ಬೆಳಗಾವಿ: ‘ನಾನು ಲೋಕಸಭೆಗೆ ಆಯ್ಕೆಯಾದ ಬಳಿಕ ಬೆಳಗಾವಿಯನ್ನು ಮಾದರಿ ನಗರ ಮಾಡುವ ಗುರಿ ಹೊಂದಿದ್ದೇನೆ. ಮೆಟ್ರೊ ನಗರ ಮಾಡಬೇಕು. ಅಭಿವೃದ್ಧಿಗಾಗಿ ಹಿಂದೆ ಕೂಡ ಶ್ರಮಿಸಿದ್ದೇನೆ. ಹಾಗಾಗಿ ಪ್ರಮಾಣದ ಮಾಡಿ ಹೇಳುವೆ’ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ತಿಳಿಸಿದರು.
ಬೆಳಗಾವಿ ಉತ್ತರ ಮತಕ್ಷೇತ್ರದ ಶಾಹೂ ನಗರದಲ್ಲಿ ಗುರುವಾರ ಸಭೆ ನಡೆಸಿ ಮತಯಾಚನೆ ಮಾಡಿ ಮಾತನಾಡಿದ ಅವರು, ‘ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ಹಾಗಾಗಿ ಬ್ಯಾಲೆಟ್ ಪೇಪರ್ನಲ್ಲಿ ಎರಡನೆ ನಂಬರ್ಗೆ ಮತ ನೀಡಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು’ ಎಂದು ಕರೆ ನೀಡಿದರು.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ ಮಾತನಾಡಿ, ‘ಜಗದೀಶ ಶೆಟ್ಟರ್ ಅವರಿಗೆ ರಾಜಕೀಯ ಹಾಗೂ ಆಡಳಿತದ ಅನುಭವ ಹೆಚ್ಚು ಇದೆ. ಅಂತಹ ವ್ಯಕ್ತಿಗೆ ಮತ ನೀಡಬೇಕು. ಯಾವುದೇ ಪರಿಸ್ಥಿತಿ ಇದ್ದರು ಮೋದಿಯವರು ಮತ್ತೆ ಪ್ರಧಾನಿ ಆಗಬೇಕು’ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಂಡಳ ಅಧ್ಯಕ್ಷ ವಿಜಯ ಕೊಡಗನವರ್, ಪಾಲಿಕೆ ಸದಸ್ಯ ಶ್ರೇಯಸ್ ನಾಕಾಡಿ, ಮಾಜಿ ಉಪ ಮೇಯರ್ ರೇಶ್ಮಾ ಪಾಟೀಲ, ಯುವ ಮುಖಂಡ ಸಂಕಲ್ಪ ಶೆಟ್ಟರ್ ಸೇರಿದಂತೆ ಮತ್ತಿತರರು ಇದ್ದರು.
ಚಾರ್ಟರ್ಡ್ ಅಕೌಂಟಂಟ್ಸ್ ಸಭೆ: ಇಲ್ಲಿನ ಚಾರ್ಟರ್ಡ್ ಅಕೌಂಟೆಂಟ್ ಅಸೋಸಿಯೇಷನ್, ಕಂಪನಿಯ ಸೆಕ್ರೆಟರಿ ಹಾಗೂ ಟ್ಯಾಕ್ಸ್ ಪ್ರ್ಯಾಕ್ಟೀಷನರ್ ಜೊತೆ ಗುರುವಾರ ಸಂವಾದ ನಡೆಸಿದ ಜಗದೀಶ ಶೆಟ್ಟರ್, ‘ಚಾರ್ಟರ್ಡ್ ಅಕೌಂಟೆಂಟ್ ಸರಿಯಾದ ಸಂದರ್ಭದಲ್ಲಿ ಔದ್ಯೋಗಿಗಳಿಗೆ ಆರ್ಥಿಕವಾಗಿ ಸಲಹೆ ನೀಡುವುದರಿಂದ ದೇಶದ ಅರ್ಥಿಕತೆ ಹೆಚ್ಚು ಪ್ರಗತಿ ಕಾಣುತ್ತದೆ. ಪ್ರಗತಿಯಲ್ಲಿ ನಿಮ್ಮ ಪಾತ್ರ ದೊಡ್ಡದು’ ಎಂದರು.
‘ಸರಿಯಾದ ಸಂದರ್ಭದಲ್ಲಿ ತೆರಿಗೆಗೆ ಸಂಬಂಧಿಸಿದ ಮಾಹಿತಿ ಉದ್ಯೋಗಪತಿಗಳಿಗೆ ನೀಡುವ ಕೆಲಸ ಚಾರ್ಟರ್ಡ್ ಅಕೌಂಟೆಂಟ್ಸ್ ಮಾಡುತ್ತಾರೆ. ದೇಶದಲ್ಲಿ ಒಂದೇ ತೆರಿಗೆ ನೀತಿ ಮೋದಿಯವರು ಜಾರಿಗೆ ತಂದಿದ್ದಾರೆ. ಜಿಎಸ್ಟಿ ಜಾರಿಗೆ ತಂದಿದ್ದರಿಂದ ದೇಶದ ಅರ್ಥಿಕತೆ ಬೆಳವಣಿಗೆಗೆ ಸಹಕಾರ ಆಗಿದೆ’ ಎಂದರು.
ಅನಿಲ ಬೆನಕೆ, ಎಂ.ಬಿ ಜಿರಳಿ, ಜಿತೇಶ ಗಬ್ಬುರ, ವಿಲಾಸ್ ಹಾಲಬಾವಿ, ದಿಪ್ತಿ ಅಡಕೆ, ಅರವಿಂದ ದೇಶಪಾಂಡೆ ಸೇರಿದಂತೆ ಅನೇಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.