ಮಾಗಡಿ: ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ಮತ್ತೊಮ್ಮೆ ಆರಂಭವಾಗಿದೆ. ಯಾವುದೇ ಕಾರಣಕ್ಕೂ ವಿರೋಧ ಮಾಡಬೇಡಿ ಎಂದು ಹಸಿರು ಸೇನೆ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮನವಿ ಮಾಡಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ತೆರಿಗೆ ಹಣದಲ್ಲಿ ಸರ್ಕಾರ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ಮಾಡುತ್ತಿದೆ. ಈ ಕಾಮಗಾರಿಗೆ ವಿರೋಧ ಮಾಡಿದರೆ ಜನರ ತೆರಿಗೆ ಹಣ ನಷ್ಟವಾಗುತ್ತದೆ. ರಾಜಕೀಯ ಲಾಭ ಪಡೆಯಲು ತುಮಕೂರಿನಲ್ಲಿ ಈ ಹೋರಾಟವನ್ನು ಸಾರ್ವಜನಿಕರಲ್ಲಿ ಭಿನ್ನಾಭಿಪ್ರಾಯ ಮೂಡುವ ರೀತಿಯಲ್ಲಿ ಅಲ್ಲಿನ ಜನಪ್ರತಿನಿಧಿಗಳು ಮಾಡುತ್ತಿದ್ದಾರೆ ಎಂದರು.
’ಕಳೆದ 10 ವರ್ಷಗಳಿಂದ ನಮ್ಮ ಪಾಲಿನ ನೀರನ್ನೇ ತುಮಕೂರು ಜಿಲ್ಲೆ ಜನರು ಬಳಕೆ ಮಾಡುತ್ತಿದ್ದಾರೆ. ನಮಗೆ ಮಂಜೂರಾಗಿರುವ ನೀರಿನಲ್ಲಿ ಒಂದು ಹನಿ ಕೂಡ ಹೆಚ್ಚುವರಿ ಕೇಳುತ್ತಿಲ್ಲ. ನಮ್ಮ ಭಾಗದ ಜನಗಳಿಗೆ ಕುಡಿಯುವ ನೀರಿಗೆ ಯೋಜನೆ ಮಾಡಿದರೆ ಅದನ್ನು ವಿರೋಧ ಮಾಡುವುದು ಸರಿಯಲ್ಲ’ ಎಂದರು.
ದಲಿತ ಮುಖಂಡ ಮಾಡಬಾಳ್ ಜಯರಾಂ ಮಾತನಾಡಿ, ಹಲವು ವರ್ಷಗಳ ಹೋರಾಟದ ಫಲವಾಗಿ ತಾಲ್ಲೂಕಿಗೆ ಹೇಮಾವತಿ ನೀರು ಬರುತ್ತಿದೆ. ಈಗ ಆ ಭಾಗದ ಜನರು ವಿರೋಧ ಮಾಡುವುದು ಸರಿಯಲ್ಲ ಎಂದರು.
ರೈತ ಸಂಘದ ತಾಲ್ಲೂಕು ಯುವ ಘಟಕದ ಅಧ್ಯಕ್ಷ ರವಿಕುಮಾರ್, ಶಿವಲಿಂಗಯ್ಯ, ಹನುಮಂತಯ್ಯ, ರಾಮಣ್ಣ, ಬುಡನ್ಸಾಬ್, ನಾರಾಯಣಪ್ಪ, ಕೃಷ್ಣಪ್ಪ, ಸಿದ್ದಪ್ಪ, ವೆಂಕಟೇಶ್, ಕರಿಯಪ್ಪ, ನಿಂಗಣ್ಣ, ಚಂದ್ರಪ್ಪ, ನಾಗರಾಜು, ಚಿಕ್ಕಣ್ಣ ಮತ್ತಿತರರು ಭಾಗವಹಿಸಿದ್ದರು.