ಬೆಂಗಳೂರು: ಸರ್ಜಾಪುರ ಮುಖ್ಯರಸ್ತೆಯಲ್ಲಿ ಹಾರ್ನ್ ವಿಚಾರಕ್ಕೆ ಬೈಕ್ ಸವಾರ ಹಾಗೂ ಕಾರು ಚಾಲಕನ ನಡುವೆ ಗಲಾಟೆ ನಡೆದಿದೆ.
‘ಸರ್ಜಾಪುರ ಮುಖ್ಯರಸ್ತೆಯಲ್ಲಿ ಕಾರು ಚಾಲಕ ತೆರಳುತ್ತಿದ್ದರು. ಸಿಗ್ನಲ್ನಲ್ಲಿ ಕೆಂಪು ದೀಪ ಕಂಡಿದ್ದರಿಂದ ವಾಹನಗಳ ನಿಲುಗಡೆ ಮಾಡಿದ್ದರು. ಅದೇ ವೇಳೆ ಬೈಕ್ ಸವಾರ ಕಾರಿನ ಮುಂಭಾಗ ಬಂದು ನಿಂತಿದ್ದಾನೆ. ಕೆಲ ಕ್ಷಣಗಳ ಬಳಿಕ ಟ್ರಾಫಿಕ್ ಸಿಗ್ನಲ್ನಲ್ಲಿ ಹಳದಿ ದೀಪ ಬಿದ್ದಿದ್ದರಿಂದ ಎಲ್ಲ ವಾಹನಗಳು ಮುಂದಕ್ಕೆ ಸಾಗಿವೆ. ಆಗ ಕಾರು ಚಾಲಕ ಕೂಡ ಮುಂದೆ ಚಲಾಯಿಸಲು ಹಾರ್ನ್ ಮಾಡಿದ್ದಾನೆ. ಅಷ್ಟಕ್ಕೆ ಕೋಪಗೊಂಡ ಬೈಕ್ ಸವಾರ ಬೈಕ್ನಿಂದ ಇಳಿದು ಕಾರು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.
ಈ ದೃಶ್ಯಗಳು ಕಾರಿನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊಗಳು ವೈರಲ್ ಆಗಿವೆ. ಬೈಕ್ ಸವಾರನನ್ನು ರಿಂಕು ಎಂದು ಗುರುತಿಸಲಾಗಿದೆ. ಆದರೆ, ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದರು.