ಭಾನುವಾರ, 29 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡ್ರಗ್ಸ್‌ ದಂಧೆ ತಡೆಗೆ ‘ಎಎನ್‌ಟಿಎಫ್’?: NCB ಮಾದರಿ ‘ವಿಶೇಷ ಕಾರ್ಯಪಡೆ’ಗೆ ಚಿಂತನೆ

ಎನ್‌ಸಿಬಿ ಮಾದರಿ ‘ವಿಶೇಷ ಕಾರ್ಯಪಡೆ’ ರಚಿಸಲು ಸರ್ಕಾರ ಚಿಂತನೆ
Published : 28 ಸೆಪ್ಟೆಂಬರ್ 2024, 23:05 IST
Last Updated : 28 ಸೆಪ್ಟೆಂಬರ್ 2024, 23:05 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯದಲ್ಲಿ ಮಾದಕವಸ್ತು (ಡ್ರಗ್ಸ್‌) ಪೂರೈಕೆ, ಮಾರಾಟ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಮಾದರಿಯಲ್ಲಿ ‘ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆ’ (ಎಎನ್‌ಟಿಎಫ್) ರಚಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಕುರಿತು ಪ್ರಸ್ತಾವ ಸಿದ್ಧಪಡಿಸುವಂತೆ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಹಿರಿಯ ಅಧಿಕಾರಿಗಳಿಗೆ ಗೃಹ ಇಲಾಖೆ ಸೂಚನೆ ನೀಡಿದೆ. ಎಡಿಜಿಪಿ ಅಥವಾ ಐಜಿಪಿ ಮಟ್ಟದ ಅಧಿಕಾರಿ ಎಎನ್‌ಟಿಎಫ್‌ ಮುಖ್ಯಸ್ಥರಾಗಿ ಇರಲಿದ್ದಾರೆ.

ಮಾದಕವಸ್ತು ದಂಧೆ ಪತ್ತೆ ಕಾರ್ಯಾಚರಣೆಗೆ ಎಎನ್‌ಟಿಎಫ್‌ನಲ್ಲಿ ಎಸ್‌ಪಿ, ಎಎಸ್‌ಪಿ, ಡಿವೈಎಸ್‌ಪಿ ಇರಲಿದ್ದಾರೆ. ವಲಯ ಹಂತದಲ್ಲಿ ಎಎನ್‌ಟಿಎಫ್ ಘಟಕಗಳನ್ನೂ ರಚಿಸಲಾಗುವುದು. ಆಡಳಿತ ಮತ್ತು ತರಬೇತಿಗೆ ತಲಾ ಒಬ್ಬರು ಎಸ್‌ಪಿ, ಎಎಸ್‌ಪಿ, ಡಿವೈಎಸ್‌ಪಿ ಇರಲಿದ್ದಾರೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

ತೆಲಂಗಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಎಎನ್‌ಟಿಎಫ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿಯೂ ಮಾದಕವಸ್ತು ಜಾಲ ತಡೆಗಟ್ಟುವ ಉದ್ದೇಶದಿಂದ ಈ ಕಾರ್ಯಪಡೆ ರಚಿಸಿ ನೀಡಬಹುದಾದ ಜವಾಬ್ದಾರಿಗಳು ಮತ್ತು ಒದಗಿಸಬೇಕಾದ ಮೂಲಸೌಲಭ್ಯಗಳನ್ನು ಒಳಗೊಂಡ ಸಮಗ್ರ ಪ್ರಸ್ತಾವವನ್ನು ಸಿದ್ಧಪಡಿಸುವಂತೆ ಐಎಸ್‌ಡಿಗೆ ಇಲಾಖೆ ತಿಳಿಸಿದೆ.

ಮಾದಕವಸ್ತು ಮಾರಾಟ ಮತ್ತು‌ ಖರೀದಿ ಚಟುವಟಿಕೆ ಡಾರ್ಕ್‌ವೆಬ್ ನೆಟ್‌ ಮೂಲಕ‌ ನಡೆಯುತ್ತಿದೆ. ಅದರ ಮೇಲೆ ಕಣ್ಣಿಡಲು ಮತ್ತು ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಂದರುಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ವಸ್ತುಗಳ ಮೇಲೆ ತೀವ್ರ ನಿಗಾ ವಹಿಸಲು ಈಗಿರುವ ತಪಾಸಣಾ ವ್ಯವಸ್ಥೆಯನ್ನು ಮತ್ತಷ್ಟು ಕಠಿಣಗೊಳಿಸಬೇಕಿದೆ. ಮಾದಕವಸ್ತು ನಿಯಂತ್ರಣ ಕಾರ್ಯಾಚರಣೆಗಳಿಗಾಗಿಯೇ ಎಎನ್‌ಟಿಎಫ್ ಪಡೆಗಳಿಗೆ ವಿಶೇಷವಾಗಿ ತರಬೇತಿ ನೀಡಿ‌ದ ಶ್ವಾನಗಳನ್ನು ನಿಯೋಜಿಸಲು ಕೂಡಾ ಚಿಂತನೆ ನಡೆದಿದೆ ಎಂದು ಮೂಲಗಳು ಹೇಳಿವೆ.

ಮಾದಕವಸ್ತು ಪೂರೈಕೆ, ಮಾರಾಟ, ಸೇವನೆ ಪ್ರಕರಣಗಳ ಕುರಿತು ಅವಲೋಕಿಸಲು ಗೃಹ ಸಚಿವ ಜಿ. ಪರಮೇಶ್ವರ ಅಧ್ಯಕ್ಷತೆಯ ಕಾರ್ಯಪಡೆಯ ಸಭೆಯಲ್ಲಿ, ಮಾದಕವಸ್ತುಗಳಿಗೆ ಸಂಬಂಧಿಸಿದ ಕಾನೂನು ಬಲಪಡಿಸುವ ಕುರಿತು ಚರ್ಚೆ ನಡೆದಿದೆ. ಈ ದಂಧೆಯಲ್ಲಿ ಸಿಕ್ಕಿಬೀಳುವ ಪೆಡ್ಲರ್‌ಗಳಿಗೆ ಶಿಕ್ಷೆ ವಿಧಿಸಲು ವಿಫಲವಾದರೆ ಮಾದಕವಸ್ತು ನಿಯಂತ್ರಣ ಸಾಧ್ಯವಿಲ್ಲ. ಹೀಗಾಗಿ, ಸಿಕ್ಕಿಬಿದ್ದವರು ಯಾವುದೇ ಕಾರಣಕ್ಕೂ ಕಾನೂನು ಕುಣಿಕೆಯಿಂದ ತಪ್ಪಿಕೊಳ್ಳಬಾರದು. ಅಂಥವರಿಗೆ ಜಾಮೀನು ಸಿಗದಂತೆ‌ ಕಾನೂನಿಗೆ ಅಗತ್ಯ ಬದಲಾವಣೆ ಮಾಡುವ ಬಗ್ಗೆ ಕಾರ್ಯಪಡೆ ಚಿಂತನೆ ನಡೆಸಿದೆ.

ಹಲವು ವರ್ಷಗಳಿಂದ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿರುವ ಪೊಲೀಸ್ ಸಿಬ್ಬಂದಿಗೆ ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಮಾದಕವಸ್ತು ‌ದಂಧೆಯ ಮಾಹಿತಿ ಗೊತ್ತಿದ್ದರೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಿಲ್ಲ. ಅಂಥವರನ್ನು ಬೇರೆ ಠಾಣೆಗಳಿಗೆ ವರ್ಗಾವಣೆಗೊಳಿಸಲು ಮತ್ತು ಪೊಲೀಸ್‌ ಸಿಬ್ಬಂದಿಗೆ ಹೊಣೆಗಾರಿಕೆ ನಿಗದಿಪಡಿಸಲು ಕೂಡ ಕಾರ್ಯಪಡೆ ನಿರ್ಧರಿಸಿದೆ ಎಂದೂ ಗೊತ್ತಾಗಿದೆ.

ರಾಜ್ಯದಲ್ಲಿ ಡ್ರಗ್ಸ್ ದಂಧೆ ಸಂಪೂರ್ಣವಾಗಿ ಮಟ್ಟ ಹಾಕಲು ಮತ್ತಷ್ಟು ಕಠಿಣ ಕ್ರಮಗಳನ್ನು‌ ಕೈಗೊಳ್ಳಬೇಕಿದೆ. ಈ ಉದ್ದೇಶದಿಂದ ಹೊಸ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲಾಗುವುದು
-ಜಿ. ಪರಮೇಶ್ವರ ಗೃಹ ಸಚಿವ

ಕಾಲೇಜು ವಿವಿಗಳಲ್ಲಿ ‘ಎಡಿಸಿ’ ರಚನೆ

ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಯಥೇಚ್ಛವಾಗಿ ಮಾದಕವಸ್ತು ದಂಧೆ ನಡೆಯುತ್ತಿದೆ. ವಿದ್ಯಾರ್ಥಿಗಳು ಹೊಸ ಬಗೆಯ ಮಾದಕದ್ರವ್ಯಗಳಿಗೆ ಮಾರು ಹೋಗುತ್ತಿದ್ದಾರೆ. ಅದನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ‘‌ರ‍್ಯಾಗಿಂಗ್ ವಿರೋಧಿ ಸಮಿತಿ’ (ಎಆರ್‌ಸಿ) ಮಾದರಿಯಲ್ಲಿ ‘ಮಾದಕವಸ್ತು ವಿರೋಧಿ ಸಮಿತಿ’ (ಎಡಿಸಿ) ರಚಿಸುವ ಚಿಂತನೆಯೂ ನಡೆದಿದೆ. ಕಾಲೇಜು ಕ್ಯಾಂಪಸ್‌ಗಳಲ್ಲಿ‌ ನಡೆಯುವ ಮಾದಕವಸ್ತು ಮಾರಾಟ ಸೇವನೆಯ ಮಾಹಿತಿಯನ್ನು ಸಂಗ್ರಹಿಸಿ ಸಂಬಂಧಪಟ್ಟವರ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳಲು ಎಡಿಸಿ ಸಹಕಾರಿ ಆಗಬಹುದು. ವಿದೇಶಿ ವಿದ್ಯಾರ್ಥಿಗಳು ಮಾದಕವಸ್ತು ವ್ಯಸನಿಗಳಾಗುತ್ತಿದ್ದು ಅವರಿಗೆ ಮಾದಕವಸ್ತು ಎಲ್ಲಿಂದ‌ ಪೂರೈಕೆ ಆಗುತ್ತವೆ ಎಂಬುದರ ಮೂಲ ಪತ್ತೆ ಹಚ್ಚಬೇಕು. ಎಡಿಸಿ ನೀಡುವ ಮಾಹಿತಿಯ ಗೌಪ್ಯತೆ ಕಾಪಾಡಬೇಕು. ಮಾದಕ ವ್ಯಸನಿಗಳು ವಿವಿಧ ಮಾತ್ರೆಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುವ ಔಷಧ ನಿಯಂತ್ರಕ ಹುದ್ದೆಯ ಜೊತೆಗೆ ‘ಆ್ಯಂಟಿ ಡ್ರಗ್ ಕಂಟ್ರೋಲ್‌ ಆಯುಕ್ತ’ ಹುದ್ದೆ ಸೃಷ್ಟಿಸಿ ಐಪಿಎಸ್‌ ಅಧಿಕಾರಿಯನ್ನು ಆ ಹುದ್ದೆಗೆ ನೇಮಿಸುವ ಬಗ್ಗೆಯೂ ಗೃಹ ಇಲಾಖೆ ಚಿಂತನೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT