನೀಡಿದೆ. ಹಾಗಾಗಿ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರ ಖರೀದಿಗಾಗಿ ರೈತರು ಖಾಸಗಿ ಆಗ್ರೋ ಕೇಂದ್ರ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಖರೀದಿಸುತ್ತಿದ್ದಾರೆ.
ಹತ್ತಿ, ಅಲಸಂದೆ, ಆವರೆ, ತೊಗರಿ, ಬಿಳಿ ಜೋಳ, ಮುಸುಕಿನ ಜೋಳ ಬಿತ್ತನೆ ಮಾಡಲು ರೈತರು ಇನ್ನೊಂದು ಮಳೆಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಒಂದು ಜೊತೆ ಹೇರುಗೆ ದಿನವೊಂದಕ್ಕೆ ₹1500 ಕೂಲಿ ನೀಡಬೇಕಿದೆ. ರೈತರಿಗೆ ಸರಿಯಾದ ಸಮಯಕ್ಕೆ ಹೇರು ಸಿಗದಿರುವುದರಿಂದ ತೊಂದರೆಗೆ ಈಡಾಗುತ್ತಾರೆ.
ಜಮೀನು ಉಳುಮೆಗೆ ಟ್ರ್ಯಾಕ್ಟರ್ ಬೇಡಿಕೆ ಕೊಟ್ಟಿಗೆ ಗೊಬ್ಬರಕ್ಕೆ ₹10,500 ದರ ಏಳು ದಿನ ಉತ್ತಮ ಮಳೆ ಸಂಭವ
ಮಳೆಯಾದರೆ ಮಾತ್ರ ಉತ್ತಮ ಬೆಳೆ ‘ಟ್ರ್ಯಾಕ್ಟರ್ ಉಳುಮೆ ಬಾಡಿಗೆಯು ದುಬಾರಿಯಾಗಿದ್ದು ಬರದ ಹಿನ್ನೆಲೆ ರೈತರಿಗೆ ಹೆಚ್ಚುವರಿ ಹೊರೆಯಾಗಿದೆ. ಆದರೂ ಕೃಷಿ ಕೆಲಸ ಬಿಡಲಾಗುವುದಿಲ್ಲ. ಈ ಬಾರಿ ಉತ್ತಮ ಮಳೆಯಾದರೆ ಉತ್ತಮ ಬೆಳೆಯು ರೈತರ ಕೈ ಸೇರುತ್ತದೆ’ ಎಂದು ಡಿ.ಸಾಲುಂಡಿಯ ರೈತ ಬಸಪ್ಪ ತಿಳಿಸಿದರು.
ಅಲಸಂದೆ ಹೆಸರು ಬಿತ್ತನೆ ಬೀಜ ಲಭ್ಯ ‘ಪೂರ್ವ ಮುಂಗಾರಿನಲ್ಲಿ ಅಲಸಂದೆ ಹೆಸರು ಕಾಳು ಬಿತ್ತನೆ ಬೀಜ ಮಾತ್ರ ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಲಭ್ಯವಿದ್ದು ರೈತರಿಗೆ ವಿತರಿಸಲಾಗುತ್ತಿದೆ’ ಎಂದು ಜಯಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕುಮಾರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.