ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಎರಡು ಹಂತಗಳ ಮತದಾನ ಪ್ರಮಾಣದ ದತ್ತಾಂಶದಲ್ಲಿನ ‘ವ್ಯತ್ಯಾಸ’ಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ‘ಇಂಡಿಯಾ’ ಮೈತ್ರಿಕೂಟದ ವಿವಿಧ ಪಕ್ಷಗಳ ನಾಯಕರಿಗೆ ಪತ್ರ ಬರೆದಿದ್ದಾರೆ.
ಚುನಾವಣಾ ಆಯೋಗ ಬಿಡುಗಡೆ ಮಾಡಿದ ಮತದಾನದ ಅಂಕಿ-ಅಂಶ ತಾಳೆಯಾಗದೇ ಇರುವುದನ್ನು ಅವರು ಪ್ರಶ್ನಿಸಿದ್ದು, ಈ ಬಗ್ಗೆ ಧ್ವನಿ ಎತ್ತುವಂತೆ ಮೈತ್ರಿಕೂಟದ ನಾಯಕರಲ್ಲಿ ಕೇಳಿಕೊಂಡಿದ್ದಾರೆ. ‘ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವುದೇ ನಮ್ಮ ಏಕೈಕ ಉದ್ದೇಶ’ ಎಂದಿದ್ದಾರೆ.
ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳೋಣ ಹಾಗೂ ಅದನ್ನು ಹೊಣೆಗಾರರನ್ನಾಗಿ ಮಾಡೋಣ. ಆ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಹೆಜ್ಜೆಯಿಡೋಣ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘ಮೊದಲ ಎರಡು ಹಂತಗಳ ಮತದಾನದಲ್ಲಿ ಹಿನ್ನಡೆ ಉಂಟಾಗಿರುವುದು ಖಚಿತವಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಹತಾಶೆಗೊಂಡಿದ್ದಾರೆ. ಅಧಿಕಾರದ ಅಮಲಿನಲ್ಲಿರುವ ನಿರಂಕುಶ ಆಡಳಿತವು ಕುರ್ಚಿಯನ್ನು ಉಳಿಸಿಕೊಳ್ಳಲು ಯಾವುದೇ ಕೀಳುಮಟ್ಟಕಾದರೂ ಇಳಿಯಬಹುದು ಎಂಬುದು ಇಡೀ ದೇಶಕ್ಕೆ ತಿಳಿದಿರುವ ವಿಚಾರ’ ಎಂದಿದ್ದಾರೆ.
ಮೊದಲ ಎರಡು ಹಂತಗಳ ಮತದಾನ ಪ್ರಮಾಣದ ದತ್ತಾಂಶವನ್ನು ಪ್ರಕಟಿಸಲು ಚುನಾವಣಾ ಆಯೋಗವು ವಿಳಂಬ ಧೋರಣೆ ಅನುಸರಿಸಿದ್ದನ್ನು ಹಲವು ಪಕ್ಷಗಳು ಪ್ರಶ್ನಿಸಿದ್ದವು.