ಘಟಾಲ: ‘ಲೋಕಸಭಾ ಚುನಾವಣೆಯಲ್ಲಿ 9 ಲಕ್ಷ ಮತಗಳನ್ನು ಪಡೆದರೆ, 9 ಲಕ್ಷ ಸಸಿಗಳನ್ನು ನೆಡುವೆ’ ಎಂದು ಬಂಗಾಳಿ ಸೂಪರ್ಸ್ಟಾರ್ ದೇವ್ ಹೇಳಿದ್ದಾರೆ.
ಘಟಾಲ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ದೇವ್ ಸ್ಪರ್ಧೆಗಿಳಿದಿದ್ದಾರೆ.
ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಮುನ್ನ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
‘ಈ ವರ್ಷ ತಾಪಮಾನದಲ್ಲಿ ದಾಖಲೆಯ ಏರಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಇಷ್ಟೊಂದು ಬಿಸಿಲು ಇರಲಿಲ್ಲ. ಆದ್ದರಿಂದ, ಸಸಿಗಳನ್ನು ನೆಡಲು ಮುಂದಾಗಿದ್ದೇನೆ. ಜನರು ಈ ನಿಟ್ಟಿನಲ್ಲಿ ಯೋಚಿಸಿ, ಕೈಜೋಡಿಸಬೇಕು’ ಎಂದಿದ್ದಾರೆ.
‘ರಕ್ತನಿಧಿ ಕೇಂದ್ರಗಳು ಸಹ ಬಿಕ್ಕಟ್ಟು ಎದುರಿಸುತ್ತಿವೆ. ರಕ್ತದಾನ ಮಾಡುವಂತೆ ಜನರನ್ನು ಒತ್ತಾಯಿಸುತ್ತೇನೆ. ರಕ್ತದಾನ ಎಂದರೆ ಅಪಾಯದಲ್ಲಿರುವವರ ಜೀವ ಉಳಿಸಿ, ಅವರಿಗೆ ಹೊಸ ಜೀವನ ನೀಡುವುದು’ ಎಂದು ದೇವ್ ಹೇಳಿದರು.
ಘಟಾಲ್ ಕ್ಷೇತ್ರದಲ್ಲಿ ಮೇ 25ರಂದು ಮತದಾನ ನಡೆಯಲಿದೆ. ಖರಗ್ಪುರ–ಸಾದರ್ ಕ್ಷೇತ್ರದ ಶಾಸಕ, ಬಂಗಾಳಿ ನಟ ಹಿರಣ್ ಚಟರ್ಜಿ ಬಿಜೆಪಿಯಿಂದ, ಕಾಂಗ್ರೆಸ್ ಬೆಂಬಲಿತ ಸಿಪಿಐ ಅಭ್ಯರ್ಥಿಯಾಗಿ ತಪನ್ ಗಂಗೂಲಿ ಸ್ಪರ್ಧಿಸುತ್ತಿದ್ದಾರೆ.