ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ಅಶ್ಲೀಲ ಸಂದೇಶಗಳ ಸ್ಕ್ರೀನ್ ಶಾಟ್‌, ಆಡಿಯೊ ಪತ್ತೆ

Published : 6 ಸೆಪ್ಟೆಂಬರ್ 2024, 20:18 IST
Last Updated : 6 ಸೆಪ್ಟೆಂಬರ್ 2024, 20:18 IST
ಫಾಲೋ ಮಾಡಿ
Comments

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಅವರ ಪ್ರೇಯಸಿ ಪವಿತ್ರಾಗೌಡ ಹಾಗೂ ಸಹಚರರ ವಿರುದ್ಧ ಭರಪೂರ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಕಲೆಹಾಕಿರುವ ತನಿಖಾಧಿಕಾರಿಗಳು, ಅವುಗಳನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಫೋಟೊ, ವಾಟ್ಸ್ಆ್ಯಪ್ ಕರೆಗಳ ವಿವರ ಹಾಗೂ ರೇಣುಕಸ್ವಾಮಿ ಕಳುಹಿಸಿದ್ದ ಅಶ್ಲೀಲ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಕಲೆ ಹಾಕಿದ್ದಾರೆ. ಇವೆಲ್ಲವೂ ಪ್ರಕರಣದಲ್ಲಿ ಪ್ರಮುಖ ತಾಂತ್ರಿಕ ಸಾಕ್ಷ್ಯಾಧಾರ ಆಗಲಿದ್ದು, ಈ ಎಲ್ಲ ಮಾಹಿತಿಯನ್ನೂ ಆರೋಪ ಪಟ್ಟಿಯಲ್ಲಿ ವಿವರಿಸಿದ್ದಾರೆ.

‘ಜೂನ್‌ 8ರಂದು ರೇಣುಕಸ್ವಾಮಿಯ ಕೊಲೆ ನಡೆದಿತ್ತು. ಹಲ್ಲೆ ಬಳಿಕ ಅವರು ಮೃತಪಟ್ಟಿದ್ದರು. ಇದರಿಂದ ಗಾಬರಿಗೊಂಡಿದ್ದ ಎಲ್ಲ ಆರೋಪಿಗಳು, ಸಾಕ್ಷ್ಯನಾಶ ಹಾಗೂ ಮೃತದೇಹ ಎಸೆಯಲು ಸಂಚು ರೂಪಿಸಿದ್ದರು. ಎಲ್ಲರೂ ಅಂದು ತಡರಾತ್ರಿ ವರೆಗೂ ವಾಟ್ಸ್‌ಆ್ಯಪ್‌ನಲ್ಲಿ ಪರಸ್ಪರ ಕರೆ ಮಾಡಿ, ಚರ್ಚಿಸಿದ್ದರು.‌ ಆ ಎಲ್ಲ ಮಾಹಿತಿಯನ್ನೂ ಕಲೆ ಹಾಕಲಾಗಿದೆ’ ಎಂದು ಮೂಲಗಳ ತಿಳಿಸಿವೆ.

‘ಆರೋಪಿಗಳು ವಾಟ್ಸ್‌ಆ್ಯಪ್‌ನಲ್ಲಿ 32 ಬಾರಿ ಪರಸ್ಪರ ಸಂಭಾಷಣೆ ನಡೆಸಿದ್ದಾರೆ. ಜೂನ್‌ 8ರಿಂದ 11ರ ನಸುಕಿನ ವರೆಗೆ ದರ್ಶನ್‌ ಹಾಗೂ ಪ್ರದೂಷ್‌ ಮಧ್ಯೆ ಹಲವು ಬಾರಿ ವಾಟ್ಸ್‌ಆ್ಯಪ್‌ನಲ್ಲಿ ಮಾತುಕತೆ ನಡೆದಿತ್ತು. ಆರೋಪಿ ವಿನಯ್ ಮೊಬೈಲ್‌ನಲ್ಲಿ 10 ಫೋಟೊಗಳು ಪತ್ತೆಯಾಗಿವೆ. ರೇಣುಕಸ್ವಾಮಿಯನ್ನು ಚಿತ್ರದುರ್ಗದಲ್ಲಿ ಹಿಂಬಾಲಿಸಿ ತೆಗೆದ ಫೋಟೊ, ಪಟ್ಟಣಗೆರೆ ಶೆಡ್‌ಗೆ ರೇಣುಕಸ್ವಾಮಿ ಕರೆತಂದಿದ್ದ ವೇಳೆ ತೆಗೆದ ಫೋಟೊ, ರೇಣುಕಸ್ವಾಮಿ ಮೇಲೆ ಹಲ್ಲೆ ನಡೆಸಿರುವ ಫೋಟೊ ಸಂಗ್ರಹಿಸಲಾಗಿದೆ. ದೀಪಕ್ ಮೊಬೈಲ್‌ನಲ್ಲಿದ್ದ ಆಡಿಯೊ ಸಂಭಾಷಣೆಯೂ ಪತ್ತೆಯಾಗಿದೆ’ ಎಂದು ಪೊಲೀಸರು ಹೇಳಿದರು.

‘ಪವಿತ್ರಾಗೌಡ ಬಳಸುತ್ತಿದ್ದ ಐ–ಫೋನ್‌ನಲ್ಲಿದ್ದ ಫೋಟೊಗಳನ್ನು ಅಳಿಸಿ ಹಾಕಲಾಗಿತ್ತು. ಅದನ್ನು ಸೈಬರ್‌ ತಜ್ಞರು ಮರು ಸಂಗ್ರಹಿಸಿದ್ದಾರೆ. ರೇಣುಕಸ್ವಾಮಿ ಕಳುಹಿಸಿದ್ದ ಅಶ್ಲೀಲ ಸಂದೇಶ ಹಾಗೂ ಫೋಟೊಗಳನ್ನು ಪವಿತ್ರಾಗೌಡ ಸ್ಕ್ರೀನ್‌ಶಾಟ್‌ ತೆಗೆದು ಇಟ್ಟುಕೊಂಡಿದ್ದರು. ಮರು ಸಂಗ್ರಹದ ವೇಳೆ ಆ ಸ್ಕ್ರೀನ್‌ಶಾಟ್‌ಗಳು ಕೂಡ ಪತ್ತೆಯಾಗಿವೆ’ ಎಂದು ಪೊಲೀಸರು ಹೇಳಿದರು.

‘ರೇಣುಕಸ್ವಾಮಿಯೇ ಅಶ್ಲೀಲ ಸಂದೇಶ ಕಳುಹಿಸಿದ್ದು ಎಂದು ಗೊತ್ತಾದ ಮೇಲೆ ಅಪಹರಿಸಿ ನಗರಕ್ಕೆ ಕರೆತರುವಂತೆ ರಾಘವೇಂದ್ರ ಅವರಿಗೆ ದರ್ಶನ್‌ ಸೂಚಿಸುತ್ತಾರೆ. ಪಟ್ಟಣಗೆರೆ ಶೆಡ್‌ಗೆ ಕರೆತಂದಾಗ, ಪವಿತ್ರಾಗೌಡ ಚಪ್ಪಲಿಯಿಂದ ಹಲ್ಲೆ ನಡೆಸುತ್ತಾರೆ. ಅದೇ ಚಪ್ಪಲಿ ಕಸಿದುಕೊಂಡು ದರ್ಶನ್‌ ಸಹ ಹಲ್ಲೆ ನಡೆಸಿದ್ದಾರೆ. ರೇಣುಕಸ್ವಾಮಿ ಎದೆಗೆ ದರ್ಶನ್‌ ಒದೆಯುತ್ತಾರೆ. ನಿನ್ನ ಸಂಬಳ ಎಷ್ಟೋ? ತಿಂಗಳಿಗೆ ₹20 ಸಾವಿರ ಸಂಬಳವಿರುವ ನೀನು, ನನ್ನ ಪ್ರೇಯಿಸಿಯನ್ನು ಸಾಕ್ತೀಯಾ? ಅವಳ ದಿನದ ಖರ್ಚು ಎಷ್ಟು ಗೊತ್ತಾ ಎಂದು ಹೇಳಿ ಹಲ್ಲೆ ನಡೆಸಿದ್ದರು’ ಎಂದು ಮೂಲಗಳು ತಿಳಿಸಿವೆ.

ದರ್ಶನ್‌ 
ದರ್ಶನ್‌ 

‘ಸೂಪರ್‌ ಬ್ಯೂಟಿ...’

‘ಇನ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆದು ಫೆಬ್ರುವರಿಯಿಂದ ಪವಿತ್ರಾಗೌಡ ಅವರಿಗೆ ರೇಣುಕಸ್ವಾಮಿ ಸಂದೇಶ ಕಳುಹಿಸುತ್ತಿದ್ದರು. ಆರಂಭದಲ್ಲಿ ಸುಮ್ಮನಾಗಿದ್ದ ಪವಿತ್ರಾಗೌಡ ಜೂನ್‌ 5ರ ಬಳಿಕ ಪದೇ ಪದೇ ಅಶ್ಲೀಲ ಸಂದೇಶ ಕಳುಹಿಸಿದ್ದರಿಂದ ರೇಣುಕಸ್ವಾಮಿ ಮೊಬೈಲ್‌ ಸಂಖ್ಯೆ ಕೇಳಿದ್ದರು. ಆ ಮೊಬೈಲ್ ಸಂಖ್ಯೆ ಪಡೆದು ಪವನ್‌ಗೆ ನೀಡಿದ್ದರು’ ಎಂದು ಗೊತ್ತಾಗಿದೆ. ‘ಹಾಯ್‌... ಗುಡ್‌ನೈಟ್‌ ಸ್ವೀಟ್‌ ಡ್ರೀಮ್ಸ್‌ ನಿನ್ ನಂಬರ್‌ ಕಳುಹಿಸು ನೀನು ಏನ್‌ ನಿರೀಕ್ಷೆ ಮಾಡ್ತೀಯಾ ಸೂಪರ್ ಬ್ಯೂಟಿ ನಿನ್ನ ಅಭಿಮಾನಿ ಆಗಿಬಿಟ್ಟಿದ್ದೀನಿ...’ ಎಂದು ಸಂದೇಶ ಕಳುಹಿಸಿದ್ದರು. ಆ ವಿವರವನ್ನು ತನಿಖಾಧಿಕಾರಿಗಳು ಪಡೆದಿದ್ದಾರೆ. ಪವಿತ್ರಾ ಹೆಸರಿನಲ್ಲಿ ಪವನ್‌ ಸಂದೇಶ ಕಳುಹಿಸಿ ರೇಣುಕಸ್ವಾಮಿ ಫೋಟೊ ಹಾಗೂ ಕೆಲಸ ಮಾಡುತ್ತಿದ್ದ ಸ್ಥಳದ ವಿವರವನ್ನು ಪಡೆದುಕೊಂಡಿದ್ದರು ಎಂದು ಗೊತ್ತಾಗಿದೆ.

ಪೊಲೀಸರಿಗೆ ಲಭಿಸಿದ ಸಾಕ್ಷ್ಯಾಧಾರಗಳು

* ಪವಿತ್ರಾಗೌಡ ಅವರ ಮೊಬೈಲ್‌ ಸಂಖ್ಯೆಗಳನ್ನು ಮೂರು ಹೆಸರುಗಳಲ್ಲಿ ದಾಖಲಿಸಿಕೊಂಡಿದ್ದ ದರ್ಶನ್ * ‘ಗೌತಮ್‌’ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಿಂದ ಸಂದೇಶ ಕಳುಹಿಸುತ್ತಿದ್ದ ರೇಣುಕಸ್ವಾಮಿ * ರೇಣುಕಸ್ವಾಮಿ ಅಪಹರಿಸಿ ಕರೆತರುವಾಗ ತುಮಕೂರಿನ ಬಾರ್‌ನಲ್ಲಿ ಮದ್ಯ ಖರೀದಿಸಿದ್ದ ಆರೋಪಿಗಳು * ಕೃತ್ಯ ನಡೆದ ದಿನ ಪತ್ನಿ ಸಹನಾ ಜತೆಗೆ ಸಂಭಾಷಣೆ ನಡೆಸಿದ್ದ ಆರೋಪಿ ರಾಘವೇಂದ್ರ

ದರ್ಶನ್‌ ಸಹಚರರ ಪಾತ್ರ?

ಕೆ.ಪವನ್‌(ಪವಿತ್ರಾಗೌಡ ವ್ಯವಸ್ಥಾಪಕ): ದರ್ಶನ್‌ ಸಲಹೆಯಂತೆ ರೇಣುಕಸ್ವಾಮಿ ಅಪಹರಣಕ್ಕೆ ರಾಘವೇಂದ್ರಗೆ ಸೂಚನೆ

ರಾಘವೇಂದ್ರ(ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ): ದರ್ಶನ್‌ ಅವರನ್ನು ಭೇಟಿ ಮಾಡಿಸುವುದಾಗಿ ರೇಣುಕಸ್ವಾಮಿಗೆ ಆಮಿಷವೊಡ್ಡಿದ್ದರು. ರೇಣುಕಸ್ವಾಮಿ ಒಪ್ಪದಿದ್ದಾಗ ಅಪಹರಣ ತಂಡದ ನೇತೃತ್ವ ವಹಿಸಿದ್ದರು. ಹಲ್ಲೆ ಕೊಲೆಗೆ ಸಹಕಾರ ರೇಣುಕಸ್ವಾಮಿ ಮೈಮೇಲಿದ್ದ ಚಿನ್ನಾಭರಣ ದರೋಡೆ

ನಂದೀಶ(ಕೆ.ಪವನ್ ಸ್ನೇಹಿತ): ಹಲ್ಲೆ ಕೊಲೆ ಬಳಿಕ ವಾಹನದಲ್ಲಿ ಮೃತದೇಹ ಇಟ್ಟಿದ್ದರು

ಜಗದೀಶ್ ಅಲಿಯಾಸ್ ಜಗ್ಗ ಹಾಗೂ ಅನುಕುಮಾರ್(ಚಿತ್ರದುರ್ಗದವರು): ಅಪಹರಣಕ್ಕೆ ಸಹಕಾರ ಹಲ್ಲೆ ರವಿ ಅಲಿಯಾಸ್

ರವಿಶಂಕರ್ (ಕಾರು ಚಾಲಕ): ರಾಘವೇಂದ್ರನ ಜತೆಗೆ ಸೇರಿ ರೇಣುಕಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕಾರಿನಲ್ಲಿ ಕರೆತಂದಿದ್ದರು

ಧನರಾಜ್‌(ದರ್ಶನ್ ಆಪ್ತ): ರೇಣುಕಸ್ವಾಮಿಗೆ ಮೆಗ್ಗರ್ ಉಪಕರಣದಿಂದ ಎಲೆಕ್ಟ್ರಿಕ್ ಶಾಕ್ ಕೊಟ್ಟಿದ್ದರು

ವಿನಯ್(ದರ್ಶನ್ ಆಪ್ತ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲೀಕ): ಹಲ್ಲೆ ಪ್ರಕರಣ ಮುಚ್ಚಿ ಹಾಕಲು ದರ್ಶನ್‌ರಿಂದ ಹಣ ಪಡೆದು ಶರಣಾದ ಮೂವರಿಗೆ ನೀಡಿದ್ದರು

ನಾಗರಾಜು(ದರ್ಶನ್ ವ್ಯವಸ್ಥಾಪಕ): ಅಪಹರಣಕ್ಕೆ ಸಹಕಾರ ಹಲ್ಲೆ.

ಲಕ್ಷ್ಮಣ್(ದರ್ಶನ್ ಕಾರು ಚಾಲಕ): ಕೃತ್ಯಕ್ಕೆ ಸಹಕಾರ ಮೃತದೇಹ ಸಾಗಾಟಕ್ಕೆ ಸಹಾಯ

ದೀಪಕ್(ದರ್ಶನ್ ವಿನಯ್ ಆಪ್ತ): ಪ್ರಕರಣ ಮುಚ್ಚಿ ಹಾಕಲು ದರ್ಶನ್‌ರಿಂದ ಹಣ ಪಡೆದಿದ್ದರು‌

ಪ್ರದೂಷ್‌(ದರ್ಶನ್ ಆಪ್ತ ಸಾಫ್ಟ್‌ವೇರ್‌ ಎಂಜಿನಿಯರ್‌): ಪ್ರಕರಣ ಮುಚ್ಚಿ ಹಾಕಲು ದರ್ಶನ್ ಆಪ್ತರೊಬ್ಬರಿಂದ ₹30 ಲಕ್ಷ ತಂದಿದ್ದರು

ಕಾರ್ತಿಕ್(ಪಟ್ಟಣಗೆರೆ ಶೆಡ್‌ನಲ್ಲಿ ಕೆಲಸ): ವಿನಯ್ ದೀಪಕ್ ಪ್ರದೂಷ್ ಸೂಚನೆ ಮೇರೆಗೆ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ಶರಣು

ಕೇಶವಮೂರ್ತಿ(ಗಿರಿನಗರ ನಿವಾಸಿ) ಹಾಗೂ ನಿಖಿಲ್

ನಾಯಕ್ (ಬನ್ನೇರುಘಟ್ಟ ಮುಖ್ಯರಸ್ತೆಯ ನಿವಾಸಿ): ಕೃತ್ಯದ ನಂತರ ಮುಂಗಡ ತಲಾ ₹5 ಲಕ್ಷ ಪಡೆದುಕೊಂಡು ಮೃತದೇಹ ಸಾಗಾಟ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ಶರಣು

ಕೊಲೆ ರಹಸ್ಯ

32 ಜೂನ್ 8ರಂದು ರಾತ್ರಿ ಆರೋಪಿಗಳ ಮಧ್ಯೆ ನಡೆದ ವಾಟ್ಸ್‌ಆ್ಯಪ್‌ ಕರೆಗಳು 10 

ಕೃತ್ಯ ನಡೆದ ರಾತ್ರಿ ಪ್ರದೂಷ್‌ ಹಾಗೂ ದರ್ಶನ್‌ ಮಧ್ಯೆ ನಡೆದ ವಾಟ್ಸ್‌ಆ್ಯಪ್‌ ಕರೆಗಳು 17 

ರೇಣುಕಸ್ವಾಮಿ ಕಳುಹಿಸಿದ್ದ ಅಶ್ಲೀಲ ಸಂದೇಶಗಳ ಸ್ಕ್ರೀನ್‌ಶಾಟ್‌ಗಳ ಮರು ಸಂಗ್ರಹ

ರಾಘವೇಂದ್ರ ಹೆಗಲಿಗೆ ಕಟ್ಟಲು ಸಂಚು

‘ರೇಣುಕಸ್ವಾಮಿ ಮೃತಪಟ್ಟ ತಕ್ಷಣವೇ ಕೊಲೆಯನ್ನು ಚಿತ್ರದುರ್ಗದ ರಾಘವೇಂದ್ರನ ಹೆಗಲಿಗೆ ಕಟ್ಟಲು ನಟ ದರ್ಶನ್‌ ಪ್ರದೂಷ್‌ ಹಾಗೂ ವಿನಯ್‌ ಪ್ರಯತ್ನಿಸಿದ್ದರು. ನಿಖಿಲ್‌ ನಾಯಕ್‌ ಕಾರ್ತಿಕ್‌ ಹಾಗೂ ಕೇಶವಮೂರ್ತಿ ಜತೆಗೆ ರಾಘವೇಂದ್ರ ಅವರಿಗೂ ಶರಣಾಗುವಂತೆ ಸೂಚಿಸಿದ್ದರು. ಆಗ ರಾಘವೇಂದ್ರ ನಿರಾಕರಿಸಿದ್ದರು. ‘ನೀನು ಶರಣಾಗದಿದ್ದರೆ ಕೊಲೆ ಪ್ರಕರಣವನ್ನು ಚಿತ್ರದುರ್ಗದಲ್ಲಿ ನಡೆದ ಹಣಕಾಸಿನ ವ್ಯವಹಾರ ಎಂಬುದಾಗಿ ಸಂಬಂಧ ಕಲ್ಪಿಸಲು ಸಾಧ್ಯ ಆಗುವುದಿಲ್ಲ’ ಎಂದು ಮನವೊಲಿಸಲು ಪ್ರಯತ್ನಿಸಿದ್ದರು. ಕೊನೆಯಲ್ಲಿ ದರ್ಶನ್‌ ಸೂಚನೆಯಂತೆ ರಾಘವೇಂದ್ರ ಒಪ್ಪಿಕೊಂಡು ಹಣಕಾಸಿನ ವಿಚಾರಕ್ಕೆ ಕೊಲೆ ನಡೆಸಿರುವುದಾಗಿ ಹೇಳಿ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಶರಣಾಗಿದ್ದರು’ ಎಂದು ಮೂಲಗಳು ತಿಳಿಸಿವೆ. ಈ ವಿವರವನ್ನು ದೋಷಾರೋಪಪಟ್ಟಿಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT