ಬೆಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿವೆ. ಇದನ್ನು ಸದುಪಯೋಗಪಡಿಸಿಕೊಂಡು ಉದ್ಯಮಿಗಳಾಗಬೇಕು ಎಂದು ಇಸ್ರೊ ಮಾಜಿ ಅಧ್ಯಕ್ಷ ಕೆ.ಶಿವನ್ ಹೇಳಿದರು.
ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
ವಿಜ್ಞಾನ, ತಂತ್ರಜ್ಞಾನವು ಶರವೇಗದಲ್ಲಿ ಪ್ರಗತಿ ಸಾಧಿಸುತ್ತಿದೆ. ಯುವಕರು ಉದ್ಯೋಗಿಗಳಾಗುವ ಬಗ್ಗೆ ಕನಸು ಕಾಣವು ಬದಲು ಉದ್ಯಮಿಗಳಾಗಿ ದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.
‘ಇಸ್ರೊದಿಂದ ಗಗನಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ. ಗಗನಯಾತ್ರಿಗಳನ್ನು 400 ಕಿ.ಮೀ ಎತ್ತರಕ್ಕೆ ಕೊಂಡೊಯ್ಯುವ ಯೋಜನೆ ಇದಾಗಿದೆ. ಇಸ್ರೊ 2035ರ ವೇಳೆಗೆ ಬಾಹ್ಯಾಕಾಶ ನಿಲ್ದಾಣದಂತಹ ಯೋಜನೆಗಳನ್ನು ಕೈಗೊಳ್ಳಲಿದೆ. 2040ರ ವೇಳೆಗೆ ನಮ್ಮ ವಿಜ್ಞಾನಿಗಳು ಬಾಹ್ಯಾಕಾಶಕ್ಕೆ ತೆರಳಿ ಸಂಶೋಧನೆ ನಡೆಸಲಿದ್ದಾರೆ. ಇದನ್ನೆಲ್ಲ ಸಾಧಿಸಲು ಯುವಕರ ಸಹಕಾರ ಅಗತ್ಯ’ ಎಂದು ತಿಳಿಸಿದರು.
ಇಸ್ರೊ ಪ್ರೊಫೆಸರ್ ಪಿ.ಜಿ.ದಿವಾಕರ್ ಮಾತನಾಡಿ, ‘ಪ್ರಸ್ತುತ ಇಸ್ರೊ ಮಾಡುತ್ತಿರುವ ಕೆಲಸವನ್ನೇ ನವೋದ್ಯಮ, ಎಂಎಸ್ಎಂಇ ಮತ್ತು ಇನ್ಕ್ಯುಬೇಷನ್ ಕೇಂದ್ರಗಳು ಮಾಡುತ್ತಿರುವುದರಿಂದ ಅವಕಾಶಗಳು ಜಾಸ್ತಿಯಾಗಿವೆ. ಪದವಿ ಬಳಿಕ ಎಲ್ಲರೂ ಇಸ್ರೊ ಸಂಸ್ಥೆಗೆ ಸೇರಬೇಕೆಂದಿಲ್ಲ. ಇದೇ ಕೆಲಸ ಮಾಡುವ ಕಂಪನಿಗಳಲ್ಲಿ ಕೆಲಸ ಪಡೆಯಬಹುದು’ ಎಂದು ಹೇಳಿದರು.
ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ 800 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಎಎಂಸಿ ಕಾಲೇಜು ಅಧ್ಯಕ್ಷ ಕೆ.ಆರ್.ಪರಮಂಸ, ಉಪಾಧ್ಯಕ್ಷೆ ಕೆ.ಗೀತಾ ಪರಮಂಸ, ಕಾರ್ಯಾಧ್ಯಕ್ಷ ರಾಹುಲ್ ಕಲ್ಲೂರಿ, ಶೈಕ್ಷಣಿಕ ಸಲಹೆಗಾರ ಆರ್.ನಾಗರಾಜ್, ಪ್ರಾಂಶುಪಾಲ ಕೆ.ಕುಮಾರ್ ಭಾಗವಹಿಸಿದ್ದರು.