ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಎಂಸಿ ಅಧಿಕಾರದಲ್ಲಿ ಸಾವಿರಾರು ಕೋಟಿ ಹಗರಣ: ಪ್ರಧಾನಿ ಮೋದಿ ಟೀಕೆ

Published 26 ಏಪ್ರಿಲ್ 2024, 7:44 IST
Last Updated 26 ಏಪ್ರಿಲ್ 2024, 7:44 IST
ಅಕ್ಷರ ಗಾತ್ರ

ಮಾಲ್ಡಾ: ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣದಿಂದಾಗಿ ಸುಮಾರು 26,000 ಕುಟುಂಬಗಳ ಜೀವನೋಪಾಯವನ್ನು ಕಸಿದುಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಟಿಎಂಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ಮೋದಿ, ರಾಜ್ಯದ ಯುವಜನತೆ ದೊಡ್ಡ ಬೆಲೆ ತೆರಬೇಕಾಯಿತು ಎಂದು ಆರೋಪಿಸಿದ್ದಾರೆ.

ಮಾಲ್ಡಾದಲ್ಲಿ ಚುನಾವಣೆ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಟಿಎಂಸಿ ನಾಯಕರಿಗೆ ಲಂಚ ನೀಡಲು ಸಾಲ ಪಡೆದ ಆಕಾಂಕ್ಷಿಗಳು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಟಿಎಂಸಿ ಹಗರಣದಲ್ಲಿ ತೊಡಗಿಸಿಕೊಂಡಿದೆ. ರಾಜ್ಯದ ಯುವಜನತೆಯ ಭವಿಷ್ಯದೊಂದಿಗೆ ಆಟವಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಟಿಎಂಸಿ ಅಧಿಕಾರದಲ್ಲಿ ಸಾವಿರಾರು ಕೋಟಿಯ ಹಗರಣ ಮಾತ್ರ ಅಸ್ತಿತ್ವದಲ್ಲಿದೆ. ಟಿಎಂಸಿ ತಪ್ಪಿತ್ತಸ್ಥ ಆಗಿದ್ದರೂ ಇಡೀ ರಾಜ್ಯವೇ ಬೆಲೆ ತೆರಬೇಕಾಯಿತು ಎಂದು ಅವರು ಟೀಕಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸುತ್ತಿರುವ ಕಾಂಗ್ರೆಸ್ ಹಾಗೂ ಟಿಎಂಸಿ ವಿರುದ್ಧ ತಿರುಗೇಟು ನೀಡಿರುವ ಪ್ರಧಾನಿ ಮೋದಿ, ಸಿಎಎ ಯಾವುದೇ ಪ್ರಜೆಯ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಹಾಗೂ ಟಿಎಂಸಿ ಪಕ್ಷಗಳ ನಡುವೆ ತುಷ್ಟೀಕರಣ ರಾಜಕಾರಣ ನಡೆಯುತ್ತಿದೆ. ನಿಮ್ಮ ಸಂಪತ್ತನ್ನು ಕಸಿದುಕೊಳ್ಳಲು ಕಾಂಗ್ರೆಸ್ ಬಯಸುತ್ತಿದೆ. ಆದರೆ ಇದನ್ನು ಟಿಎಂಸಿ ವಿರೋಧಿಸುತ್ತಿಲ್ಲ. ಬಾಂಗ್ಲಾದೇಶದ ನುಸುಳುಕೋರರಿಗೆ ನೆಲೆ ಒದಗಿಸಲು ರಾಜ್ಯ ಸರ್ಕಾರ ಬಯಸುತ್ತಿದೆ. ಅಂತವರಿಗೆ ಸಂಪತ್ತು ಹಂಚಿಕೆ ಕುರಿತು ಕಾಂಗ್ರೆಸ್ ಮಾತನಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT