ಸೇನೆ– ಅತಿಕ್ರಮಣಕಾರರ ವಾಪಸಿಗೆ ಪಾಕ್ ಒಪ್ಪಿಗೆ
ವಾಷಿಂಗ್ಟನ್, ಜುಲೈ 5 (ಪಿಟಿಐ)– ಕಾರ್ಗಿಲ್ನಿಂದ ತನ್ನ ಸೇನೆ ಹಾಗೂ ಅತಿಕ್ರಮಣಕಾರರನ್ನು ವಾಪಸ್ ಕರೆಸಿಕೊಳ್ಳಲು ಹಾಗೂ 1972ರ ಶಿಮ್ಲಾ ಒಪ್ಪಂದದಂತೆ ವಾಸ್ತವ ಹತೋಟಿ ರೇಖೆಯನ್ನು ಗೌರವಿಸಲು ಪಾಕಿಸ್ತಾನ ಸಮ್ಮತಿಸುವುದರೊಂದಿಗೆ ಜಮ್ಮು–ಕಾಶ್ಮೀರದ ಗಡಿಯಲ್ಲಿ ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಸಂಘರ್ಷ ಕೊನೆಯಾಗುವ ಕಾಲ ಹತ್ತಿರವಾಗಿದೆ.
ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಭಾನುವಾರ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರನ್ನು ಭೇಟಿ ಮಾಡಿ ಮೂರು ಗಂಟೆ ನಡೆಸಿದ ಮಾತುಕತೆ ಸಮಯದಲ್ಲಿ ಸೇನೆ ವಾಪಸ್ ಕರೆಸಿಕೊಳ್ಳುವ, ವಾಸ್ತವ ಹತೋಟಿ ರೇಖೆಯನ್ನು ಗೌರವಿಸುವ ಸುಳಿವು ನೀಡಿದರು ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದರು.
***
ಎಡದಂಡೆ ನಾಲೆ: ಆಗಸ್ಟ್ನಲ್ಲಿ ನೀರು ಬಿಡುಗಡೆ ಭರವಸೆ
ಬೆಂಗಳೂರು, ಜುಲೈ 5– ಪದೇ ಪದೇ ಬಿರುಕು ಬಿಟ್ಟು ರೈತರಿಗೆ ತೊಂದರೆಯಾಗುತ್ತಿರುವ ತುಂಗಭದ್ರಾ ಎಡದಂಡೆ ನಾಲೆಯ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿ ಆಗಸ್ಟ್ 1ರಂದು ನಾಲೆಯಲ್ಲಿ ನೀರು ಬಿಡಲಾಗುತ್ತದೆ ಎಂದು ಭಾರಿ ನೀರಾವರಿ ಸಚಿವ ಕೆ.ಎನ್. ನಾಗೇಗೌಡ ಅವರು ವಿಧಾನಸಭೆಯಲ್ಲಿ ಇಂದು ಆಶ್ವಾಸನೆ ನೀಡಿದರು.
ಸುಮಾರು ರೂ. 90 ಕೋಟಿ ಅಂದಾಜು ವೆಚ್ಚದಲ್ಲಿ ನಾಲೆಯ ಆಧುನೀಕರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.