ಬುಧವಾರ, 2 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | ಜಿಲ್ಲಾಡಳಿತ ನಿರ್ಲಕ್ಷ್ಯ; ತಲೆ ಎತ್ತದ ‘ಗಾಂಧಿ ಭವನ’

ಕಾಲುವೆಯಲ್ಲಿ ಅಡಿಪಾಯ ಹಾಕಿ ಎಡವಟ್ಟು–ತಡೆಯಾಜ್ಞೆ ತೆರವಿಲ್ಲ, ಪರ್ಯಾಯ ಜಾಗ ಹುಡುಕಿಲ್ಲ!
Published : 2 ಅಕ್ಟೋಬರ್ 2024, 5:55 IST
Last Updated : 2 ಅಕ್ಟೋಬರ್ 2024, 5:55 IST
ಫಾಲೋ ಮಾಡಿ
Comments

ಕೋಲಾರ: ಈ ಬಾರಿ ಗಾಂಧಿ ತಾತನ ಜಯಂತಿಯನ್ನು ವಿನೂತನವಾಗಿ ಆಚರಿಸಲು ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ನಡೆಸಿದೆ. ಆದರೆ, ಜಿಲ್ಲೆಯಲ್ಲಿ ‘ಗಾಂಧಿ ಭವನ’ ನಿರ್ಮಾಣಕ್ಕೆ ₹3 ಕೋಟಿ ಅನುದಾನ ಬಿಡುಗಡೆ ಮಾಡಿ 9 ವರ್ಷಗಳಾಗಿದ್ದರೂ ಜಿಲ್ಲಾಡಳಿತದ ಉದಾಸೀನ, ನಿರ್ಲಕ್ಷ್ಯ ಮನೋಭಾವದಿಂದಾಗಿ ಮೂಲೆಗುಂಪಾಗಿದೆ.

ಮೂರು ವರ್ಷಗಳ ಹಿಂದೆ ಕೋಲಾರಮ್ಮ ಕೆರೆ ಬಳಿ ಕೆರೆ ಕೋಡಿ ಕಾಲುವೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿ ಅಧಿಕಾರಿಗಳು ಎಡವಟ್ಟು ಮಾಡಿದ್ದರು. ಅಡಿಪಾಯ ಹಾಕಿದ್ದು, ನ್ಯಾಯಾಲಯದಿಂದ ತಡೆಯಾಜ್ಞೆ ಸಿಕ್ಕಿದೆ. ಆನಂತರ ಬೇರೆ ಸ್ಥಳ ಹುಡುಕುವ ಗೋಜಿಗೆ ಜಿಲ್ಲಾಡಳಿತ ಕೈಹಾಕಿಲ್ಲ.

ಸಿದ್ದರಾಮಯ್ಯ ಅವರು ಮೊದಲು ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಗೊಂದು ಗಾಂಧಿ ಭವನ ನಿರ್ಮಾಣಕ್ಕೆಂದು 2016ರಲ್ಲೇ ಆದೇಶ ಮಾಡಿದ್ದರು. ನಂತರ ₹3 ಕೋಟಿ ಅನುದಾನವೂ ಬಿಡುಗಡೆಯಾಗಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಜವಾಬ್ದಾರಿ ನೀಡಿ, ಕಟ್ಟಡ ನಿರ್ಮಿಸಲು ನಿರ್ಮಿತಿ ಕೇಂದ್ರಕ್ಕೆ ಒಪ್ಪಿಸಲಾಗಿತ್ತು.

ಅಂದಿನ ಜಿಲ್ಲಾಧಿಕಾರಿಯ ಸೂಚನೆ ಮೇರೆಗೆ ತಹಶೀಲ್ದಾರ್‌ ಜಾಗ ಗುರುತಿಸಿದ್ದರು. ಅದನ್ನು ಬಿಟ್ಟು ಮಣಿಘಟ್ಟ ರಸ್ತೆಯ ಬಳಿಯ ಕಾಲುವೆಯಲ್ಲಿ ಭವನ ನಿರ್ಮಾಣಕ್ಕೆ ಮುಂದಾದರು. ಇದಕ್ಕೆ ಪರಿಸರವಾದಿಗಳು ಹಾಗೂ ಹೋರಾಟಗಾರರ ಭಾರಿ ವಿರೋಧ ವ್ಯಕ್ತಪಡಿಸಿದ್ದರು.

‘ಕಾಲುವೆಯ ಬಫರ್‌ ಜೋನ್‌ ಪ್ರದೇಶದ ಜಾಗ ಒತ್ತುವರಿ ಮಾಡಿಕೊಂಡು ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ’ ಎಂದು ದೂರಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಕೂಡ ತಂದಿದ್ದರು.

ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌.ನಾಗೇಶ್‌ ಆದೇಶಕ್ಕೂ ಮುನ್ನವೇ ಅಂದರೆ 2021ರ ಜನವರಿ 8ರಂದು ಭೂಮಿಪೂಜೆ ನೆರವೇರಿಸಿದ್ದರು. ನಿರ್ಮಿತಿ ಕೇಂದ್ರದಿಂದ ಅಡಿಪಾಯ, ಕಂಬ, ಕಾಂಪೌಂಡ್‌ ನಿರ್ಮಿಸಿಯೂ ಆಗಿತ್ತು. ಈ ಕಾಮಗಾರಿಗೆ ₹70 ಲಕ್ಷ ವೆಚ್ಚವಾಗಿದೆಯೆಂದು ಹೇಳುತ್ತಿದ್ದಾರೆ. ಆದರೆ, ಸಾರ್ವಜನಿಕರು, ಹೋರಾಟಗಾರರು ಹೇಳುವ ಪ್ರಕಾರ ಅಷ್ಟೇನೂ ಖರ್ಚಾಗಿಲ್ಲ. ₹15ರಿಂದ ₹20 ಲಕ್ಷ ಖರ್ಚು ಮಾಡಿ ಹೆಚ್ಚಿನ ಲೆಕ್ಕ ‌ತೋರಿಸುತ್ತಿದ್ದಾರೆ ಎಂದು ದೂರುತ್ತಾರೆ. ಅಲ್ಲೂ ಅವ್ಯವಹಾರದ ವಾಸನೆ ಬರುತ್ತಿದೆ.

ಅಡಿಪಾಯ ಹಾಕಿರುವ ಜಾಗದಲ್ಲಿ ಈಗ ಪೊದೆ ನಿರ್ಮಾಣವಾಗಿದ್ದು, ಗಿಡ ಬೆಳೆದಿದೆ. ಕಂಬಕ್ಕೆ ಹಾಕಿದ್ದ ಕಬ್ಬಿಣದ ಸಲಾಕೆಗಳನ್ನು ಕೆಲವರು ಕಿತ್ತುಕೊಂಡು ಹೋಗಿದ್ದಾರೆ. ಆದರೆ, ಕಟ್ಟಡ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ನಿರ್ಮಿತಿ ಕೇಂದ್ರ ಜಾಗ ಸಂಬಂಧ ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಲು ಪಯತ್ನವನ್ನೂ ನಡೆಸಿಲ್ಲ. ಇತ್ತ ಜಿಲ್ಲಾಡಳಿತವು ಪರ್ಯಾಯ ಜಾಗ ಕಂಡುಕೊಳ್ಳುವ ಪ್ರಯತ್ನವನ್ನೂ ಹಾಕಿಲ್ಲ.

ಈ ಜಾಗವು ಬಫರ್‌ ಜೋನ್‌ ಪ್ರದೇಶದಲ್ಲಿ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ನಿರ್ಮಿತಿ ಕೇಂದ್ರವು ಸಣ್ಣ ನೀರಾವರಿ ಇಲಾಖೆ ಹಾಗೂ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿತ್ತು. ಈ ಸಂಬಂಧ ಯಾವುದೇ ಪ್ರಕ್ರಿಯೆ ಈವರೆಗೆ ನಡೆದಿಲ್ಲ.

ಆರಂಭದಲ್ಲಿ ಕಟ್ಟಡ ನಿರ್ಮಾಣ ಸಂಬಂಧ ಭೂಸೇನಾ ನಿಗಮದವರು (ಕೆಆರ್‌ಐಡಿಎಲ್‌) ಮೂರು ವರ್ಷ ವಿಳಂಬ ಮಾಡಿದ್ದರು. ಬಳಿಕ ನಿರ್ಮಿತಿ ಕೇಂದ್ರಕ್ಕೆ ನೀಡಲಾಯಿತು. 30 ಗುಂಟೆ ಜಾಗದಲ್ಲಿ ₹ 2 ಕೋಟಿ ವೆಚ್ಚದಲ್ಲಿ ಕಟ್ಟಡ, ₹ 1 ಕೋಟಿ ವೆಚ್ಚದಲ್ಲಿ ಕಾಂಪೌಂಡ್‌ ನಿರ್ಮಾಣ ಹಾಗೂ ಹೊರಾಂಗಣ ವಿನ್ಯಾಸ ಮಾಡಲು ಯೋಜನೆ ರೂಪಿಸಲಾಗಿತ್ತು.

‘ಗಾಂಧಿ ಭವನ ಬೇಗನೇ ನಿರ್ಮಿಸಬೇಕೆಂಬುದು ಇಲಾಖೆ ಉದ್ದೇಶ. ಆಯುಕ್ತರು ಕೂಡ ಆಸಕ್ತಿ ಹೊಂದಿದ್ದಾರೆ. ನಮ್ಮ ಇಲಾಖೆ ಸುಪರ್ದಿಗೆ ಬಂದ ಹಣವನ್ನು ಗಾಂಧಿ ಭವನ ನಿರ್ಮಾಣಕ್ಕೆಂದು ಜಿಲ್ಲಾಧಿಕಾರಿ ಖಾತೆಗೆ ನೀಡಿದ್ದೇವೆ. ₹70 ಲಕ್ಷ ಖರ್ಚಾಗಿದ್ದು, ಉಳಿದ ₹2.3 ಕೋಟಿ ಅವರ ಬಳಿ ಇದೆ. ಜಾಗದ ಸಮಸ್ಯೆ ಬಗೆಹರಿಸಿ ಕಟ್ಟಡ ನಿರ್ಮಿಸಿ ನಮ್ಮ ಸುಪರ್ದಿಗೆ ಒಪ್ಪಿಸಿದ ಮೇಲೆ ಗಾಂಧಿ ಭವನ ನಿರ್ವಹಣೆ ಹೊಣೆ ನಮ್ಮದು’ ಎಂದು ಜಿಲ್ಲಾ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಚೇತನ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಎಲ್ಲಾ ಜಿಲ್ಲೆಗಳಲ್ಲಿ ಏಕರೂಪದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಈಗಾಗಲೇ ಹಲವು ಜಿಲ್ಲೆಯಲ್ಲಿ ತಲೆಎತ್ತಿದೆ. ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉದ್ಘಾಟನೆಗೆ ಸಜ್ಜಾಗಿದೆ. ಕೋಲಾರ ಜಿಲ್ಲೆಯಲ್ಲಿ ಮಾತ್ರ ನಿರ್ಲಕ್ಷ್ಯ ಮುಂದುವರಿದಿದೆ.

ಗಾಂಧಿ ಭವನ ನಿರ್ಮಾಣಕ್ಕೆ ಬಿಡುಗಡೆಯಾದ ಹಣ ಡಿ.ಸಿ ಖಾತೆಯಲ್ಲಿದೆ. ಜಾಗದ ಸಮಸ್ಯೆ ಇದ್ದು ಪರ್ಯಾಯ ಜಾಗ ನೀಡಿದರೆ ಕಟ್ಟಡ ಕಟ್ಟಬಹುದು. ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ಒಪ್ಪಿಸಲಾಗಿದೆ
ಚೇತನ್ ಕುಮಾರ್‌ ಹಿರಿಯ ಸಹಾಯಕ ನಿರ್ದೇಶಕ ವಾರ್ತಾ ಇಲಾಖೆ ಕೋಲಾರ

ಕಾಲುವೆಯಲ್ಲಿ ನಿರ್ಮಾಣ

ಆಲೋಚನೆ ಹೊಳೆದಿದ್ದು ಯಾರಿಗೆ? ಕಾಲುವೆ ಇರುವುದು ಕೋಲಾರಮ್ಮ ಕೆರೆ ತುಂಬಿದಾಗ ಕೋಡಿ ಹರಿಯಲು. ಆದರೆ ಅಲ್ಲೇ ಹೋಗಿ ಗಾಂಧಿ ಭವನ ಕಟ್ಟಡ ನಿರ್ಮಿಸುವ ಆಲೋಚನೆ ಅಧಿಕಾರಿಗಳಿಗೆ ಹೊಳೆದಿದ್ದು ಹೇಗೆ? ನೀರು ಹರಿಯುವ ಜಾಗದಲ್ಲಿ ಕಟ್ಟಡಲು ನಿರ್ಮಾಣಕ್ಕೆ ಮುಂದಾಗುತ್ತಾರೆ ಎಂದರೆ ಏನು ಹೇಳುವುದು ಎಂಬುದು ಸಾರ್ವಜನಿಕರ ಪ್ರಶ್ನೆ. ‘ಇದೊಂದು ವೈಜ್ಞಾನಿಕ ನಿರ್ಧಾರ. ಕೆರೆ ಕೋಡಿಯ ಬಫರ್‌ ಜೋನ್‌ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲು ಮುಂದಾಗಿದ್ದೇ ದೊಡ್ಡ ತಪ್ಪು. ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ ಇದ್ದು ಅಧಿಕಾರಿಗಳ ಎಡವಟ್ಟಿನಿಂದ ಜನರ ತೆರಿಗೆ ಹಣ ದುರ್ಬಳಕೆ ಆಗಿದೆ’ ಎಂದು ಹೋರಾಟಗಾರರು ದೂರುತ್ತಾರೆ.

ಸ್ಥಳ ವೀಕ್ಷಿಸುವುದಾಗಿ ಹೇಳಿದ್ದ ಉಸ್ತುವಾರಿ

ಗಾಂಧಿ ಭವನ ಕಟ್ಟಡ ನಿರ್ಮಾಣಕ್ಕೆ ಹಿಡಿದಿರುವ ಗ್ರಹಣ ಯಾವಾಗ ಬಿಡುತ್ತದೆ ಸ್ಥಳದ ವಿವಾದದ ಅರಿವು ಇದೆಯೇ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಅವರನ್ನು ಸ್ವಾತಂತ್ರ್ಯ ದಿನಾಚರಣೆಯಂದು ಪ್ರಶ್ನಿಸಲಾಗಿತ್ತು. ಆಗ ಅವರು ‘ಈ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಸದ್ಯದಲ್ಲೇ ಸ್ಥಳಕ್ಕೆ ಹೋಗಿ ವೀಕ್ಷಣೆ ಮಾಡುತ್ತೇನೆ. ಜಾಗದ ಸಮಸ್ಯೆ ಇದ್ದರೆ ಪರ್ಯಾಯ ಜಾಗ ಕಂಡುಕೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸುತ್ತೇನೆ’ ಎಂದಿದ್ದರು. ಆದರೆ ಈವರೆಗೆ ಸ್ಥಳ ವೀಕ್ಷಣೆಯಾಗಲಿ ಈ ಸಂಬಂಧ ಪ್ರಕ್ರಿಯೆಯಾಗಲಿ ಪ್ರಗತಿಯಾಗಲಿ ನಡೆದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT