ಕೊಲ್ಹಾರ: ಪಟ್ಟಣದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕನ್ನಡ ನಾಮಫಲಕ ಕಡ್ಡಾಯವಾಗಿ ಹಾಕಲು ಆಗ್ರಹಿಸಿ ಕೊಲ್ಹಾರ ತಾಲ್ಲೂಕಿನ ರಕ್ಷಣಾ ವೇದಿಕೆಯಿಂದ ದಿಗಂಬರ ಮಠದ ಕಲ್ಲಿನಾಥ ದೇವರು ಸಾನ್ನಿಧ್ಯ ಹಾಗೂ ಸುರೇಶ ಹಾರಿವಾಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕು ರಕ್ಷಣಾ ವೇದಿಕೆಯ ಉಸ್ತುವಾರಿ ರವಿ ಗೊಳಸಂಗಿ ಮಾತನಾಡಿ, ಕರ್ನಾಟಕ ಸರಕಾರದ ಆದೇಶದಂತೆ ಶೇ 60ರಂತೆ ಕನ್ನಡ ನಾಮಫಲಕ ಅಳವಡಿಸಲು ತಾಲ್ಲೂಕು ದಂಡಾಧಿಕಾರಿಗಳಿಗೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಮನವಿ ಕೊಟ್ಟರೂ ಯಾವುದೇ ಕ್ರಮ ಜರುಗಿಸದ ಕಾರಣ ಮೂರು ದಿನಗಳಲ್ಲಿ ಈ ಕಾರ್ಯ ಮಾಡಬೇಕು ಎಂದು ಗಡುವು ನೀಡಿದರು.
ಅವಳಿ ಜಿಲ್ಲೆಯ ಉಸ್ತುವಾರಿಗಳಾದ ಸುರೇಶ ಹಾರಿವಾಳ, ರಕ್ಷಣಾ ವೇದಿಕೆಯ ಮುಖಾಂತರ ಸತತ ಮೂರು ತಿಂಗಳಿಂದ ಅಧಿಕಾರಿಗಳಿಗೆ ಮನವಿ ಕೊಟ್ಟರೂ ಈ ಕಾರ್ಯ ವಿಳಂಬವಾಗುತ್ತಿದೆ ಏಕೆ ಎಂದು ಅಧಿಕಾರಿಗಳಿಗೆ ಪ್ರಶ್ನೆ ಮಾಡಿ, ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಮೂರು ದಿನ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಸಂಪೂರ್ಣ ಕನ್ನಡ ನಾಮಫಲಕಗಳನ್ನು ಹಾಕದೆ ಹೋದರೆ ಮತ್ತೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಕನ್ನಡ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಮಹಾಂತೇಶ ಗಿಡ್ಡಪ್ಪಗೋಳ ಮಾತನಾಡಿ, ಪಟ್ಟಣದ ಆಡಳಿತ ಕಚೇರಿಗಳು, ಅಂಗಡಿಗಳು, ಶಾಲಾ, ಕಾಲೇಜುಗಳು ಮಾರುಕಟ್ಟೆಯ ಸ್ಥಳಗಳಲ್ಲಿ ನಾಮಫಲಕಗಳು ಕನ್ನಡದಲ್ಲಿ ಹಾಕಬೇಕು ಎಂದು ಅಧಿಕಾರಿಗಳಿಗೆ, ವ್ಯಾಪಾರಸ್ಥರಿಗೆ ಸೂಚನೆ ನೀಡಿದರು.
ಯುವ ಘಟಕದ ಅಧ್ಯಕ್ಷ ಸಂತೋಷ್ ಹಡ್ರೋಳ್ಳಿ, ಭೀಮನಗೌಡ ಬಿರಾದಾರ, ಮುತ್ತು ಹಿಪ್ಪರಗಿ, ಹಣಮಂತ ಹತ್ತಿರಕಾಳ,ಬಸು ಗಡ್ಡಿ, ಸುನೀಲ ಬರಗಿ,ಸಾಗರ ಕಟಾರೆ, ಯಲ್ಲಪ್ಪ ಹಡ್ರೋಳ್ಳಿ, ಮಲ್ಲು ಉಗ್ರಾಣ ಇದ್ದರು.