ಮುಳಬಾಗಿಲು: ತಾಲ್ಲೂಕಿನ ಆವಣಿ ಹಾಗೂ ಆಲಂಗೂರು ಜಿಲ್ಲಾ ಪಂಚಾಯಿತಿ ಕೇಂದ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಪರವಾಗಿ ಚುನಾವಣಾ ಪ್ರಚಾರ ನಡೆಯಿತು.
ಈ ವೇಳೆ ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಕಾಂಗ್ರೆಸ್ ಪಕ್ಷದವರಿಗೆ ದಲಿತರು ಹಾಗೂ ಮುಸಲ್ಮಾನರೇ ಗಟ್ಟಿ. ಚುನಾವಣಾ ಸಮಯದಲ್ಲಿ ದಲಿತ ಮತ್ತು ಮುಸ್ಲಿಂರನ್ನು ಗಿರವಿ ಇಟ್ಟು, ಚುನಾವಣೆ ನಂತರ ಬಿಡಿಸಿಕೊಂಡು ಬರುತ್ತಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ನೇತೃತ್ವ ವಹಿಸಿದ್ದು, ಹೆಚ್ಚು ಸ್ಥಾನಗಳನ್ನು ಗೆಲ್ಲದೆ ಇದ್ದರೆ ಅವರ ಸ್ಥಾನಕ್ಕೆ ಕುತ್ತು ಬರಲಿದೆ. ಹಾಗಾಗಿ ಹೆಚ್ಚು ದಲಿತ ಹಾಗೂ ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿಯಲ್ಲಿಯೂ ಮುಸ್ಲಿಂ ಹಾಗೂ ದಲಿತರಿಗೆ ಅವಕಾಶ ನೀಡಿಲ್ಲವೆ ಎಂದು ಪ್ರಶ್ನಿಸಿದರು.
ಇನ್ನು ಎಚ್.ಡಿ.ಕುಮಾರಸ್ವಾಮಿ ಅವರು ಮುಂದೆ ಪಾಕಿಸ್ತಾನಲ್ಲಿ ಹೋಗಿ ಚುನಾವಣೆಗೆ ನಿಲ್ಲಬಹುದು ಎಂಬ ಕಾಂಗ್ರೆಸ್ ಟೀಕೆಗೆ, ಎಚ್.ಡಿ.ಕುಮಾರಸ್ವಾಮಿ ಅವರು ಅಂತರರಾಷ್ಟ್ರೀಯ ನಾಯಕರಾಗಿದ್ದು ಅವಶ್ಯಕತೆ ಇದ್ದರೆ ಪಾಕಿಸ್ತಾನ್ ಹಾಗೂ ಅಫ್ಘಾನಿಸ್ತಾನಕ್ಕೆ ಹೋಗಿ ಅಲ್ಲಿನ ಜನರ ಮನಸು ಬದಲಾವಣೆ ಮಾಡಲಿದ್ದಾರೆ ಎಂದು ತಿರುಗೇಟು ನೀಡಿದರು.
ಅಭ್ಯರ್ಥಿ ಮಲ್ಲೇಶ್ ಬಾಬು ಮಾತನಾಡಿ, ನರೇಂದ್ರ ಮೋದಿಯವರು 400 ಸ್ಥಾನ ಗೆಲ್ಲುವ ಸಂಕಲ್ಪ ಮಾಡಿದ್ದು, 400ರಲ್ಲಿ ನನ್ನದೂ ಸ್ಥಾನ ಇರಲಿ. ಸ್ಥಳೀಯ ಅಭ್ಯರ್ಥಿ ನನ್ನನ್ನು ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿಗೆ ಜನರ ಕೈಗೆ ಸಿಗುತ್ತೇನೆ ಎಂದು ಹೇಳಿದರು.