ಕೇರಳದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲೊಂದಾದ ಆಟ್ಟಿಂಗಲ್ ಈ ಬಾರಿ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಕಳೆದ ಬಾರಿ ಇಲ್ಲಿಂದ ಗೆದ್ದಿದ್ದ ಅಡೂರ್ ಪ್ರಕಾಶ್ ಅವರನ್ನೇ ಕಾಂಗ್ರೆಸ್ ಪಕ್ಷವು ಈ ಸಲವೂ ಕಣಕ್ಕಿಳಿಸಿದೆ. ಶಾಸಕ ವಿ. ಜಾಯ್ ಅವರು ಆಡಳಿತಾರೂಢ ಸಿಪಿಎಂನ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ. ಇವರಿಬ್ಬರಿಗೆ ಪೈಪೋಟಿ ನೀಡಲು ಬಿಜೆಪಿಯು ಕೇಂದ್ರ ಸಚಿವ ವಿ. ಮುರಳೀಧರನ್ ಅವರನ್ನು ಸ್ಪರ್ಧಿಯಾಗಿಸಿದೆ.
ಸಿಪಿಎಂನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಿಂದ ಕಳೆದ ಬಾರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದ ಪ್ರಕಾಶ್ ಅವರು, ಈ ಬಾರಿಯೂ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಕ್ಷೇತ್ರವನ್ನು ಮರಳಿ ಪಕ್ಷದ ತೆಕ್ಕೆಗೆ ಸೇರಿಸಬೇಕೆಂದು ಸಿಪಿಎಂನ ಮುಖಂಡರು ಅವಿರತವಾಗಿ ಶ್ರಮಿಸುತ್ತಿದ್ದಾರೆ.
2019ರ ಚುನಾವಣೆಯಲ್ಲಿ ಪ್ರಕಾಶ್ ಅವರು 38,247 ಮತಗಳ ಅಂತರದಿಂದ ಸಿಪಿಎಂನ ಅನಿರುದ್ಧನ್ ಸಂಪತ್ ಅವರನ್ನು ಪರಾಭವಗೊಳಿಸಿದ್ದರು. ಅನಿರುದ್ಧನ್ ಅವರು ಈ ಮೊದಲು ಇಲ್ಲಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಾಯ್ ಅವರು ವರ್ಕಲ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನರ ಮುಂದಿರಿಸಿ, ಜಾಯ್ ಅವರು ಮತಯಾಚಿಸುತ್ತಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ವಿ. ಮುರಳೀಧರನ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಸಾಧನೆಗಳನ್ನು ಮುಖ್ಯ ಚುನಾವಣಾ ವಿಚಾರವಾಗಿಸಿ ಜನರ ಬಳಿಗೆ ತೆರಳುತ್ತಿದ್ದಾರೆ.