ನವದೆಹಲಿ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆಯನ್ನು ಈಡೇರಿಸುವಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದರು.
ಪ್ರಧಾನಿ ಮೋದಿ ಆಂಧ್ರಪ್ರದೇಶ ಭೇಟಿ ಹಿನ್ನೆಲೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿರುವ ಜೈರಾಮ್ ರಮೇಶ್, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
‘ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಮೋದಿಯವರ ಭರವಸೆ ಸುಳ್ಳೇ? ವೈಜಾಗ್ ಸ್ಟೀಲ್ ಪ್ಲಾಂಟ್ ಅನ್ನು ತನ್ನ ಸ್ನೇಹಿತರಿಗೆ ಮಾರಾಟ ಮಾಡಲು ಪ್ರಧಾನಿ ಏಕೆ ಉತ್ಸುಕರಾಗಿದ್ದಾರೆ? ಪೋಲವರಂ ನೀರಾವರಿ ಯೋಜನೆಯನ್ನು ಮೋದಿ ಸರ್ಕಾರ ಏಕೆ ಸ್ಥಗಿತಗೊಳಿಸುತ್ತಿದೆ?’ ಎಂದು ಎಕ್ಸ್ ಖಾತೆಯಲ್ಲಿ ರಮೇಶ್ ಪ್ರಶ್ನಿಸಿದ್ದಾರೆ.
‘2014ರ ಫೆಬ್ರುವರಿ 20 ರಂದು ನಡೆದ ರಾಜ್ಯಸಭಾ ಅಧಿವೇಶನದಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಐದು ವರ್ಷಗಳ ಅವಧಿಗೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಭರವಸೆಯನ್ನು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ನಾಯಕ ವೆಂಕಯ ನಾಯ್ಡು, ‘ಐದು ವರ್ಷ ಏಕೆ ಬಿಜೆಪಿ 10 ವರ್ಷ ನೀಡುತ್ತದೆ’ ಎಂದಿದ್ದರು. 2014 ಏಪ್ರಿಲ್ 30ರಂದು ತಿರುಪತಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವಿಶೇಷ ಸ್ಥಾನಮಾನ ನೀಡುವ ಭರವಸೆಯನ್ನು ಸ್ವತಃ ಪ್ರಧಾನಿ ಮೋದಿ ಅವರೇ ನೀಡಿದ್ದರು’ ಎಂದು ಹೇಳಿದರು.
‘2014 ರಿಂದ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಆಂಧ್ರಪ್ರದೇಶದ ಜನರಿಗೆ ನೀಡಿದ ಈ ಭರವಸೆ ಈಡೇರಿಸಲು ಪ್ರಧಾನಿ ಮೋದಿ ಏಕೆ ವಿಫಲರಾಗಿದ್ದಾರೆ’ ಎಂದು ಪ್ರಶ್ನಿಸಿದರು.
‘ಮನಮೋಹನ್ ಸಿಂಗ್ ಭರವಸೆ ನೀಡಿದಂತೆ ಆಂಧ್ರಪ್ರದೇಶಕ್ಕೆ ಐದು ವರ್ಷಗಳ ಅವಧಿಗೆ ವಿಶೇಷ ಸ್ಥಾನಮಾನ ನೀಡುವ ಭರವಸೆಯನ್ನು ಕಾಂಗ್ರೆಸ್ನ ತನ್ನ ಪ್ರಣಾಳಿಕೆಯಲ್ಲಿ ಪುನರುಚ್ಚರಿಸಿದೆ’ ಎಂದು ಅವರು ಹೇಳಿದರು.