ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ರೈಲಿಗೆ ತಲೆಕೊಟ್ಟು 186 ಮಂದಿ ಸಾವು

ಮೈಲಾರಿ ಲಿಂಗಪ್ಪ
Published 9 ಮೇ 2024, 7:07 IST
Last Updated 9 ಮೇ 2024, 7:07 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ರೈಲಿಗೆ ಸಿಲುಕಿ 186 ಜನ ಪ್ರಾಣ ಕಳೆದುಕೊಂಡಿದ್ದು, ಇದರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯೇ ಹೆಚ್ಚು!

ಇಂತಹ ಘಟನೆಗಳು ಆಕಸ್ಮಿಕವಾಗಿ ಘಟಿಸುವುದಕ್ಕಿಂತ ಉದ್ದೇಶ ಪೂರ್ವಕವಾಗಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದು ಜಾಸ್ತಿಯಾಗುತ್ತಿದೆ. ‘ಮಾಡಿದ ಸಾಲ ತೀರಿಸಲು ಆಗದವರು, ಪ್ರೀತಿಯಲ್ಲಿ ಮೋಸ, ಇಷ್ಟಪಟ್ಟವರು ಸಿಗಲಿಲ್ಲ’ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. 40ರಿಂದ 50 ವಯಸ್ಸಿನವರು ಹೆಚ್ಚಾಗಿ ರೈಲಿಗೆ ತಲೆಕೊಟ್ಟು ಜೀವ ಬಿಡುತ್ತಿದ್ದಾರೆ.

2021ರಲ್ಲಿ 60 ಜನ, 2022ರಲ್ಲಿ 67 ಮಂದಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ರೈಲಿನ ಪ್ಲಾಟ್‌ಫಾರಂ ಮೇಲೆ ನಡೆದುಕೊಂಡು ಹೋಗುವಾಗ, ರೈಲು ಹತ್ತುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಸಂಖ್ಯೆ ತೀರಾ ಕಡಿಮೆ ಇದೆ. ಒಟ್ಟು ಪ್ರಕರಣದಲ್ಲಿ ಶೇ 10ರಷ್ಟು ಮಂದಿ ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ. ಶೇ 90ರಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳಲಿಕ್ಕೆ ರೈಲು ಹಳಿಗೆ ಬರುತ್ತಿದ್ದಾರೆ. ಹೀಗೆ ಮೃತಪಟ್ಟವರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚಿದ್ದಾರೆ.

ಕುಟುಂಬ ಸದಸ್ಯರ ಜತೆಗೆ ಮನಸ್ತಾಪ, ಗಲಾಟೆಯಿಂದ ಮನೆ ಬಿಟ್ಟು ಬಂದವರು ಮತ್ತೆ ಹೆಣವಾಗಿ ಸಿಗುತ್ತಿದ್ದಾರೆ. ಕಾಣೆಯಾದವರು ರೈಲು ಹಳಿಗಳ ಮೇಲೆ ಪತ್ತೆಯಾಗುತ್ತಿದ್ದಾರೆ. ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ ಮೃತ ವ್ಯಕ್ತಿಯನ್ನು ಗುರುತಿಸಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ವ್ಯಕ್ತಿಯ ಗುರುತೇ ಸಿಗದಂತಾಗುತ್ತದೆ. ಸಾವನ್ನಪ್ಪಿದ ವ್ಯಕ್ತಿ ಧರಿಸಿದ ಬಟ್ಟೆ, ಮೈಮೇಲಿನ ‘ಅಚ್ಚೆ’ ಗುರುತುಗಳ ಮುಖಾಂತರ ರೈಲ್ವೆ ಪೊಲೀಸರು ಮಾಹಿತಿ ಕಲೆ ಹಾಕುತ್ತಾರೆ.

ಕೆಲವು ಘಟನೆಗಳಲ್ಲಿ ಕಿವಿಗೆ ‘ಇಯರ್‌ ಫೋನ್‌’ ಹಾಕಿಕೊಂಡು ಹಿಂದೆ ಬರುವ ರೈಲಿನ ಶಬ್ದ ಕೇಳಿಸದೆ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಇಂತಹ ಪ್ರಕರಣಗಳು ತೀರಾ ವಿರಳ. ಹೆಚ್ಚಾಗಿ ಯುವಕರು, ವಿದ್ಯಾರ್ಥಿಗಳು ಸದಾ ಮೊಬೈಲ್‌ನಲ್ಲಿ ಮುಳುಗಿರುತ್ತಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ರಸ್ತೆ, ರೈಲು ಹಳಿ ದಾಟುವಾಗ ಮೈಮೇಲೆ ಕನಿಷ್ಠ ಎಚ್ಚರ ಇರುವುದಿಲ್ಲ. ಇಂತಹ ವರ್ತನೆಗಳಿಂದ ಅಪಾಯ ಆಗುತ್ತದೆ. ಎಲ್ಲರು ಸದಾ ಎಚ್ಚರಿಕೆಯಿಂದ ಇರಬೇಕು ಎಂದು ರೈಲ್ವೆ ಅಧಿಕಾರಿಯೊಬ್ಬರು ಎಚ್ಚರಿಸಿದರು.

‘ಆತ್ಮಹತ್ಯೆ ತಡೆಗೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳುತ್ತಿಲ್ಲ. ಜನರಲ್ಲಿ ಅರಿವು ಮೂಡಿಸಿ, ಆತ್ಮಹತ್ಯೆಯ ಆಲೋಚನೆಯಿಂದ ಹೊರ ಬರುವಂತೆ ಜಾಗೃತಗೊಳಿಸುವ ಕೆಲಸ ಆಗುತ್ತಿಲ್ಲ. ಹಾಗಾಗಿ ಇಂತಹ ಪ್ರಕರಣಗಳು ಪದೇ ಪದೇ ವರದಿಯಾಗುತ್ತವೆ. ಸಂಬಂಧಪಟ್ಟವರು ಆತ್ಮಹತ್ಯೆ ತಡೆಯಲು ಶಾಲಾ–ಕಾಲೇಜು ಹಂತಗಳಲ್ಲಿಯೇ ಮಕ್ಕಳಿಗೆ ಉಪನ್ಯಾಸ, ಪ್ರಬಂಧ ಬರೆಸುವ ಯೋಜನೆ ರೂಪಿಸಬೇಕು’ ಎಂದು ನಗರದ ಮಹೇಶ್‌ಕುಮಾರ್‌ ಒತ್ತಾಯಿಸಿದರು.

ರೈಲಿಗೆ ಸಿಲುಕಿ ಮೃತಪಟ್ಟವರು

ವರ್ಷ;ಸಂಖ್ಯೆ

2021;60

2022;69

2023;57

ಒಟ್ಟು;186

2023ರಲ್ಲಿ 57 ಜನ ಸಾವು ಮಹಿಳೆಯರಿಗಿಂತ ಪುರುಷರೇ ಹೆಚ್ಚು ಆತ್ಮಹತ್ಯೆ ತಡೆಗಿಲ್ಲ ಜಾಗೃತಿ
ಗುರುತು ಕಷ್ಟಕರ
ರೈಲಿಗೆ ಸಿಲುಕಿ ಸಾವನ್ನಪ್ಪಿದ್ದ ಶೇ 50ರಷ್ಟು ಜನರ ಗುರುತೇ ಪತ್ತೆಯಾಗುವುದಿಲ್ಲ. ಹೊರ ರಾಜ್ಯಗಳಿಂದ ಅನ್ಯ ಕಾರ್ಯಗಳಿಗಾಗಿ ಇಲ್ಲಿಗೆ ವಲಸೆ ಬಂದವರ ವಿಳಾಸ ಹುಡುಕುವುದು ರೈಲ್ವೆ ಪೊಲೀಸರಿಗೆ ಸವಾಲಿನ ಕೆಲಸ. ಬಿಹಾರ ಜಾರ್ಖಾಂಡ್‌ ಉತ್ತರ ಪ್ರದೇಶದಿಂದ ವಲಸೆ ಬಂದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡವರ ಗುರುತು ಸಿಗುವುದಿಲ್ಲ. ಅಗತ್ಯ ಮಾಹಿತಿ ತಿಳಿಯದಿದ್ದರೆ ಒಂದು ವಾರ ಮೃತದೇಹ ಇಟ್ಟುಕೊಳ್ಳುತ್ತಾರೆ. ಯಾರೂ ಬಾರದಿದ್ದರೆ ರೈಲ್ವೆ ಪೊಲೀಸರೇ ಅಂತ್ಯ ಸಂಸ್ಕಾರ ನೆರವೇರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT