ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ಮುನ್ನೇಕೊಳಾಲ ಕೆರೆ ನೀರನ್ನು ಪಕ್ಕದ ಉದ್ಯಾನ ಪೋಷಣೆಗೆ ಬಳಸಲಾಗುತ್ತಿದ್ದು, ಇದರಿಂದಾಗಿ ಕೆರೆ ನೀರು ಬರಿದಾಗುವ ಆತಂಕ ಎದುರಾಗಿದೆ.
ಈ ಕೆರೆಯು 15 ಎಕರೆ 16 ಗುಂಟೆ ವಿಸ್ತಾರ ಹೊಂದಿದೆ. ಆದರೆ, 7 ಎಕರೆ ಪ್ರದೇಶದಲ್ಲಿ ಮಾತ್ರ ನೀರು ನಿಲ್ಲುತ್ತದೆ.
ಈ ಕೆರೆಯನ್ನು ಬಿಬಿಎಂಪಿ ಅಭಿವೃದ್ಧಿಪಡಿಸಿದೆ. ಇದರ ಪಕ್ಕದಲ್ಲಿ ಉದ್ಯಾನ ನಿರ್ಮಿಸಿ, ಗಿಡಮರಗಳನ್ನು ಬೆಳೆಸಿದೆ. ಉದ್ಯಾನದ ನಿರ್ವಹಣೆಯ ಹೊಣೆಯನ್ನು ಸರ್ಕಾರೇತರ ಸಂಸ್ಥೆಯೊಂದು ವಹಿಸಿಕೊಂಡಿದ್ದು, ನಾಲ್ಕು ವರ್ಷಗಳಿಂದ ಪಂಪ್ಸೆಟ್ ಮೂಲಕ ಕೆರೆಯ ನೀರನ್ನು ಈ ಸಲುವಾಗಿ ಬಳಸಿಕೊಳ್ಳುತ್ತಿದೆ.
ಈ ಕೆರೆ ಅಭಿವೃದ್ಧಿ ಪಡಿಸಿದ ಬಳಿಕ ಮಳೆ ನೀರೂ ಸೇರದಂತೆ ಮಾಡಲಾಗಿದೆ. ಈ ವರ್ಷ ಮಳೆಯ ಪ್ರಮಾಣ ಕಡಿಮೆ ಇತ್ತು. ಹಾಗಾಗಿ ಕೆರೆ ತುಂಬಿರಲಿಲ್ಲ. ನಿತ್ಯವೂ ನೀರೆತ್ತಿದರೆ ಜಲಚರಗಳಿಗೆ ಸಂಚಕಾರ ಎದುರಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.
‘ಅಭಿವೃದ್ಧಿಯ ಹೆಸರಿನಲ್ಲಿ ಕೆರೆಯ ಅಸ್ತಿತ್ವಕ್ಕೆ ತಕ್ಕೆ ತರುವ ಕೆಲಸ ನಡೆದಿದೆ. ಕೆರೆ ಬರಿದಾಗುವುದನ್ನು ತಡೆಯುವಂತೆ ಕೋರಿ ಈಗಾಗಲೇ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ನಿವಾಸಿ ರಾಜಣ್ಣ ತಿಳಿಸಿದರು.
‘ನೀರು ಖಾಲಿಯಾದ್ದರಿಂದ ವಲಸೆ ಹಕ್ಕಿಗಳು ಸಹ ತಮ್ಮ ಆವಾಸಸ್ಥಾನಗಳನ್ನು ಬದಲಿಸಿಕೊಂಡಿವೆ. ಮೊದಲು ಬರುತ್ತಿದ್ದ ಹಕ್ಕಿಗಳು ಈಗ ಬರುತ್ತಿಲ್ಲ’ ಎಂದರು.