ನಗರದ ಕೆ.ಎಚ್. ರಸ್ತೆ ಹಿಂಭಾಗದ ಶ್ರೀನಿವಾಸ ಕಾಲೊನಿಯಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ರಾಜಕಾಲುವೆ ದುರಸ್ತಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳೀಯ ನಿವಾಸಿಗಳನ್ನು ಸಂಕಷ್ಟಕ್ಕೆ ದೂಡಿದೆ. ಮೂರು ತಿಂಗಳ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿ ಭರವಸೆ ನೀಡಿತ್ತು. ಮೂರು ತಿಂಗಳ ಬಳಿಕವೂ ಕಾಮಗಾರಿಯಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ. ರಾಜಕಾಲುವೆಯಲ್ಲಿದ್ದ ಹೂಳನ್ನು ರಸ್ತೆ ಮೇಲೆಯೇ ಹಾಕಲಾಗಿದೆ.
ಇದರಿಂದಾಗಿ ನಿವಾಸಿಗಳು ಮೂಗು ಮುಚ್ಚಿಕೊಂಡು ತಿರುಗಾಡಬೇಕಿದೆ. ಇನ್ನೊಂದೆಡೆ, ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಸಂಕಷ್ಟವನ್ನು ದುಪ್ಪಟ್ಟುಗೊಳಿಸಿದೆ. 10 ನಿಮಿಷದ ಮಳೆಯಾದರೂ ಮನೆಗೆ ನೀರು ನುಗ್ಗುತ್ತಿದೆ.
‘ಕಾಮಗಾರಿಯ ವೇಗ ನೋಡಿದರೆ ಪೂರ್ಣಗೊಳ್ಳಲು ಇನ್ನೂ ಆರು ತಿಂಗಳು ಬೇಕು ಎನಿಸುತ್ತದೆ. ನಾಲ್ಕು ಮಳೆಗೆ ಬದುಕು ಸಾಕಾಗಿದೆ. ಮಳೆಗಾಲದ ಸ್ಥಿತಿ ಎಣಿಸುವಾಗ ಕಣ್ಣೀರು ಬರುತ್ತದೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ನೊಂದು ನುಡಿಯುತ್ತಾರೆ.