ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸೇರ ಬಯಸಿದ್ದ ಜಯರಾಜನ್‌: ಸಿಪಿಎಂಗೆ ಮುಜುಗರ ತಂದ ಆರೋಪ

Published 26 ಏಪ್ರಿಲ್ 2024, 15:21 IST
Last Updated 26 ಏಪ್ರಿಲ್ 2024, 15:21 IST
ಅಕ್ಷರ ಗಾತ್ರ

ಕಣ್ಣೂರು/ಆಲಪ್ಪುಳ: ಸಿಪಿಎಂನ ಹಿರಿಯ ಮುಖಂಡ ಇ.ಪಿ. ಜಯರಾಜನ್‌ ಅವರು ಬಿಜೆಪಿಗೆ ಸೇರಲು ಬಯಸಿದ್ದರು ಎಂಬ ಆರೋಪ ಕೇಳಿ ಬಂದ ಕಾರಣ, ಲೋಕಸಭಾ ಚುನಾವಣೆಯ ಮತದಾನ ದಿನದಂದು ಕೇರಳದ ಆಡಳಿತಾರೂಢ ಪಕ್ಷವು ತೀವ್ರ ಮುಜುಗರಕ್ಕೆ ಒಳಗಾಗಿತ್ತು ಎಂದು ಮೂಲಗಳು ತಿಳಿಸಿವೆ.

ಜಯರಾಜನ್‌ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಪ್ರಯತ್ನ ನಡೆದಿತ್ತು ಎಂಬುದನ್ನು ಬಿಜೆಪಿ ನಾಯಕಿ ಶೋಭಾ ಸುರೇಂದ್ರನ್‌ ಅವರು ಎರಡು ದಿನಗಳ ಹಿಂದೆ ಬಹಿರಂಗಪಡಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ‘ಶಿವ ದೇವರು ಪಾಪಿಯ ಜೊತೆಗೆ ಸೇರಿದರೆ, ಶಿವನೂ ಪಾಪಿಯಾಗುತ್ತಾನೆ’ ಎಂದು ಹೇಳಿದ್ದಾರೆ. ಜಯರಾಜನ್‌ ಅವರು ಸದ್ಯ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಮೈತ್ರಿಕೂಟದ ಸಂಚಾಲಕರಾಗಿದ್ದಾರೆ.

ಬಿಜೆಪಿ ಮತ್ತು ಜಯರಾಜನ್‌ ಅವರ ನಡುವೆ ಟಿ.ಜಿ. ನಂದಕುಮಾರ್‌ ಅವರು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದರು ಎಂದೂ ಆರೋಪಿಸಲಾಗಿತ್ತು.

‘ನಮ್ಮ ದೇಶದ ಕೆಲವು ಜನರು ಪ್ರತಿದಿನ ಏಳುವಾಗಲೇ, ಯಾರಿಗೆ ಮೋಸ ಮಾಡಲಿ ಎಂದು ಆಲೋಚಿಸುತ್ತಿರುತ್ತಾರೆ’ ಎಂದು ಪಿಣರಾಯಿ ಅವರು, ನಂದಕುಮಾರ್‌ ಹೆಸರು ಉಲ್ಲೇಖಿಸದೆ ಟೀಕಿಸಿದ್ದಾರೆ‌.

‘ದಶಕಗಳ ರಾಜಕೀಯ ಪಯಣದಲ್ಲಿ ಜಯರಾಜನ್‌ ಅವರು ಹಲವಾರು ಅಡತಡೆಗಳನ್ನು ಎದುರಿಸಿದ್ದಾರೆ. ಈಗ ನಡೆಯುತ್ತಿರುವ ದಾಳಿ ಕೇವಲ ಅವರ ವಿರುದ್ಧವಲ್ಲ. ಸಿಪಿಎಂ ಮತ್ತು ಎಲ್‌ಡಿಎಫ್‌ ಅನ್ನೂ ಗುರಿಯಾಗಿಸಲಾಗಿದೆ’ ಎಂದಿದ್ದಾರೆ. ‘ಇಂತಹ ಅಪಪ್ರಚಾರಗಳನ್ನು ರಾಜ್ಯದ ಜನರು ನಂಬುವುದಿಲ್ಲ’ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಯರಾಜನ್‌ ಅವರು ಬಿಜೆಪಿ ಮುಖಂಡ ಪ್ರಕಾಶ್‌ ಜಾವಡೇಕರ್‌ ಅವರನ್ನು ಭೇಟಿಯಾಗಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಎಂ.ವಿ. ಗೋವಿಂದನ್‌, ‘ಜನರು ಯಾರನ್ನಾದರೂ ಭೇಟಿಯಾಗಬಹುದು. ಈ ಕುರಿತು ವಿವಾದ ಮಾಡುತ್ತಿರುವುದರ ಹಿಂದೆ ರಾಜಕೀಯ ಷಡ್ಯಂತ್ರವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT