ಕನಕಪುರ: ರೋಟರಿ ಕನಕಪುರ ಮಿಲ್ಕ್ ಸಿಟಿ ಮತ್ತು ರೋಟರಿ ಮೇಕೆದಾಟು ಸಂಗಮ ವತಿಯಿಂದ ಮಂಗಳವಾರ ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆ ನಡೆಯಿತು.
ಈ ವೇಳೆ ರೊಟೇರಿಯನ್ ಶಿವಕುಮಾರ್ ಮಾತನಾಡಿ, ವೈದ್ಯರು ಎಂದರೆ ಎರಡನೇ ದೇವರೆನ್ನುತ್ತಾರೆ. ಅದು ಸತ್ಯವು ಹೌದು. ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಕೋವಿಡ್ಗೆ ತುತ್ತಾದವರ ಪ್ರಾಣ ಉಳಿಸಿದ್ದಾರೆ ಎಂದರು.
ಮಹಿಳಾ ವೈದ್ಯರು, ಪ್ರಸೂತಿ ತಜ್ಞರು ಹಗಲು ರಾತ್ರಿ ಎನ್ನದೆ ಯಾವುದೇ ಸಮಯವಾದರೂ ಸುಸೂತ್ರವಾಗಿ ಹೆರಿಗೆ ಮಾಡಿಸುವ ಮೂಲಕ ತಾಯಿಗೆ ಪುನರ್ ಜನ್ಮ ನೀಡುತ್ತಿದ್ದಾರೆ ಎಂದರು.
ರೋಟರಿ ಅಧ್ಯಕ್ಷ ಸಂದೀಪ್ ದವನಮ್ ಮಾತನಾಡಿ, ರೋಟರಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಮುಂದೆಯೂ ಸಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸದಾ ಸಿದ್ಧವಾಗಿದೆ ಎಂದು ತಿಳಿಸಿದರು.
ನಮ್ಮ ಮುಂದಿನ ಗುರಿ ಸಮಾಜದಲ್ಲಿ ಕ್ಷಯ ರೋಗಿಗಳನ್ನು ಗುರುತಿಸಿ ಅವರಿಗೆ ಉತ್ತಮ ಚಿಕಿತ್ಸೆ ಸೇರಿದಂತೆ ಅವಶ್ಯಕತೆ ಅನುಗುಣವಾಗಿ ಅವರ ಸೇವೆ ನೀಡಲಾಗುವುದು ಎಂದರು.
ಸಮಾಜಕ್ಕೆ ವೈದ್ಯರಷ್ಟೇ ಮುಖ್ಯವಾದದ್ದು, ಮಾಧ್ಯಮ. ಸಮಾಜದಲ್ಲಿ ನಾಲ್ಕನೇ ಅಂಗವಾಗಿ ಮಾಧ್ಯಮ ಕೆಲಸ ಮಾಡುತ್ತಿದೆ. ತಪ್ಪು ಒಪ್ಪುಗಳನ್ನು ಜನರ ಮುಂದೆ ಇಟ್ಟು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೈದ್ಯರು ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು.