ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಕ್ವಾಲಿಫೈರ್ಸ್‌ ತಪ್ಪಿಸಿಕೊಂಡ ಪೂನಿಯಾ, ಸುಜಿತ್

ದುಬೈನಿಂದ ತಡವಾಗಿ ಹೊರಟ ವಿಮಾನ
Published 19 ಏಪ್ರಿಲ್ 2024, 12:17 IST
Last Updated 19 ಏಪ್ರಿಲ್ 2024, 12:17 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಕುಸ್ತಿ ತಂಡಕ್ಕೆ ದೊಡ್ಡ ಹಿನ್ನಡೆ ಎಂಬಂತೆ, ದೇಶದ ಇಬ್ಬರು ಪ್ರಮುಖ ಪೈಲ್ವಾನರಾದ ದೀಪಕ್ ಪೂನಿಯಾ ಮತ್ತು ಸುಜಿತ್ ಕಲಾಕಲ್ ಅವರು ಏಷ್ಯಾ ಒಲಿಂಪಿಕ್‌ ಕ್ವಾಲಿಫೈರ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ತಪ್ಪಿಸಿಕೊಂಡರು. ಅವರು ವೇ–ಇನ್‌ ವೇಳೆ ಹಾಜರಾಗಲು ಆಗಲಿಲ್ಲ.

ಪ್ರತಿಕೂಲ ಹವಾಮಾನದಿಂದಾಗಿ ದುಬೈನಿಂದ ವಿಮಾನ ತಡವಾಗಿ ಹೊರಟ ಕಾರಣ ಅವರಿಬ್ಬರೂ ಕಿರ್ಗಿಸ್ಥಾನದ ರಾಜಧಾನಿ ಬಿಷ್ಕೆಕ್‌ಗೆ ತಡವಾಗಿ ತಲುಪಿದರು. ಸ್ಪರ್ಧಾ ಸ್ಥಳ ತಲುಪುವಷ್ಟರಲ್ಲಿ ವೇ–ಇನ್ (ದೇಹತೂಕ ತೆಗೆದುಕೊಳ್ಳುವ ಸಮಯ) ಮುಗಿದಿತ್ತು. ಭಾರತದ ಕೋಚ್‌ಗಳ ಕೋರಿಕೆ ಹೊರತಾಗಿಯೂ ಆಯೋಜಕರು ಇದಕ್ಕೆ ಅವಕಾಶ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.

ಯುಎಇ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಅಕಾಲಿಕ ಮಳೆ, ಪ್ರವಾಹದಿಂದಾಗಿ ದುಬೈನಿಂದ ಎರಡು ದಿನಗಳಿಂದ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ.

ಪೂನಿಯಾ 86 ಕೆ.ಜಿ. ವಿಭಾಗದಲ್ಲಿ ಮತ್ತು ಸುಜೀತ್‌ 65 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಬೇಕಾಗಿತ್ತು. ಒಲಿಂಪಿಕ್ಸ್‌ಗೆ ಮೊದಲು ಈ ಅರ್ಹತಾ ಟೂರ್ನಿ ಸೇರಿದಂತೆ ಎರಡಷ್ಟೇ ಉಳಿದಿವೆ. ಹೀಗಾಗಿ ಹೆಚ್ಚಿನ ಮಹತ್ವ ಹೊಂದಿವೆ.‌

ಭಾರಿ ಮಳೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆಯಿಂದಾಗಿ ಇವರಿಬ್ಬರು, ರಷ್ಯಾದ ಕೋಚ್‌ ಕಮಲ್ ಮಲಿಕೋವ್ ಜೊತೆ ನೆಲದಲ್ಲೇ ಮಲಗಬೇಕಾಯಿತು. ಮಳೆ ಸೃಷ್ಟಿಸಿದ ಅವಾಂತರದಿಂದ ತಿಂಡಿ–ತಿನಿಸು ಸಿಗುವುದೂ ದುರ್ಲಭವಾಗಿತ್ತು.

ರಷ್ಯಾದ ದಾಗೆಸ್ತಾನ್‌ನಲ್ಲಿ ತರಬೇತಿಯಲ್ಲಿದ್ದ ಇವರಿಬ್ಬರು ಮಕಾಚ್‌ಕಲಾದಿಂದ ದುಬೈ ಮೂಲಕ ಬಿಷ್ಕೆಕ್ ತಲುಪಲು ಯೋಚಿಸಿದ್ದರು.

ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಕೊನೆಯ ಅವಕಾಶ ಮೇ ತಿಂಗಳಲ್ಲಿ (ಟರ್ಕಿಯಲ್ಲಿ ನಡೆಯಲಿರುವ ವಿಶ್ವ ಕ್ವಾಲಿಫೈರ್ಸ್) ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT