ಬೈಲಹೊಂಗಲ: ತಾಲ್ಲೂಕಿನ ನಯಾನಗರ ಗ್ರಾಮದ ಹತ್ತಿರ ಸೋಮವಾರ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಎಂಟು ಜನರು ಗಂಭೀರ ಗಾಯಗೊಂಡಿದ್ದಾರೆ.
ನಯಾನಗರ ಗ್ರಾಮದ ಮಲಪ್ರಭಾ ನದಿ ಹತ್ತಿರದ ದಾಬಾ ದಾಟಿ ಸಂಚರಿಸುತ್ತಿದ್ದ ಮಾರುತಿ 800 ಮತ್ತು ಅಲ್ಟೋ ಕಾರು ಪರಸ್ಪರ ಡಿಕ್ಕಿ ಹೊಡಿದಿವೆ. ಅಪಘಾತದ ರಭಸಕ್ಕೆ ಕಾರುಗಳು ಸಂಪೂರ್ಣ ಜಖಂಗೊಂಡು ನಜ್ಜುಗುಜ್ಜಾಗಿವೆ.
ಚಾಲಕರಾದ ಲಿಂಗದಳ್ಳಿ ಗ್ರಾಮದ ಕಿರಣ ಅಡಿವೆಪ್ಪ ಪೂಜೇರ, ಆನಿಗೋಳದ ಮಹಾಂತೇಶ ರಾಮನಿಂಗಪ್ಪ ಕುರಿ ಸೇರಿದಂತೆ ಎಂಟು ಜನರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಸ್ಥಳೀಯರ ಸಹಾಯದಿಂದ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರ ಸುಗಮಗೊಳಿಸಿ ತನಿಖೆ ನಡೆಸಿದರು.