ಉಡುಪಿ: ‘ಮಹಿಷ ಪಂಥ ಕಾಲ್ಪನಿಕ ಪಂಥವಲ್ಲ, ಪಶ್ಚಿಮ ಕರಾವಳಿಯಲ್ಲಿ ಇಂದಿಗೂ ಜೀವಂತ ಪಂಥವಾಗಿಯೇ ಇದೆ. ದೇಶದ ಏಕೈಕ ಮಹಿಷ ದೇವಾಲಯ ತುಳುರಾಜ್ಯದ ರಾಜಧಾನಿ ಎಂದು ಪ್ರಖ್ಯಾತವಾದ ಬಾರಕೂರಿನಲ್ಲಿದೆ’ ಎಂದು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಟಿ.ಮುರುಗೇಶಿ ಹೇಳಿದ್ದಾರೆ.
‘ಮೈಸೂರು ದಸರಾ ಸಂದರ್ಭದಲ್ಲಿ, ಭುಗಿಲೇಳುವ ವಿಷಮ ಸನ್ನಿವೇಶಕ್ಕೆ ಮಹಿಷ ಪದವನ್ನು ತಪ್ಪಾಗಿ ತಿಳಿದುಕೊಂಡಿರುವುದೇ ಕಾರಣವಾಗಿದೆ. ಮಹಿಷರು ಆಳಿದ ಊರು ಮೈಸೂರು. ಮಹಿಷರ ರಾಜ್ಯ ಮಹಿಷ ಮಂಡಲ. ಮಹಿಷ ಎಂದರೆ ಕೋಣ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಕ್ರಿ.ಶ. 8-9ನೇ ಶತಮಾನದ ಆಳುಪರ ಶಾಸನಗಳಲ್ಲಿ ಮಯ್ಗೇಶ ಎಂಬ ಪದ ಬಳಕೆಯಾಗಿದೆ. ಮಹಿ ಎಂದರೆ ಭೂಮಿ, ಆದ್ದರಿಂದ ಮಹಿಗೆ+ಈಶ – ಮಹಿಷ/ಮಯ್ಗೇಶ. ಈಗಲೂ ಮಹಿಷಿ ಎಂದರೆ ರಾಣಿ ಎಂಬ ಅರ್ಥವೇ ಇದೆ. ಮಹಿಷಿ ರಾಣಿಯಾದರೆ, ಮಹಿಷ ರಾಜನಾಗಬೇಕಲ್ಲವೆ?’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಬಾರಕೂರಿನ ಮಹಿಷ ದೇವಾಲಯದಲ್ಲಿನ ಮಹಿಷ ಶಿಲ್ಪ ಅತ್ಯಂತ ಕುತೂಹಲಕಾರಿಯಾಗಿದೆ. ನಂದಿಯ ತಲೆ ಹಾಗೂ ಮಾನವ ದೇಹದ ರಚನೆಯನ್ನು ಹೊಂದಿರುವ ಈ ಶಿಲ್ಪ, ಮಹಿಷ ಪಂಥದ ದೊರೆಗಳು ನಂದಿಯ ಮುಖವಾಡವನ್ನು ಧರಿಸಿ ಆಳ್ವಿಕೆ ನಡೆಸುತ್ತಿದ್ದರು ಮತ್ತು ನಂದಿಯ ಮುಖವಾಡ ಧರಿಸಿ ಯುದ್ಧಗಳಲ್ಲಿ ಭಾಗವಹಿಸುತ್ತಿದ್ದರೆಂಬ ಕುತೂಹಲಕಾರಿ ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ. ಮಹಿಷ ದೈವವನ್ನು ಫಲವತ್ತತೆಯ ದೈವವಾಗಿ ಕರಾವಳಿಯಲ್ಲಿ ಆರಾಧಿಸಲಾಗುತ್ತದೆ ಎಂದಿದ್ದಾರೆ.
ಈ ಮಹಿಷ ದೊರೆಗಳು, ವೈದಿಕ ವಿಸ್ತರಣೆಯನ್ನು ತೀವ್ರವಾಗಿ ಪ್ರತಿರೋಧಿಸಿದರ ಫಲವಾಗಿ, ವೈದಿಕರ ಕೆಂಗಣ್ಣಿಗೆ ಗುರಿಯಾಗಿ ಅಸುರ ದೊರೆಗಳೆಂದು ಕರೆಯಲ್ಪಟ್ಟರು. ಆದ್ದರಿಂದ, ಮಹಿಷ ಮಹಿಷಾಸುರನಾದ. ಪುರಾಣಗಳ ಪ್ರಕಾರ ದೇವಿಯು ಮಹಿಷಾಸುರನನ್ನು ಕೊಂದು ಮಹಿಷಮರ್ದಿನಿ ಎಂದು, ಮೂಕಾಸುರನನ್ನು ಕೊಂದು ಮೂಕಾಂಬಿಕೆ ಎಂದು, ಚಂಡ-ಮುಂಡರನ್ನು ಕೊಂದು ಚಾಮುಂಡಿ ಎಂದು ಬೇರೆ ಬೇರೆ ಹೆಸರಿನಿಂದ ಕರೆಯಲ್ಪಟ್ಟಳು ಎಂದು ಹೇಳಿದ್ದಾರೆ.
ಮಹಿಷರು ಯಾರು?: ಸಾಮ್ರಾಟ್ ಅಶೋಕನ ಪರಿಶ್ರಮದಿಂದ ಬೌದ್ಧ ಧರ್ಮ ದಕ್ಷಿಣ ಭಾರತದಲ್ಲಿ ನೆಲೆಯೂರಿತು. ಬೌದ್ಧ ಧರ್ಮದಲ್ಲಿ ಅನೇಕ ಶಾಖೆಗಳಿವೆ. ಅವುಗಳಲ್ಲಿ ಒಂದು ಮಹಿಶಾಸಿಕ/ಮಹಿಷಿಕ ಎಂಬ ಶಾಖೆ ಬನವಾಸಿ ಮಂಡಲದಲ್ಲಿ ಮತ್ತು ಮಹಿಷ ಮಂಡಲದಲ್ಲಿ ಜನಪ್ರಿಯವಾಗಿತ್ತು.
ತಲಕಾಡಿನಲ್ಲಿ ಉತ್ಖನನ ಮಾಡಿದ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಎಂ.ಎಸ್.ಕೃಷ್ಣಮೂರ್ತಿಯವರು ವಜ್ರದ ಚಿಹ್ನೆ ಹೊಂದಿರುವ ಒಂದು ಕಂಚಿನ ಅಚ್ಚನ್ನು ಹಾಗೂ ಧರ್ಮಚಕ್ರದ ಅವಶೇಷಗಳನ್ನು ಸಂಶೋಧಿಸಿದ್ದಾರೆ. ಅವರ ಪ್ರಕಾರ, ತಲಕಾಡು ಮಹಿಷ ಮಂಡಲದ ರಾಜಧಾನಿಯಾಗಿತ್ತು. ಮಹಿಶಾಸಿಕ/ಮಹಿಷಿಕ ಬೌದ್ಧ ಶಾಖೆಯ ದೊರೆಗಳೆ ಮಹಿಷ ದೊರೆಗಳಾಗಿ ಆಳ್ವಿಕೆ ನಡೆಸಿದರು. ಸ್ಥಳೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ರಾಯಭಾರಿಗಳಾಗಿ, ವೈದಿಕ ಸಂಸ್ಕೃತಿಯ ವಿಸ್ತರಣೆಯನ್ನು ಪ್ರತಿರೋಧಿಸಿದ ಮಹಿಷನನ್ನು ಕರಾವಳಿಯಲ್ಲಿ ಪ್ರತಿನಿತ್ಯ ಆರಾಧಿಸಲಾಗುತ್ತದೆ ಎಂದು ಮುರುಗೇಶಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.