ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲ ಗಲಭೆ | ಹಿಂದೂ ಸಮುದಾಯವನ್ನು ಪ್ರಚೋದಿಸುವ ಕುಕೃತ್ಯ: ಬಿ.ವೈ.ವಿಜಯೇಂದ್ರ

Published : 12 ಸೆಪ್ಟೆಂಬರ್ 2024, 10:05 IST
Last Updated : 12 ಸೆಪ್ಟೆಂಬರ್ 2024, 10:05 IST
ಫಾಲೋ ಮಾಡಿ
Comments

ಬೆಂಗಳೂರು: 'ನಾಗಮಂಗಲದಲ್ಲಿ ಗಣಪತಿ ವಿಸರ್ಜನೆಯ ವೇಳೆ ಕಲ್ಲು ತೂರಾಟ ನಡೆಸಿರುವ ಹಿಂದೂ ವಿರೋಧಿ ಮತಾಂದ ಕಿಡಿಗೇಡಿಗಳ ಅಟ್ಟಹಾಸದಿಂದ ಉದ್ಭವಿಸಿರುವ ಪ್ರಕ್ಷುಬ್ಧ ಪರಿಸ್ಥಿತಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದು, ಈ ಘಟನೆಯನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ. ಈ ಘಟನೆ ಹಿಂದೂ ಸಮುದಾಯವನ್ನು ಪ್ರಚೋದಿಸುವ ಕುಕೃತ್ಯವಾಗಿದೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, 'ಈ ಹಿಂದಿನ ವರ್ಷವೂ ಪುಂಡರು ಇದೇ ರೀತಿ ವರ್ತಿಸಿದ್ದ ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತೆಯ ಕಟ್ಟೆಚ್ಚರ ವಹಿಸುವಲ್ಲಿ ಎಚ್ಚರ ತಪ್ಪಿರುವುದು ಸ್ಪಷ್ಟವಾಗಿದೆ' ಎಂದು ದೂರಿದ್ದಾರೆ.

'ಕಾಂಗ್ರೆಸ್‌ ಸರ್ಕಾರದ ಆಡಳಿತ ಅವಧಿಯಲ್ಲಿ ನಮಗೆ ರಕ್ಷಣೆ ಸಿಗುತ್ತದೆ ಎಂಬ ದೃಢನಂಬಿಕೆ ವಿದ್ರೋಹಿ ಶಕ್ತಿಗಳು ವಿದ್ವಂಸಕ ಕೃತ್ಯಗಳನ್ನು ನಡೆಸಲು ಪ್ರಚೋದನೆಯಾಗುತ್ತಿದೆ. ಜನರ ಧಾರ್ಮಿಕ ಶ್ರದ್ಧೆಯನ್ನು ಘಾಸಿಗೊಳಿಸಲು ಶಾಂತಿಯುತ ಗಣಪತಿ ವಿಸರ್ಜನೆಯ ಸಂದರ್ಭದಲ್ಲಿ ನಡೆದಿರುವ ಈ ಘಟನೆ ಹಿಂದೂ ಸಮುದಾಯವನ್ನು ಪ್ರಚೋದಿಸುವ ಕುಕೃತ್ಯವಾಗಿದೆ'.

'ಸೌಹಾರ್ದತೆಯ ಸಮಾಜದಲ್ಲಿ ದಳ್ಳುರಿ ಹಚ್ಚಲು ಯತ್ನಿಸುತ್ತಿರುವ, ಹಿಂದೂ ಸಮುದಾಯದ ಆಚಾರ ವಿಚಾರಗಳನ್ನು ದಮನ ಮಾಡುವ ರೀತಿಯಲ್ಲಿ ವರ್ತಿಸಿರುವ ಹಾಗೂ ಭಾರತೀಯ ಪರಂಪರೆಯನ್ನು ಸದಾ ಕಾಲಕ್ಕೂ ಅಪಮಾನಿಸಲು ಯತ್ನಿಸುತ್ತಿರುವ ಉಗ್ರ ಮನಸ್ಥಿತಿಯ ವಿದ್ರೋಹಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಲಿ' ಎಂದು ಅವರು ಆಗ್ರಹಿಸಿದ್ದಾರೆ.

'ನಾಗಮಂಗಲ ಘಟನೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿ ಹಿಂದೂ ವಿರೋಧಿ ಚಟುವಟಿಕೆಗಳನ್ನು ಸಂಘಟಿಸುತ್ತಿರುವ ದುಷ್ಟ ಶಕ್ತಿಗಳನ್ನು ನಿಗ್ರಹಿಸದೇ ಹೋದರೆ ಮುಂದಾಗುವ ಪರಿಣಾಮಗಳ ಹೊಣೆ ಕಾಂಗ್ರೆಸ್ ಸರ್ಕಾರವೇ ಹೊರಬೇಕಾಗುತ್ತದೆ. ಕಾಂಗ್ರೆಸ್‌ನ ಮತಬ್ಯಾಂಕ್ ಆಧಾರಿತ ಪಕ್ಷಪಾತ ನಡೆ ಕರುನಾಡನ್ನು ದಹಿಸುತ್ತಿದೆ' ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT