ಬೆಂಗಳೂರು: ಕೇಂದ್ರ ಸರ್ಕಾರ ʻಭಾರತ್ ಅಕ್ಕಿʼ ಯೋಜನೆಯನ್ನು ಸ್ಥಗಿತಗೊಳಿಸಿರುವುದನ್ನು ನೋಡಿದರೆ, ಈ ಯೋಜನೆಯನ್ನು ಚುನಾವಣೆಗೋಸ್ಕರವೇ ಆರಂಭಿಸಿರುವುದು ಸ್ಪಷ್ಟ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾವು ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೇಳಿದಾಗ, ಭಾರತೀಯ ಆಹಾರ ನಿಗಮದಲ್ಲಿ ದಾಸ್ತಾನಿದ್ದರೂ ನೀಡಲಿಲ್ಲ’ ಎಂದರು.
‘ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಅಕ್ಕಿ ನೀಡದ ಕಾರಣ ನಾವು ಜನರಿಗೆ ಹೆಚ್ಚುವರಿ ಅಕ್ಕಿಯ ಬದಲು, ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು’ ಎಂದರು.
ಲೋಕಸಭೆ ಚುನಾವಣೆಗೂ ಮೊದಲು, ಇದೇ ಫೆಬ್ರವರಿ 2ರಂದು ಭಾರತ್ ಅಕ್ಕಿ ಎಂಬ ಹೊಸ ಅಕ್ಕಿ ಮತ್ತು ದಿನಸಿ ಪದಾರ್ಥಗಳನ್ನು ಅಗ್ಗದ ದರದಲ್ಲಿ ವಿತರಿಸುವ ಯೋಜನೆಯನ್ನು ಆರಂಭಿಸಿತ್ತು. ಆದರೆ, ಈ ಯೋಜನೆಯನ್ನು ಜುಲೈ ತಿಂಗಳಿನಿಂದ ಸ್ಥಗಿತಗೊಳಿಸಿದೆ.