ಹುಲಿಮನೆ ಸೀತಾರಾಮ ಶಾಸ್ತ್ರಿ ಅವರ ಯಶೋಗಾಥೆಗೆ ಮೂಲಶಕ್ತಿಯಾಗಿ ಪ್ರೇರಣೆ ನೀಡಿದ್ದು ಛಲ ಒಂದೇ ಎನ್ನುವುದನ್ನು ಈ ಆತ್ಮಕಥನ ನಿರೂಪಿಸುತ್ತದೆ. ಇದು 1975ರಲ್ಲಿ ‘ಸುಧಾ’ ಪತ್ರಿಕೆಯಲ್ಲಿ ಧಾರಾವಾಹಿಯ ರೂಪದಲ್ಲಿ 18 ವಾರ ಪ್ರಕಟವಾಗಿದೆ. ಆತ್ಮಕಥೆ ಆಗಿದ್ದರೂ ವೈಯಕ್ತಿಕ ವಿವರಕ್ಕಿಂತ ರಂಗ ಚರಿತ್ರೆಯನ್ನೇ ಹೇಳುತ್ತದೆ. ಬಾಲ್ಯದಲ್ಲಿ ಹೆಗಡೆ ಆಗಿದ್ದ ಸೀತಾರಾಮ ಅವರು ಶಾಸ್ತ್ರಿ ಆಗಿ ಬದಲಾದ ಸನ್ನಿವೇಶಗಳು ರೋಚಕ ಅನ್ನಿಸಿದರೂ ಅವರು ಎದುರಿಸಿದ ಅಗ್ನಿಪರೀಕ್ಷೆಯನ್ನೂ ಇಲ್ಲಿ ಕಾಣಬಹುದು. ಸೀತಾರಾಮ ಅವರ ರಂಗ ಪ್ರೇಮದ ಬೀಜ ಎಮ್ಮೆ ಮೇಯಿಸುವ ಗುಡ್ಡದಲ್ಲಿ ಮೊಳಕೆಯೊಡೆದಿದ್ದು ಸೋಜಿಗ. ಶಾಸ್ತ್ರಿ ಪ್ರಾಥಮಿಕ ಶಾಲೆಗೆ ಓದನ್ನು ನಿಲ್ಲಿಸಿ ಎಮ್ಮೆ ಮೇಯಿಸಲು ಆರಂಭಿಸುತ್ತಾರೆ. ಅವರಿಗಿದ್ದ ನಟನೆಯ ಹುಚ್ಚು ಬೀಡಿಯ ಚಟ ಮನೆಯನ್ನು ಬಿಡಿಸುತ್ತದೆ. ಅದು ಅವರ ಬದುಕಿನ ಮತ್ತೊಂದು ಮಗ್ಗಲಿಗೆ ಹೊರಳಿಸುತ್ತದೆ. ಸಂಸ್ಕೃತ ಪಂಡಿತ, ಭಾಷಾಂತರಕಾರ, ನಾಟಕಕಾರ, ರಂಗ ಸಂಘಟಕರಾಗಿ ಪ್ರಸಿದ್ಧಿಗೆ ಬರುತ್ತಾರೆ.