ಅಥಣಿ (ಬೆಳಗಾವಿ ಜಿಲ್ಲೆ): ಎರಡು ಕುಟುಂಬಗಳ ನಡುವೆ ನಡೆದ ಜಗಳದಲ್ಲಿ ಮೂರು ವರ್ಷದ ಮಗುವನ್ನು ಎದೆ ಮೇಲೆ ತುಳಿದು ಕೊಲೆ ಮಾಡಿದ ಘಟನೆ ತಾಲ್ಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಶ್ರೀನಿಧಿ ಕಾಡಪ್ಪ ಕಾಳಾಪಾಟೀಲ ಕೊಲೆಯಾದ ಮಗು. ಜೋತಿಬಾ ತುಕಾರಾಮ ಬಾಬಾಬರ ಕೊಲೆಯ ಆರೋಪಿ.
ಮಗುವಿನ ತಂದೆ ಕಾಡಪ್ಪ ಕಾಳಾಪಾಟೀಲ ಅವರಿಗೆ ಆರೋಪಿ ಜೋತಿಬಾ ಕಳೆದ ವರ್ಷ ₹50 ಸಾವಿರ ಸಾಲ ನೀಡಿದ್ದ. ಈ ಹಣವನ್ನು ಕೇಳಿದಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಶುಕ್ರವಾರ ರಾತ್ರಿ ಮದ್ಯದ ಅಮಲಿನಲ್ಲಿ ಬಂದ ಆರೋಪಿ ಮತ್ತೆ ಜಗಳ ತೆಗೆದಿದ್ದ. ಶನಿವಾರ ಬೆಳಿಗ್ಗೆ ಮನೆ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದ. ಆಗ ಕಾಡಪ್ಪ ಹಾಗೂ ಜ್ಯೋತಿಬಾ ನಡುವೆ ಹೊಡೆದಾಟ ಶುರುವಾಯಿತು.
ಹತ್ತಿರದಲ್ಲೇ ಇದ್ದ ಮಗುವನ್ನು ಎತ್ತಿಕೊಂಡ ಆರೋಪಿ ಟ್ರ್ಯಾಕ್ಟರ್ ಚಕ್ರದ ಕೆಳಗೆ ಬಿಸಾಗಿದ. ನಂತರ ಎದೆ ಮೇಲೆ ಕಾಲಿಟ್ಟು ಕೊಲೆ ಮಾಡಿದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.