ಚಿಕ್ಕಬಳ್ಳಾಪುರ: ರೈತರು ಪೂರೈಸುತ್ತಿರುವ ಹಾಲಿನ ದರವನ್ನು ಲೀಟರ್ಗೆ ₹ 2 ಇಳಿಕೆ ಮಾಡಿರುವ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ (ಕೋಚಿಮುಲ್) ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿ ಜು.10ರಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ನಡೆಸಲಾಗುವುದು ಎಂದು ಸಂಸದ ಡಾ.ಕೆ.ಸುಧಾಕರ್ ಪ್ರಕಟಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರು, ಹೈನುಗಾರರು, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು, ಮುಖಂಡರು ಉಪವಾಸದಲ್ಲಿ ಪಾಲ್ಗೊಳ್ಳುವರು. ನಂತರ ಕೋಲಾರ ಜಿಲ್ಲೆಯ ಮುಖಂಡರ ಜೊತೆ ಚರ್ಚಿಸಿ ಅಲ್ಲಿಯೂ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ದರ ಇಳಿಕೆಯ ಆದೇಶವನ್ನು ಕೋಚಿಮುಲ್ ತಕ್ಷಣವೇ ವಾಪಸ್ ಪಡೆಯಬೇಕು. ಲೀಟರ್ ಹಾಲಿನ ದರವನ್ನು ₹ 3 ಹೆಚ್ಚಿಸಿ ರೈತರಿಗೆ ಒಂದು ಲೀಟರ್ ಹಾಲಿಗೆ ₹ 34.40 ನೀಡಬೇಕು ಎಂದರು.
ಈ ಹಿಂದೆ ನಿತ್ಯ 9 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. ಈಗ 12.5 ಲಕ್ಷ ಲೀಟರ್ ಉತ್ಪಾದನೆ ಆಗುತ್ತಿದೆ. ಈ ಕಾರಣದಿಂದ ದರ ಇಳಿಸಲಾಗಿದೆ ಎಂದು ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳುತ್ತಾರೆ. ಇದು ರೈತರನ್ನು ಉದ್ಧಾರ ಮಾಡುವ ಮಾರ್ಗವೇ ಎಂದು ಪ್ರಶ್ನಿಸಿದರು.