ಕಣ್ಣೂರು: ಉತ್ತರ ಕೇರಳದಲ್ಲಿ 92 ವರ್ಷದ ವೃದ್ಧೆಯೊಬ್ಬರು ಮತದಾನ ಮಾಡುವ ಸಂದರ್ಭದಲ್ಲಿ ಹೊರಗಿನವರು ಮಧ್ಯಪ್ರವೇಶ ಮಾಡಲು ಅವಕಾಶ ನೀಡಿದರು ಎನ್ನುವ ಆರೋಪದ ಮೇರೆಗೆ ನಾಲ್ವರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಕಾಸರಗೋಡು ಲೋಕಸಭಾ ವ್ಯಾಪ್ತಿಗೆ ಬರುವ ಕಲ್ಯಾಶ್ಯೇರಿ ಎಂಬಲ್ಲಿ ನಡೆದ ಘಟನೆ ಸಂಬಂಧ ಮತಗಟ್ಟೆ ಅಧಿಕಾರಿ, ಮತದಾನ ಸಹಾಯಕ, ವಿಶೇಷ ಪೊಲೀಸ್ ಅಧಿಕಾರಿ ಮತ್ತು ವಿಡಿಯೊಗ್ರಾಫರ್ ಅವರನ್ನು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಅಮಾನತುಗೊಳಿಸಿದ್ದಾರೆ.
ಮತದಾನದ ಸಲುವಾಗಿ ದೇವಿ ಎನ್ನುವ ವೃದ್ಧೆಯ ಮನೆಯಲ್ಲಿ ಏಪ್ರಿಲ್ 18ರಂದು ಮತಗಟ್ಟೆ ಸಜ್ಜುಗೊಳಿಸಲಾಗಿತ್ತು. ಮತದಾನ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡಿದ ಆರೋಪದ ಮೇರೆಗೆ ಗಣೇಶನ್ ಎನ್ನುವವರನ್ನು ವಿಚಾರಣೆ ನಡೆಸುವಂತೆಯೂ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ದೇವಿ ಅವರು ಮತದಾನ ಮಾಡುವಾಗ ಗಣೇಶನ್ ಮಧ್ಯಪ್ರವೇಶ ಮಾಡಿರುವ ವಿಡಿಯೊವನ್ನು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು.