ಜೊಯಿಡಾ: ‘ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ ರಾಮನಗರದಿಂದ ಅನಮೋಡವರೆಗಿನ ರಸ್ತೆಯ ಕಾಮಗಾರಿ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಅಪೂರ್ಣವಾಗಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಆದ್ದರಿಂದ ಮಳೆ ಕಡಿಮೆಯಾದ ನಂತರ ರಸ್ತೆ ಕಾಮಗಾರಿಗೆ ವೇಗ ನೀಡಿ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.
ರಾಮನಗರದಲ್ಲಿ ಸೋಮವಾರ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಸ್ತೂರಿರಂಗನ್ ವರದಿ ವಿರೋಧಿಸುತ್ತೇನೆ. ಜನತೆಗೆ ಅನ್ಯಾಯವಾಗಲು ಬಿಡುವುದಿಲ್ಲ, ಸಮಯ ಬಂದರೆ ಲೋಕಸಭೆಯಲ್ಲಿ ಧ್ವನಿ ಎತ್ತುತ್ತೇನೆ’ ಎಂದು ಹೇಳಿದರು.
‘ಜಿಲ್ಲೆಯ ಹಲವೆಡೆ ಬಿಎಸ್ಎನ್ಎಲ್ ಟವರ್ಗಳಿಗೆ ಅನುಮೋದನೆ ನೀಡಲಾಗಿದ್ದು, ಕೆಲವೆಡೆ ಅರಣ್ಯ ಇಲಾಖೆ ಅಡೆತಡೆಗಳನ್ನು ಎದುರಿಸುತ್ತಿದೆ. ಈ ಅಡೆತಡೆಗಳನ್ನು ನಿವಾರಿಸಿ ಶೀಘ್ರವೇ ತಾಲೂಕಿನಲ್ಲಿರುವ ನೆಟ್ ವರ್ಕ್ ಸಮಸ್ಯೆಗಳನ್ನು ಬಗೆಹರಿಸುತ್ತೇವೆ’ ಎಂದು ಹೇಳಿದರು.
‘ಕ್ಯಾಸಲರಾಕ್-ಮಿರಜ್ ಪ್ಯಾಸೆಂಜರ್ ರೈಲು ಆರಂಭಿಸಲು ರೈಲ್ವೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಶೀಘ್ರದಲ್ಲೇ ಈ ಪ್ಯಾಸೆಂಜರ್ ರೈಲನ್ನು ಆರಂಭಿಸಲಾಗುವುದು’ ಎಂದರು.
ಮಾಜಿ ಶಾಸಕ ಸುನೀಲ ಹೆಗಡೆ, ಜೊಯಿಡಾ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಶಿವಾಜಿ ಗೋಸಾವಿ, ಉಪಾಧ್ಯಕ್ಷ ಗುರಪ್ಪ ಹಣಬರ, ಅಜಿತ ಮಿರಾಶಿ, ಉಮೇಶ ನಾಯ್ಕ, ಸದಾನಂದ ಸಾವಂತ, ಗಿರೀಶ ಗೋಸಾವಿ, ರಮೇಶ ಗಾವಡಾ, ಶ್ರೇಯಾ ಸಾವಂತ, ಸಂತೋಷ ದೇಸಾಯಿ ಇದ್ದರು.