ಕೊರಟಗೆರೆ (ತುಮಕೂರು): ‘ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಏನಾದರೂ ಸೋತರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಗೆ ಮುಖ ತೋರಿಸಲಿ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕೇಳಿದರು.
ಪಟ್ಟಣದಲ್ಲಿ ಸೋಮವಾರ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಸೋಮಣ್ಣ ಸೋತರೆ ಮೋದಿ ಮುಂದೆ ನಿಂತು ಕಾವೇರಿ ನೀರಿನ ಬಗ್ಗೆ ಅನ್ಯಾಯ ಸರಿಪಡಿಸಿ ಎಂದು ಕೇಳುವ ಯೋಗ್ಯತೆ ನನಗೆ ಇರಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.
‘ರಾಜ್ಯ ಕಾಂಗ್ರೆಸ್ ಸರ್ಕಾರ ಕಾವೇರಿ ನದಿ ನೀರನ್ನು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ಗೆ ಒತ್ತೆ ಇಟ್ಟಿದೆ. ಇದರ ವಿರುದ್ಧ ಹೋರಾಟ ಮಾಡಲು ನಮಗೆ ಶಕ್ತಿ ಬೇಕಿದೆ. ಕಾವೇರಿ ವಿಚಾರದಲ್ಲಿ ನಾನು ಮೋದಿ ಅವರನ್ನು ನಂಬಿದ್ದೇನೆ’ ಎಂದರು.
‘ದೇವೇಗೌಡರಿಗೆ 91 ವರ್ಷ ವಯಸ್ಸಾಯ್ತು ಅನ್ನೋ ಭಾವನೆ ಇಟ್ಟುಕೊಳ್ಳಬೇಡಿ. ಮತ್ತೆ ಕಾವೇರಿ ನೀರಿಗಾಗಿ ಹೋರಾಟ ಆರಂಭಿಸುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಿಳೆಯರ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಕೀಳಾಗಿ ಮಾತನಾಡಿಲ್ಲ. ಇದೆಲ್ಲ ಕಾಂಗ್ರೆಸ್ನವರ ಚಿತಾವಣೆ ಎಂದು ತಾಲ್ಲೂಕಿನ ಊರ್ಡಿಗೆರೆಯಲ್ಲಿ ಪ್ರಚಾರ ಸಭೆಯಲ್ಲಿ ಸ್ಪಷ್ಟಪಡಿಸಿದರು.