ಕೊಪ್ಪಳ: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಕೊಪ್ಪಳ ಕ್ಷೇತ್ರದಲ್ಲಿ ಗುರುವಾರ 85 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರಿಗೆ ಮನೆಮನೆ ಮತದಾನ ಆರಂಭವಾಗಿದ್ದು, ಮತ ಚಲಾಯಿಸಬೇಕಿದ್ದ ವೃದ್ಧೆಯೊಬ್ಬರು ಅದಕ್ಕೂ ಮೊದಲೇ ಮೃತಪಟ್ಟಿದ್ದಾರೆ.
ಹಕ್ಕು ಚಲಾಯಿಸುವ ಆಸೆಯಿಂದ ಕೊಪ್ಪಳ ತಾಲ್ಲೂಕಿನ ಹಲಗೇರಿ ಗ್ರಾಮದ ಪಾರ್ವತಮ್ಮ ಸಜ್ಜನ (95) ಹೆಸರು ನೋಂದಾಯಿಸಿದ್ದರು. ಅದೇ ಗ್ರಾಮದಲ್ಲಿ ಬೇರೊಬ್ಬ ಹಿರಿಯ ನಾಗರಿಕರಿಂದ ಮತ ಹಾಕಿಸಿಕೊಂಡು ಚುನಾವಣಾ ಸಿಬ್ಬಂದಿ ಪಾರ್ವತಮ್ಮ ಅವರ ಮನೆಗೆ ಬರಬೇಕಾಗಿತ್ತು. ಇದಕ್ಕೂ ಕೆಲ ಹೊತ್ತಿನ ಮೊದಲು ವೃದ್ಧೆ ನಿಧನರಾದರು.
‘ಚುನಾವಣಾ ಅಧಿಕಾರಿಗಳು ನಮ್ಮ ಅಜ್ಜಿಯಿಂದ ಮತ ಹಾಕಿಸಿಕೊಳ್ಳಲು ಬರುತ್ತಾರೆಂದು ಟೇಬಲ್ ಜೋಡಿಸಿ ಸಿದ್ಧತೆ ಮಾಡಿಟ್ಟುಕೊಂಡಿದ್ದೆ. ಆದಕ್ಕೂ ಮೊದಲೇ ಅಜ್ಜಿ ಮೃತಪಟ್ಟಿದ್ದಾರೆ. ಮತದಾನ ಮಾಡುವ ಆಸೆಯಿದ್ದರೂ ಈಡೇರಲಿಲ್ಲ’ ಎಂದು ವೃದ್ಧೆಯ ಸಂಬಂಧಿ ಮುದಿಬಸಪ್ಪ ಸಜ್ಜನ ತಿಳಿಸಿದರು.