ಮುಂಬೈ: ತಮ್ಮ ರಿವಾಲ್ವರ್ನಿಂದ ಗುಂಡು ಆಕಸ್ಮಿಕವಾಗಿ ಸಿಡಿದು ಗಾಯಗೊಂಡಿದ್ದ ನಟ, ರಾಜಕಾರಣಿ ಗೋವಿಂದ ಆಸ್ಪತ್ರೆಯಿಂದ ಇಂದು (ಶುಕ್ರವಾರ) ಬಿಡುಗಡೆಯಾಗಿದ್ದಾರೆ.
ಪರವಾನಗಿ ಹೊಂದಿದ ಪಿಸ್ತೂಲ್ ಅನ್ನು ಸುರಕ್ಷಿತ ಸ್ಥಳದಲ್ಲಿ ಇಡುವಾಗ ಆಕಸ್ಮಿಕವಾಗಿ ಗುಂಡು ಸಿಡಿದು ಗೋವಿಂದ ಅವರ ಕಾಲಿಗೆ ಗಾಯವಾಗಿತ್ತು.
ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷದ ನಾಯಕರಾಗಿರುವ ಗೋವಿಂದ, ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
60 ವರ್ಷದ ಗೋವಿಂದ ಚೇತರಿಕೆ ಹಂತದಲ್ಲಿದ್ದು, ಕುಟುಂಬದ ಸದಸ್ಯರು ಅವರನ್ನು ಗಾಲಿಕುರ್ಚಿ ಸಹಾಯದಿಂದ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ನನ್ನ ಆರೈಕೆಗೆ ಪ್ರಾರ್ಥಿಸಿದ, ನನ್ನನ್ನು ಪ್ರೀತಿಸುವ ಅಭಿಮಾನಿಗಳು ಸೇರಿದಂತೆ ಎಲ್ಲರಿಗೂ ಗೋವಿಂದ ಧನ್ಯವಾದಗಳನ್ನು ತಿಳಿಸಿದ್ದಾರೆ.
ಗೋವಿಂದ ಅವರಿಗೆ ವೈದ್ಯರು ಆರು ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ ಎಂದು ಪತ್ನಿ ಸುನಿತಾ ಅಹುಜಾ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಮುಂಬೈ ಪೊಲೀಸ್ ಹಾಗೂ ಅಪರಾಧ ವಿಭಾಗ ತನಿಖೆಯನ್ನು ನಡೆಸುತ್ತಿದೆ.