ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ | ಲಾಭದ ಕನವರಿಕೆ: ಆಹಾರ ಕಲಬೆರಕೆ

ತಿರುಪತಿ ತಿಮ್ಮಪ್ಪನ ಲಾಡುವನ್ನೂ ಬಿಡದ ಬೆರಕೆ ಭೂತ!
Published : 5 ಅಕ್ಟೋಬರ್ 2024, 23:30 IST
Last Updated : 5 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

ದಾವಣಗೆರೆ: ತಿರುಪತಿಯ ತಿಮ್ಮಪ್ಪನ ದೇವಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ನೀಡುವ ಲಾಡು ಸಿದ್ಧಪಡಿಸಲು ತರಿಸಿದ್ದ ತುಪ್ಪದಲ್ಲಿ ಕಲಬೆರಕೆ ಆಗಿದ್ದು ದೇಶದಾದ್ಯಂತ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಾದ್ಯಂತ ಸಂಚಲನವನ್ನೇ ಮೂಡಿಸಿದೆ.

ಆಂಧ್ರಪ್ರದೇಶದಲ್ಲಿ ಈ ಹಿಂದೆ ಅಸ್ತಿತ್ವ ದಲ್ಲಿದ್ದ ವೈಎಸ್‌ಆರ್‌ ಕಾಂಗ್ರೆಸ್‌ನ ಜಗನ್‌ಮೋಹನ ರೆಡ್ಡಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಲಾಡು ತಯಾರಿಕೆಗೆ ತರಿಸಿದ್ದ ತುಪ್ಪದಲ್ಲಿ ಪ್ರಾಣಿಯ ಕೊಬ್ಬು ಮತ್ತು ಮೀನಿನ ಎಣ್ಣೆಯ ಅಂಶಗಳು ಪತ್ತೆಯಾಗಿರುವುದನ್ನು ಗುಜರಾತ್‌ನ ಆನಂದ್‌ನಲ್ಲಿರುವ ಜಾನುವಾರು ಹಾಗೂ ಆಹಾರ ಕುರಿತ ವಿಶ್ಲೇಷಣೆ ಮತ್ತು ಕಲಿಕಾ ಕೇಂದ್ರದ ಪ್ರಯೋಗಾಲಯದ ವರದಿ ತಿಳಿಸಿದೆ.

ಆಹಾರದಲ್ಲಿ ಕಲಬೆರಕೆ ಸಾರ್ವತ್ರಿಕವಾಗಿದ್ದು, ರುಚಿ ಹೆಚ್ಚಳಕ್ಕೆ ಪೂರಕವಾದ, ವಿಷಕಾರಿ ಅಂಶಗಳಿರುವ, ನಿಷೇಧಿತ ಪದಾರ್ಥಗಳನ್ನು ಬೆರೆಸಿ ಮಾರಾಟ ಮಾಡುವುದು ಒಂದೆಡೆಯಾದರೆ, ಲಾಭಕೋರತನವನ್ನೇ ಗುರಿಯಾಗಿಸಿಕೊಂಡು, ಶುದ್ಧವಾದ ಆಹಾರದ ಹದ ಕೆಡಿಸುತ್ತಿರುವ ಬಹುದೊಡ್ಡ ‘ಮಾಫಿಯಾ’ ಸಕ್ರಿಯವಾಗಿದೆ. ಕಲಬೆರಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದ್ದ ಆಡಳಿತ ವ್ಯವಸ್ಥೆ ನಿಷ್ಕ್ರಿಯವಾಗಿರುವುದು ಬಹಿರಂಗ ಸತ್ಯವಾಗಿದೆ.

ಹೋಟೆಲ್‌, ಬೀದಿಬದಿಯ ತಿಂಡಿ ಅಂಗಡಿಗಳಲ್ಲಿ ಗ್ರಾಹಕರನ್ನು ಸೆಳೆಯಲು, ಕಲಬೆರಕೆ ನಡೆಯುತ್ತದೆ. ಅದು ಆರೋಗ್ಯಕ್ಕೆ ಮಾರಕ ಎಂಬುದನ್ನರಿತು ಎಚ್ಚೆತ್ತುಕೊಂಡ ಸರ್ಕಾರಗಳು, ಕೆಲವು ನಿಷೇಧಿತ ಪದಾರ್ಥ ಬಳಸದಂತೆ ತಡೆಯಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಜಾರಿಗೆ ಆದೇಶ ನೀಡಲಾಗಿದೆ. ಹೋಟೆಲ್‌ಗಳ ಮೇಲೆ ಅಧಿಕಾರಿಗಳು ನಿಗಾ ಇರಿಸಿ, ಕಾನೂನು ಕ್ರಮ ಕೈಗೊಳ್ಳಬೇಕಿದೆ. ಇತ್ತೀಚಿನ ದಿನಗಳಲ್ಲಿ ಅಂಥ ಪ್ರಯತ್ನ ಆಗಿದೆ ಎಂದು ಅಧಿಕಾರಿಗಳ ವಲಯ ತಿಳಿಸುತ್ತದಾದರೂ, ಸೂಕ್ತ ಕ್ರಮ ಕೈಗೊಂಡ ಬಗ್ಗೆ ಪೂರಕವಾದ ಪುರಾವೆಗಳನ್ನು ಒದಗಿಸುವಲ್ಲಿ ವಿಫಲವಾಗಿದೆ.

ಬಾಳೆ, ಮಾವು, ದ್ರಾಕ್ಷಿ, ಸೇಬು ಸೇರಿದಂತೆ ನಿತ್ಯವೂ ಜನರು ಬಳಸುವ ಹಣ್ಣುಗಳು ಬೇಗನೇ ಮಾಗಲಿ ಎಂದು ಕ್ಯಾಲ್ಶಿಯಂ ಕಾರ್ಬೈಡ್‌ ರಾಸಾಯನಿಕವನ್ನು ಬಳಸುವುದು ಜಗಜ್ಜಾಹಿರ. ಇದರ ತಡೆಗೆ ಕ್ರಮ ಆಗದಿರುವುದು ಆರೋಗ್ಯಕ್ಕೆ ಮಾರಕವಾದ ದುಷ್ಕೃತ್ಯ ಅವ್ಯಾಹತವಾಗಿ ನಡೆಯಲು ಕಾರಣ.

ಇನ್ನು ಆಹಾರ ಧಾನ್ಯಗಳಾದ ಅಕ್ಕಿ, ಬೇಳೆ, ಬೆಲ್ಲ, ರವೆ, ಅಡುಗೆ ಎಣ್ಣೆ, ಹಾಲು, ತುಪ್ಪ, ಮೊಸರು, ಮೊಟ್ಟೆ, ಮಾಂಸ, ಮೀನು, ಅಡಿಕೆ, ಮಸಾಲೆ ಮತ್ತಿತರ ಪದಾರ್ಥ ಪರಿಶುದ್ಧವಾಗಿಲ್ಲ, ಎಲ್ಲಾ ಕಡೆ ಕಲಬೆರಕೆ ಎಂಬುದು ಸಾಮಾನ್ಯ ಎಂಬಂತಾಗಿದೆ.

ಪಡಿತರ ವ್ಯವಸ್ಥೆ ಅಡಿ ಫಲಾನುಭವಿಗಳಿಗೆ ಉಚಿತವಾಗಿ ಸಿಗುವ ಅಕ್ಕಿಯನ್ನು ಖರೀದಿಸಿ ಮರು ಮಾರಾಟ ಮಾಡುವ ದೊಡ್ಡ ಜಾಲವೇ ಸಕ್ರಿಯವಾಗಿದೆ. ₹ 10ರಿಂದ ₹ 15ಕ್ಕೆ  ಒಂದು ಕೆ.ಜಿ. ಅಕ್ಕಿ ಖರೀದಿಸಿ, ಪಾಲಿಶ್‌ ಮಾಡಿ ಅದನ್ನು ಪ್ಯಾಕ್‌ ಮಾಡಿ, ಸಾಗಿಸುವ ಜಾಲ ಬಹುತೇಕ ಎಲ್ಲಾ ನಗರಗಳಲ್ಲಿದೆ.

ಗ್ರಾಮ, ನಗರ ಪ್ರದೇಶಗಳಲ್ಲಿ ಪಡಿತರ ಅಕ್ಕಿ ಖರೀದಿಸಲಾಗುತ್ತದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ರೈತರಿಗಾಗಿಯೇ ಇರುವ ‘ನೋಂದಣಿಯಾಗದ ಡೀಲರ್‌’ (ಅನ್ ರಿಜಿಸ್ಟರ್ಡ್‌ ಡೀಲರ್‌) ಎಂಬ ಹೆಸರಿನ ಬಿಲ್‌ ಪಡೆಯುವ (ಇದಕ್ಕಾಗಿ ನಿಗದಿಯಾಗಿರುವ ಅತ್ಯಂತ ಕಡಿಮೆ ಶುಲ್ಕವನ್ನೂ ಭರಿಸಲಾಗುತ್ತದೆ) ಮೂಲಕ ಅಕ್ರಮ ಅಕ್ಕಿಗೆ ‘ಅಧಿಕೃತತೆಯ’ ಮುದ್ರೆ ಪಡೆದು ಲಾರಿಗಳಲ್ಲಿ ತುಂಬಿ ಸಾಗಿಸಿ ಲಾಭ ಮಾಡಿಕೊಳ್ಳಲಾಗುತ್ತಿದೆ.

ಇಂಥ ಅಕ್ಕಿ ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದ ಮತ್ತೆ ಕೇಂದ್ರ ಸರ್ಕಾರದ ಗೋದಾಮು ಸೇರಿ, ಅಲ್ಲಿಂದ ಆಯಾ ರಾಜ್ಯಗಳಿಗೆ ತಲುಪಿ ಮತ್ತೆ ಪಡಿತರ ವ್ಯವಸ್ಥೆಯಡಿ ಮತ್ತೆ ಪೂರೈಕೆಯಾಗುತ್ತಿದೆ.

ಇನ್ನು, ಸ್ಥಳೀಯವಾಗಿಯೇ ಇರುವ ಕೆಲವು ಅಕ್ಕಿ ಗಿರಣಿಗಳಲ್ಲಿ, ಈ ರೀತಿ ಅಕ್ರಮವಾಗಿ ಖರೀದಿಸಲಾದ ಪಡಿತರ ಅಕ್ಕಿಗೆ ಪಾಲಿಷ್‌ ಮಾಡಿ, ಅಧಿಕ ದರದ ಅಕ್ಕಿಯಲ್ಲಿ ಬೆರೆಸುವ ದಂಧೆ ನಡೆಯುತ್ತದೆ. ಇದೇ ಅಕ್ಕಿಯನ್ನು ಕೆಲವು ಕಡೆ ದೋಸೆ ಹಿಟ್ಟು ಮಾಡಲೂ ಬಳಸಲಾಗುತ್ತಿದೆ. ಗೋಧಿಯಿಂದ ಸಿದ್ಧವಾಗುವ ರವೆಯಲ್ಲಿ ಇಂಥ ಅಕ್ಕಿಯ ರವೆಯನ್ನು ಬೆರೆಸಿ ಮಾರಾಟ ಮಾಡುವ ಮೂಲಕವೂ ಲಾಭ ಮಾಡಿಕೊಳ್ಳಲಾಗುತ್ತಿದೆ. ಗೋಧಿ ರವೆಯಲ್ಲಿ ಬೆರೆಸಲಾದ ಅಕ್ಕಿ ರವೆಯ ವ್ಯತ್ಯಾಸ ಅರಿಯಲೂ ಆಗದು ಎಂಬ ಕಾರಣಕ್ಕೇ ಇಂಥ ಕಲಬೆರಕೆ ನಡೆಯುತ್ತಲೇ ಇದೆ.

ಪರಿಶೀಲನೆ, ಸಮೀಕ್ಷೆ:

ಆಹಾರದಲ್ಲಿ ಕಲಬೆರಕೆ ಆಗಿದೆಯೇ ಎಂಬುದನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆ ಅಧೀನದಲ್ಲಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಸಿಬ್ಬಂದಿಯು ಹೋಟೆಲ್‌ಗಳಿಗೆ ದಿಢೀರ್‌ ಭೇಟಿ ನೀಡಿ, ಪ್ರತಿ ತಿಂಗಳೂ ಆಹಾರದ 30 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು ಎಂಬ ನಿಯಮವಿದೆ.

ಈ ಸಮೀಕ್ಷೆಗಳಲ್ಲಿ 25 ಸಾಮಾನ್ಯ ಹಾಗೂ 5 ಕಾನೂನುಬದ್ಧ ಸಮೀಕ್ಷೆಗಳಿದ್ದು, ಸಾಮಾನ್ಯ ಸಮೀಕ್ಷೆಯ ವೇಳೆ ಕಲಬೆರಕೆ ಪತ್ತೆಯಾದರೆ ನೋಟಿಸ್‌ ನೀಡಿ, ದಂಡ ವಸೂಲಿ ಮಾಡಿ ಸುಧಾರಣೆಗೆ ಅವಕಾಶ ನೀಡಲಾಗುತ್ತದೆ. ಆಗಲೂ ತಪ್ಪು ತಿದ್ದಿಕೊಳ್ಳದಿದ್ದಲ್ಲಿ ಕಾನೂನುಬದ್ಧ ಸಮೀಕ್ಷೆ ನಡೆಸಿ, ಕಲಬೆರಕೆ ಪತ್ತೆಯಾದರೆ ಪ್ರಕರಣ ದಾಖಲಿಸಲಾಗುತ್ತದೆ.ಆಹಾರ ಸಮೀಕ್ಷೆ ನಡೆಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದಾಗ ಹಾನಿಕಾರಕ ಅಂಶಗಳು ಪತ್ತೆಯಾದರೆ ಜೆಎಂಎಫ್‌ಸಿ ನ್ಯಾಯಾಲಯದ  ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುತ್ತದೆ. ಗರಿಷ್ಠ ₹ 5 ಲಕ್ಷ ದಂಡ ಹಾಗೂ ಕನಿಷ್ಠ 6 ತಿಂಗಳ ಜೀವಾವಧಿಯ ಜೈಲು ಶಿಕ್ಷೆ ಇದೆ. ಕಳಪೆ ಗುಣಮಟ್ಟ ಇದ್ದರೆ ಹೆಚ್ಚುವರಿ ಜಿಲ್ಲಾಧಿಕಾರಿ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ದಂಡವನ್ನು ಮಾತ್ರ ವಿಧಿಸಲು ಅವಕಾಶ ಇದೆ.

ವರದಿ ಸಲ್ಲಿಕೆ ವಿಳಂಬ:

ಆಹಾರದ ಮಾದರಿಗಳನ್ನು ಸಂಗ್ರಹಿಸಿದ ಅಧಿಕಾರಿಗಳು ಪ್ರಯೋಗಾಲಯಗಳಿಗೆ ಕಳುಹಿಸಿ ವರದಿ ಪಡೆಯಲು ಕನಿಷ್ಠ 1 ತಿಂಗಳು ಕಾಯಬೇಕಿದೆ. ಆಹಾರ ಕಲಬೆರಕೆ, ರಾಸಾಯನಿಕ ಪತ್ತೆ ಹಚ್ಚುವುದು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸವಾಲಾಗಿದೆ.

ಕಂದಾಯ ವಿಭಾಗಕ್ಕೆ ಒಂದರಂತೆ ರಾಜ್ಯದಲ್ಲಿ ನಾಲ್ಕು ಪ್ರಯೋಗಾಲಯಗಳಿವೆ. ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವ್ಯಾಪ್ತಿಯಲ್ಲಿ ಇವುಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರು ಪ್ರಯೋಗಾಲಯದ ವ್ಯಾಪ್ತಿಗೆ 12 ಜಿಲ್ಲೆಗಳು ಒಳಪಟ್ಟಿವೆ. ಎಲ್ಲ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿ ಸಕಾಲಕ್ಕೆ ವರದಿ ಪಡೆಯುವುದು ಅಸಾಧ್ಯವಾಗಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

1955ರಿಂದ 2011ರವರೆಗೆ ಆಹಾರ ಕಲಬೆರೆಕೆ ತಡೆ ಕಾಯ್ದೆ ಜಾರಿಯಲ್ಲಿತ್ತು. 2011ರಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಜಾರಿಗೆ ಬಂದಿದೆ. ಇದರಲ್ಲಿ ಕಲಬೆರಕೆ ಮಾತ್ರವಲ್ಲ ಆಹಾರದ ಸುರಕ್ಷತೆಯನ್ನು ಖಾತರಿಪಡಿಸಬೇಕಾಗುತ್ತದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಇದರ ಅನುಷ್ಠಾನದ ಜವಾಬ್ದಾರಿ ನೋಡಿಕೊಳ್ಳುತ್ತದೆ. ಸ್ಥಳೀಯ ಆಡಳಿತ, ಇಲಾಖೆಯ ಅಧಿಕಾರಿಗಳು ಸಮರ್ಪಕ ಅನುಷ್ಠಾನಕ್ಕೆ ಆದ್ಯತೆ ನೀಡಿದಲ್ಲಿ ಆಹಾರದಲ್ಲಿ ಕಲಬೆರಕೆ ನಿಯಂತ್ರಣ ಕಷ್ಟಸಾಧ್ಯವೇನಲ್ಲ.

–ಮಾಹಿತಿ: ವಿವಿಧ ಬ್ಯೂರೊಗಳಿಂದ

ರಾಜ್ಯದಲ್ಲೂ ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.ಗುಣ ಮಟ್ಟದ ಪದಾರ್ಥಗಳ ಖರೀದಿಗೆ ಜನಜಾಗೃತಿ ಮೂಡಿಸಲಾಗುತ್ತಿದೆ.
ಕೆ.ಎಚ್. ಮುನಿಯಪ್ಪ, ಆಹಾರ ಸಚಿವ
‘ಶುದ್ಧ’ ಹೆಸರಿನಲ್ಲಿ ಅಶುದ್ಧ ನೀರು!
ಅನೇಕ ಕಡೆ ನದಿ ನೀರನ್ನು ಶುದ್ಧೀಕರಿಸಿ ಪೂರೈಕೆಯಾತ್ತಿದ್ದರೂ ಜನರು ಶುದ್ಧ ಕುಡಿಯುವ ನೀರಿಗಾಗಿ ಇನ್ನೂ ಖಾಸಗಿ ನೀರಿನ ಘಟಕಗಳನ್ನು ಆಶ್ರಯಿಸುವುದು ತಪ್ಪಿಲ್ಲ. ಆದರೆ, ಅಂಥ ಬಹುಪಾಲು ಶುದ್ಧ ನೀರಿನ ಘಟಕಗಳಲ್ಲಿನ ನೀರು ಹೆಸರಿಗಷ್ಟೇ ಶುದ್ಧವಾಗಿರುತ್ತದೆ ಎನ್ನುವ ಆರೋಪವಿದೆ. ನಿಗದಿತ ಮಾನದಂಡಗಳನ್ನು ಪಾಲಿಸದ ಖಾಸಗಿ ಘಟಕಗಳು ಪೂರೈಸುವ ಬಾಟಲಿ ನೀರನ್ನೇ ಸಭೆ–ಸಮಾರಂಭಗಳಿಗೆ ಜನ ಬಳಕೆ ಮಾಡುತ್ತಿದ್ದಾರೆ. ಮೊದಲು ಅನುಮತಿ ಪಡೆಯದೇ ಕೆಲವೇ ಲಕ್ಷ ಖರ್ಚು ಮಾಡಿ ನಿರ್ಮಾಣವಾದ ಅನಧಿಕೃತ ನೀರಿನ ಘಟಕಗಳ ಮೇಲೆ ದಾಳಿ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ಜಿಲ್ಲಾಧಿಕಾರಿ ನೇತೃತ್ವದ ಸಲಹಾ ಸಮಿತಿ ಸಭೆ ನಡೆಯದಿದ್ದರಿಂದ ಅಂತಹ ದಾಳಿಗಳು ನಿಂತು ಹೋಗಿವೆ. ಆಹಾರ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿದರೆ ಒಂದು ಘಟಕ ನಿರ್ಮಾಣಕ್ಕೆ ₹ 40 ಲಕ್ಷ ವೆಚ್ಚವಾಗುತ್ತದೆ. ಆದರೆ, ಮಾನದಂಡ ಅನುಸರಿಸದೇ ರಾಜ್ಯದಾದ್ಯಂತ ಶುದ್ಧ ನೀರಿನ ಘಟಕಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು, ಕೇವಲ ₹ 1.5 ಲಕ್ಷದಿಂದ ₹ 2 ಲಕ್ಷ ವೆಚ್ಚದ ಬಂಡವಾಳದಲ್ಲಿ ಆರಂಭವಾಗುತ್ತಿವೆ.

ಸುರಕ್ಷತಾ ಅಧಿಕಾರಿ ಹುದ್ದೆ ಖಾಲಿ

ಆಹಾರ ಸುರಕ್ಷತಾ ಅಧಿಕಾರಿಗಳು ಆಹಾರ ಗುಣಮಟ್ಟ, ಶುದ್ಧತೆಯ ಬಗ್ಗೆ ನಿರಂತರ ನಿಗಾ ವಹಿಸಬೇಕು. ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಬೇಕು. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಹುದ್ದೆಗಳು ಖಾಲಿ ಇರುವುದರಿಂದ ಈ ಕಾರ್ಯಕ್ಕೆ ಹಿನ್ನಡೆಯಾಗಿದೆ.

ಆಹಾರ ಉತ್ಪನ್ನ ತಯಾರಿಕೆಗೆ ಪರವಾನಗಿ ನೀಡುವ ಅಧಿಕಾರ ಜಿಲ್ಲಾ ಅಂಕಿತ ಅಧಿಕಾರಿಗೆ ಇದೆ. ಆಹಾರ ಸುರಕ್ಷತಾ ಅಧಿಕಾರಿ ಹುದ್ದೆ ಖಾಲಿ ಇರುವುದರಿಂದ ಅವರ ಹೆಚ್ಚುವರಿ ಜವಾಬ್ದಾರಿಯೂ ಜಿಲ್ಲಾ ಅಂಕಿತ ಅಧಿಕಾರಿಯ ಹೆಗಲೇರಿದೆ. ತಾಲ್ಲೂಕು ಮಟ್ಟದ ಹುದ್ದೆಗಳು ಖಾಲಿ ಇರುವುದರಿಂದ ಪರವಾನಗಿ ನವೀಕರಣವೂ ವಿಳಂಬವಾಗುತ್ತಿದೆ.

‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲ ತಾಲ್ಲೂಕುಗಳ ಆಹಾರ ಸುರಕ್ಷತಾ ಅಧಿಕಾರಿ ಹುದ್ದೆಗಳು ಖಾಲಿ ಇವೆ. ಜಿಲ್ಲಾ ಮಟ್ಟದ ಒಬ್ಬರು ಅಧಿಕಾರಿ (ಅಂಕಿತ ಅಧಿಕಾರಿ) ಇದ್ದು, ಅವರಿಗೆ ದಕ್ಷಿಣ ಕನ್ನಡದ ಜೊತೆಗೆ ಉಡುಪಿ ಜಿಲ್ಲೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಕನಿಷ್ಠ 5 ತಾಲ್ಲೂಕುಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಹುದ್ದೆ ಭರ್ತಿ ಮಾಡುವಂತೆ ರಾಜ್ಯ ಆಹಾರ ಸುರಕ್ಷತಾ ಆಯುಕ್ತರಿಗೆ 10ಕ್ಕೂ ಹೆಚ್ಚು ಬಾರಿ ಪತ್ರ ಬರೆದು ವಿನಂತಿಸಲಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಪ್ರತಿಕ್ರಿಯಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ 7 ಮಂಜೂರಾತಿ ಹುದ್ದೆಗಳಿದ್ದು, ಒಬ್ಬರೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ 15 ಮಂಜೂರಾತಿ ಹುದ್ದೆಗಳಿಲ್ಲಿ 10 ಖಾಲಿ ಇವೆ. ಹೊಸ ತಾಲ್ಲೂಕುಗಳಲ್ಲಿ ಈ ಹುದ್ದೆಯನ್ನು ಇನ್ನೂ ಸೃಜಿಸಿಲ್ಲ.

ಬೆಲ್ಲಕ್ಕೆ ರಾಸಾಯನಿಕ ಮಿಶ್ರಣ
ಕಪ್ಪು ಬಣ್ಣದಲ್ಲಿರುವ ಸಾವಯವ ಬೆಲ್ಲ ಮಾತ್ರ ಬಳಕೆಗೆ ಯೋಗ್ಯ. ಬಿಳಿ ಮತ್ತು ಕೆಂಪು ಬಣ್ಣದ ಬೆಲ್ಲ ನಿಶ್ಚಿತವಾಗಿ ಕಲಬೆರಕೆಯೇ ಆಗಿರುತ್ತದೆ. ಮಾರುಕಟ್ಟೆಯಲ್ಲಿ ಕಪ್ಪು ಬೆಲ್ಲಕ್ಕಿಂತ ಬಿಳಿ ಬಣ್ಣಕ್ಕೆ ಹೆಚ್ಚು ಬೇಡಿಕೆ ಇರುವುದರಿಂದ ಆಲೆಮನೆಗಳಲ್ಲಿಯೇ ರಾಸಾಯನಿಕ ಬೆರಸಿದ ಬೆಲ್ಲ ತಯಾರಿಕೆಯಾಗುತ್ತಿದೆ. ‘ಬೆಲ್ಲಕ್ಕೆ ಸಾಮಾನ್ಯವಾಗಿ ಹೈಡ್ರೋಸಲ್ಫೇಟ್‌ ರಾಸಾಯನಿಕ ಪದಾರ್ಥ ಬಳಸಲಾಗುತ್ತಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ಸಿಗುವ ಕಳಪೆ ಗುಣಮಟ್ಟದ ಹಾಗೂ ಬಳಕೆಗೆ ಯೋಗ್ಯವಲ್ಲದ ಸಕ್ಕರೆಯನ್ನು ಬೆಲ್ಲಕ್ಕೆ ಮಿಶ್ರಣ ಮಾಡಲಾಗುತ್ತದೆ. ಆಗ ಬೆಲ್ಲ ಆಕರ್ಷಕ ಬಣ್ಣ ಪಡೆದುಕೊಳ್ಳುತ್ತದೆ. ಕೆಲವು ಆಲೆಮನೆಗಳಲ್ಲಿ ವಿಷಕಾರಕ ಅಂಶಗಳನ್ನು ಬಳಸಿ ಬೆಲ್ಲ ತಯಾರಿಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಕಲಬೆರಕೆಗೆ ಸಂಬಂಧಿಸಿದಂತೆ ದೂರು ದಾಖಲಾದರೂ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ವಿಷಕಾರಿ ಬೆಲ್ಲಕ್ಕೆ ಸೃಷ್ಟಿಯಾಗಿರುವ ಮಾರುಕಟ್ಟೆಗೆ ಕಡಿವಾಣ ಹಾಕುವ ಮೂಲಕ ರೈತರಿಗೆ ಆಗುವ ನಷ್ಟ ತಪ್ಪಿಸಬೇಕು’ ಎನ್ನುತ್ತಾರೆ ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಕಾರಸವಾಡಿ ಮಹದೇವ.

ಕೊಬ್ಬರಿ ಎಣ್ಣೆಯಲ್ಲಿ ಪ್ಯಾರಾಫಿನ್

ರಾಜ್ಯದ ಕರಾವಳಿ ಮತ್ತಿತರ ಕಡೆ ಅಡುಗೆಗೆ ಕೊಬ್ಬರಿ ಎಣ್ಣೆಯನ್ನೇ ಪ್ರಮುಖವಾಗಿ ಬಳಸುತ್ತಾರೆ. ಇಲ್ಲಿ ತೆಂಗು ಪ್ರಮುಖ ಬೆಳೆಯಾದ್ದರಿಂದ ತೆಂಗಿನ ಎಣ್ಣೆ ತಯಾರಿಸುವ ಮಿಲ್‌ಗಳೂ ಸಾಕಷ್ಟಿವೆ. ಮಂಗಳೂರು, ಉಡುಪಿ, ಧರ್ಮಸ್ಥಳಕ್ಕೆ ಬರುವ ಪ್ರವಾಸಿಗರು ಹೆದ್ದಾರಿಯಂಚಿನಲ್ಲಿ ‘ಶುದ್ಧ ಕೊಬ್ಬರಿ ಎಣ್ಣೆ ಸಿಗುತ್ತದೆ’ ಎಂಬ ಬೋರ್ಡ್‌ ನೋಡಿ, ಖರೀದಿಸಿಕೊಂಡು ಹೋಗುತ್ತಾರೆ. ಜನರ ಗಮನವನ್ನು ತಕ್ಷಣಕ್ಕೆ ಸೆಳೆಯುವಂತೆ ಇಂತಹ ಅಂಗಡಿಗಳ ಎದುರು ಹಳದಿ ಬಣ್ಣದ ಕ್ಯಾನ್‌ಗಳನ್ನು ರಾಶಿಗಟ್ಟಲೆ ಕಟ್ಟಿ ತೂಗು ಹಾಕಲಾಗಿರುತ್ತದೆ.

ಇಲ್ಲಿನ ಬಹುತೇಕ ಮಿಲ್‌ಗಳಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆಯೇ ಸಿಗುತ್ತದೆ. ಆದರೆ, ಕರಾವಳಿ ಭಾಗದ ಶುದ್ಧ ಕೊಬ್ಬರಿ ಎಣ್ಣೆ ಬ್ರ್ಯಾಂಡ್‌ ಬಳಸಿಕೊಂಡು ಪೆಟ್ರೋಲಿಯಂ ತ್ಯಾಜ್ಯ (ಪ್ಯಾರಾಫಿನ್) ಸೇರಿಸಿರುವ ನಕಲಿ ಕೊಬ್ಬರಿ ಎಣ್ಣೆ ಮಾರಾಟ ಜಾಲವೂ ಇತ್ತೀಚಿನ ವರ್ಷಗಳಲ್ಲಿ ಸಕ್ರಿಯವಾಗಿದೆ. ಅದು ಕರಾವಳಿಯ ಗಡಿ ದಾಟಿಕೊಂಡು ಹೊರ ಜಿಲ್ಲೆ, ಹೊರರಾಜ್ಯಗಳಿಗೂ ಪೂರೈಕೆಯಾಗುತ್ತಿದೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಹೆದ್ದಾರಿ ಬದಿಯಲ್ಲಿ ನಾಯಿಕೊಡೆಗಳಂತೆ ತೆಲೆ ಎತ್ತುತ್ತಿರುವ ಶುದ್ಧ ಕೊಬ್ಬರಿ ಎಣ್ಣೆ ಮಾರಾಟ ಅಂಗಡಿಗಳತ್ತ ಜನರು ಸಂಶಯದಿಂದ ನೋಡುವಂತಾಗಿದೆ. ‘ಪ್ರವಾಸಿಗರು ಎಣ್ಣೆಯ ವಾಸನೆಯನ್ನಷ್ಟೇ ನೋಡುತ್ತಾರೆ. ಎಣ್ಣೆಯನ್ನು ಹಳದಿ ಬಣ್ಣದ ಕ್ಯಾನ್‌ಗಳಲ್ಲಿ ತುಂಬಿಸಿಟ್ಟಿರುವುದರಿಂದ ಅದರ ನೈಜ ಬಣ್ಣ ಪರೀಕ್ಷಿಸಲೂ ಆಗುವುದಿಲ್ಲ. ಒಂದು ಕೆ.ಜಿ ಕೊಬ್ಬರಿಗೆ ಸದ್ಯ ₹150ರಿಂದ ₹160ರವರೆಗೆ ದರ ಇದೆ, ಹೀಗಿರುವಾಗ ಒಂದು ಲೀಟರ್ ಶುದ್ಧ ಕೊಬ್ಬರಿ ಎಣ್ಣೆ ಹೇಗೆ ₹175 ರಿಂದ ₹180 ದರದಲ್ಲಿ ಸಿಗುತ್ತದೆ’ ಎಂದು ಪ್ರಶ್ನಿಸುತ್ತಾರೆ ಧರ್ಮಸ್ಥಳ ಸಮೀಪದ ಕೊಕ್ಕಡದ ತೆಂಗು ಬೆಳೆಗಾರರೊಬ್ಬರು.

‘ಕಪ್ಪು ಬಂಗಾರ’ಕ್ಕೂ ಕಲಬೆರಕೆಯ ಬಾಧೆ
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ‘ಕಪ್ಪು ಬಂಗಾರ’ ಎಂದೇ ಪ್ರಸಿದ್ಧವಾಗಿರುವ ಕಾಳುಮೆಣಸು ಕೂಡ ಕಲಬೆರಕೆ ಆಗುತ್ತಿದೆ. ಉತ್ತಮ ಧಾರಣೆ ಇದ್ದ ಸಂದರ್ಭದಲ್ಲಿ ವಿಯೆಟ್ನಾಂ, ಬ್ರೆಝಿಲ್‌ನಿಂದ ಆಮದು ಮಾಡಿಕೊಂಡ ಕಳಪೆ ಗುಣಮಟ್ಟದ ಕಾಳುಮೆಣಸನ್ನು ಇಲ್ಲಿನ ಕಾಳುಮೆಣಸಿನೊಂದಿಗೆ ಸೇರಿಸಿ ಮಾರಾಟ ಮಾಡಲಾಗುತ್ತದೆ. ಅಲ್ಲದೆ, ಹತ್ತಿ ಬೀಜ, ಪರಂಗಿ ಬೀಜವನ್ನು ಸೇರಿಸಿ ಪ್ರಮಾಣವನ್ನು ಜಾಸ್ತಿ ಮಾಡಿ ಮಾರಾಟ ಮಾಡುವ ಜಾಲವೂ ಇದೆ. ಸಾಂಬಾರ ಪದಾರ್ಥಗಳಲ್ಲಿ ಒಂದಾದ ಕಾಳುಮೆಣಸಿನ ಪುಡಿಗೂ ಬೇಡಿಕೆ ಹೆಚ್ಚಾಗಿದೆ. ಕಾಳುಮೆಣಸನ್ನು ಬೇರ್ಪಡಿಸಿದ ಬಳಿಕ ಉಳಿಯುವ ಗೊಂಚಲ ಕಡ್ಡಿಗೂ ಬೇಡಿಕೆ ಇದ್ದು, ದಂಧೆಯಲ್ಲಿ ತೊಡಗಿರುವವರು ಕಾಳು ಮೆಣಸಿನ ಜತೆಗೆ ಕಡ್ಡಿಯನ್ನೂ ಖರೀದಿಸುತ್ತಾರೆ. ಕಾಳುಮೆಣಸನ್ನು ಪುಡಿ ಮಾಡಿ ಮಾರಾಟ ಮಾಡುವವರು ಈ ಗೊಂಚಲ ಕಡ್ಡಿಯನ್ನೂ ಪುಡಿ ಮಾಡಿ ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಕಾಳುಮೆಣಸನ್ನು ಸೇರಿಸುತ್ತಾರೆ. ಇಂಥ ಪುಡಿಗಳು ಖಾರ ಇಲ್ಲದೆ ಇದ್ದರೂ ಅವುಗಳಲ್ಲಿ ಕಾಳುಮೆಣಸಿನಂತೆ ಘಮ ಇರುತ್ತದೆ. ಮೇಲ್ನೋಟಕ್ಕೆ ಗೊತ್ತಾಗದೆ ಇದ್ದರೂ ರುಚಿಯಲ್ಲಿ ಪತ್ತೆ ಮಾಡಬಹುದು.
ಚಹ, ಕಾಫಿ ಪುಡಿಗೆ ಮರದ ಹೊಟ್ಟು
ಬಳಕೆ ಮಾಡಿದ ಚಹದ ಪುಡಿಗೆ ಹೊಸ ರೂಪವನ್ನು ನೀಡಿ ಮತ್ತೆ ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ. ಹೋಟೆಲ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡಿದ ಚಹದ ಪುಡಿಯನ್ನು ಒಣಗಿಸಲಾಗುತ್ತದೆ. ಇದಕ್ಕೆ ಮರದ ಹೊಟ್ಟು, ಹುಣಸೆ ಹಣ್ಣಿನ ಬೀಜ ಹಾಗೂ ಬಣ್ಣದ ಎಲೆಗಳ ಪುಡಿಗಳನ್ನು ಸೇರಿಸಿ ಕೃತಕ ಬಣ್ಣ ಮಿಶ್ರಣ ಮಾಡಲಾಗುತ್ತದೆ. ಇದನ್ನು ಪ್ಯಾಕೇಟ್‌ ರೂಪದಲ್ಲಿ ಮರಳಿ ಮಾರುಕಟ್ಟೆಗೆ ತರಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಹಳ್ಳಿಗಳಲ್ಲಿ ಸಂಚಾರಿ ವಾಹನಗಳಲ್ಲಿ ಮಾರಾಟ ಮಾಡಲಾಗುತ್ತದೆ. ಕಾಫಿ ಪುಡಿಗೂ ಮರದ ಹೊಟ್ಟು, ಮಣ್ಣನ್ನು ಕಲಬೆರಕೆ ಮಾಡಿ ಮಾರಾಟ ಮಾಡಲಾಗುತ್ತಿದೆ.
ರಾಗಿಗೆ ರೆಡ್‌ ಆಕ್ಸೈಡ್‌ ಬೆರಕೆ
ರಾಜ್ಯದ ಹಲವಡೆ ಬೆಳೆಯುವ ರಾಗಿಯು ಆಕರ್ಷಕವಾಗಿ ಕಾಣಲು ಕೃತಕ ಬಣ್ಣ ಲೇಪನ ಮಾಡಲಾಗುತ್ತಿದೆ. ಮಳೆಯ ಏರಿಳಿತ, ಸರಿಯಾದ ಸಂದರ್ಭಕ್ಕೆ ಕಟಾವು ಮಾಡದಿದ್ದಾಗ ಕೆಂಪುರಾಗಿ ಬಣ್ಣ ಕಡುಕೆಂಪಾಗಿ ಇರುವುದಿಲ್ಲ. ದಾಸ್ತಾನು ಇಟ್ಟ ಸಂದರ್ಭದಲ್ಲಿ ಫಂಗಸ್‌ ಅಂಟಿದಾಗಲೂ ರಾಗಿಯನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಾರೆ. ಇಂತಹ ಸಂದರ್ಭದಲ್ಲಿ ರಾಗಿಗೆ ಕೃತಕ ಬಣ್ಣವಾಗಿ ‘ರೆಡ್‌ ಆಕ್ಸೈಡ್‌’ ಬಳಸಲಾಗುತ್ತದೆ. ರಾಗಿ ಹೊಳೆಯುವಂತೆ ಮಾಡಲು ಮೇಣವನ್ನು ಉಪಯೋಗಿಸಲಾಗುತ್ತಿದೆ ಎನ್ನುವ ಆರೋಪ ಇದೆ. ಮೆಣಸಿನಕಾಯಿ ಕೆಂಪಾಗಿ ಕಾಣುವಂತೆ ಮಾಡಲು ಸಹ ‘ರೆಡ್‌ ಆಕ್ಸೈಡ್‌’ ಬಳಸಲಾಗುತ್ತದೆ. ಕಾರದಪುಡಿಯಲ್ಲಿ ಇಟ್ಟಿಗೆ ಪುಡಿ, ರಾಸಾಯನಿಕಗಳನ್ನು ಬೆರಸಲಾಗುತ್ತದೆ. ತೊಗರಿ ಬೇಳೆಯನ್ನು ಆಕಾರ್ಷಕವಾಗಿ ಕಾಣುವಂತೆ ಮಾಡಲು ‘ಮೆಟಾನಿಯನ್‌ ಎಲ್ಲೊ’ ರಾಸಾಯನಿಕ ಉಪಯೋಗಿಸಲಾಗುತ್ತದೆ.
ಮೀನು ಕೆಡದಂತೆ ಫಾರ್ಮಲಿನ್‌ ಬಳಕೆ?
ಮೀನು ಬೇಗ ಕೊಳೆಯುವ ಪದಾರ್ಥ. ಮಂಜುಗಡ್ಡೆಯಲ್ಲಿ ಹಾಕಿದರೂ ಒಂದೆರಡು ದಿನಗಳಲ್ಲಿ ಅದು ಕೊಳೆಯಲಾರಂಭಿಸುತ್ತದೆ. ಇದನ್ನು ತಪ್ಪಿಸಲು ಕೆಲವರು ಮೀನನ್ನು ಫಾರ್ಮಲಿನ್ ದ್ರಾವಣದಲ್ಲಿ ಅದ್ದಿ ಮಾರಾಟ ಮಾಡುವುದು ಪತ್ತೆಯಾಗಿದೆ. ಈ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದ್ದಂತೆಯೇ ಕೊಚ್ಚಿಯಲ್ಲಿರುವ ಕೇಂದ್ರೀಯ ಮೀನುಗಾರಿಕಾ ತಂತ್ರಜ್ಞಾನ ಸಂಸ್ಥೆ (ಸಿಐಎಫ್‌ಟಿ) ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ಮೀನುಗಳನ್ನು ಬೇರೆ ಬೇರೆ ಕಡೆಗಳಲ್ಲಿ ಸಂಗ್ರಹಿಸಿ ಪರಿಶೀಲನೆಗೆ ಒಳಪಡಿಸಿತ್ತು. ಆಗ ಅವುಗಳಲ್ಲಿ ಫಾರ್ಮಲಿನ್‌ ಅಂಶ ಇರುವುದು ಪತ್ತೆಯಾಗಿದೆ. ಒಂದು ರಾಜ್ಯದಿಂದ ಬೇರೆ ರಾಜ್ಯಕ್ಕೆ ಸಾಗಿಸಿ ಮಾರಾಟ ಮಾಡುವ ಮೀನುಗಳಲ್ಲಿ ಈ ರಾಸಾಯನಿಕ ಹೆಚ್ಚಾಗಿ ಪತ್ತೆಯಾಗಿದೆ. ಮೀನು ಕೆಡದಂತೆ ಫಾರ್ಮಲಿನ್ ಬಳಸಿದರೂ ಅದು ಕ್ರಮೇಣ ಶಕ್ತಿಗುಂದುತ್ತದೆ. ಆದರೂ ಅದರ ಅಂಶವನ್ನು ಸಂಪೂರ್ಣ ತೆಗೆಯಲು ಸಾಧ್ಯವಿಲ್ಲ. ಇದು ಮೂತ್ರಕೋಶಕ್ಕೆ ಹಾನಿ ಉಂಟುಮಾಡುತ್ತದೆ. ಎಫ್‌ಎಸ್‌ಎಸ್‌ಎಐ ಗುಣಮಟ್ಟದ ಪ್ರಕಾರ ಆಹಾರ ಪದಾರ್ಥಗಳಲ್ಲಿ ಫಾರ್ಮಲಿನ್ ಬಳಕೆಗೆ ಅನುಮತಿಯೇ ಇಲ್ಲ.
ನಿಲ್ಲದ ಕೃತಕ ಬಣ್ಣದ ಬಳಕೆ
ಗೋಬಿ ಮಂಚೂರಿ, ಕಾಟನ್‌ ಕ್ಯಾಂಡಿ ಹಾಗೂ ಕಬಾಬ್‌ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿದರೂ ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತಿಲ್ಲ. ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ, ದಂಡ ಪ್ರಯೋಗಕ್ಕೂ ತಿನಿಸು ವ್ಯಾಪಾರಿಗಳು ಬಗ್ಗಿಲ್ಲ. ಆಹಾರದ ರುಚಿಯನ್ನು ಹೆಚ್ಚಿಸುವ ಈ ರಾಸಾಯನಿಕವನ್ನು ಬಣ್ಣ ರಹಿತವಾಗಿ ಬಳಸಲಾಗುತ್ತಿದೆ. ಈ ತಿನಿಸುಗಳಲ್ಲಿ ಸನ್‌ಸೆಟ್‌ ಯೆಲ್ಲೋ, ಕಾರ್ಮೋಸಿನ್‌, ಟೆಟ್ರಾಜಿನ್‌ ಹಾಗೂ ರೋಡಮೈನ್‌ ಬಿ ಎಂಬ ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತಿತ್ತು. ಇದೇ ರಾಸಾಯನಿಕಗಳು ಬಿಳಿ ಬಣ್ಣದಲ್ಲಿ ಬಳಕೆಯಾಗುತ್ತಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಹೋಟೆಲ್‌, ರೆಸ್ಟೋರೆಂಟ್‌ ಸೇರಿ ಹಲವೆಡೆ ವಾಸನೆರಹಿತ ರುಚಿವರ್ಧಕ ‘ಚೈನಾಸಾಲ್ಟ್‌’ (ಮಾನೋ ಸೋಡೋ ಗ್ಲುಟಮೇಟ್‌) ಹೆಚ್ಚಾಗಿ ಬಳಕೆಯಾಗುತ್ತಿದೆ. ಬೇಳೆ ಕಾಳು, ಮಾಂಸದಲ್ಲಿ ಇದನ್ನು ಬೆರೆಸಿದಾಗ ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಈ ರುಚಿಗೆ ಮತ್ತೆ ಮತ್ತೆ ತಿನ್ನುವಂತೆ ಪ್ರೇರೇಪಿಸುತ್ತದೆ.
ಅಡಿಕೆಗೂ ಕಲಬೆರಕೆಯ ಸೋಂಕು
ಮಲೆನಾಡು ಮಾತ್ರವಲ್ಲದೇ ಬಯಲು ಸೀಮೆಯ ಆರ್ಥಿಕ ಜೀವನಾಡಿಯಾಗಿ ಬದಲಾಗಿರುವ ಅಡಿಕೆಗೂ ಕಲಬೆರಕೆಯ ಕಳಂಕ ಹತ್ತಿದೆ. ಈ ಮೊದಲು ಆಡಿಕೆಯನ್ನು ಹೆಚ್ಚಾಗಿ ಬೆಳೆಗಾರರೇ ಸಂಸ್ಕರಿಸಿ ಮಾರಾಟಕ್ಕೆ ತರುತ್ತಿದ್ದರು. ಈಚೆಗೆ ಮಧ್ಯವರ್ತಿಗಳಿಗೆ ಕೇಣಿ ಕೊಡುವ ಪರಿಪಾಠ ಹೆಚ್ಚಾಗಿದೆ. ಕೆಲವು ಕೇಣಿದಾರರು ಕಳಪೆ ಅಡಿಕೆಗೆ ರಾಸಾಯನಿಕ ಬಣ್ಣ, ಪಾಲಿಶ್ ಹಾಕಿ ಒಳ್ಳೆ ಅಡಿಕೆಯೊಂದಿಗೆ ಮಿಶ್ರಣ ಮಾಡುತ್ತಿದ್ದಾರೆ. ಇದು ಸಮಸ್ಯೆಯ ಮೂಲ. ‘ಪೈಪೋಟಿ ಹಾಗೂ ಆಸೆಗೆ ಬಿದ್ದು ಕೇಣಿದಾರರು ಕ್ವಿಂಟಲ್ ಹಸಿ ಅಡಿಕೆಗೆ 13ರಿಂದ 13.5 ಕೆ.ಜಿ ಒಣ ಅಡಿಕೆ ಕೊಡುವುದಾಗಿ ಬೆಳೆಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಅಷ್ಟೊಂದು ಕೊಡಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ 11 ಕೆ.ಜಿ. ಅಡಿಕೆ ಮಾತ್ರ ಕೊಡಬಹುದು. ಆ ನಷ್ಟ ತಪ್ಪಿಸಿಕೊಳ್ಳಲು ಕೆಲವರು ಕಳಪೆ ಅಡಿಕೆ (ಸೆಕೆಂಡ್ಸ್) ಮಿಶ್ರಣ ಮಾಡಿ ಬೆಳೆಗಾರರಿಗೆ ಕೊಡುತ್ತಿದ್ದಾರೆ. ಹೀಗೆ ಮಿಶ್ರಣ ಆದ ಅಡಿಕೆ ಸಹಕಾರ ಸಂಸ್ಥೆಗಳು ಹಾಗೂ ವರ್ತಕರಿಗೆ ಮಾರಾಟ ಮಾಡಲಾಗುತ್ತಿದೆ. ಆ ಅಡಿಕೆ ಕಳುಹಿಸಿದರೆ ಪಾನ್‌ ಮಸಾಲ ಕಂಪೆನಿಗಳು ತಿರಸ್ಕರಿಸುತ್ತಿವೆ’ ಎಂದು ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ ಹೇಳುತ್ತಾರೆ.

ಹಾಲು, ಎಣ್ಣೆ, ಬೆಣ್ಣೆಯಲ್ಲಿ ‘ವಿಷ’

ಅಡುಗೆ ಎಣ್ಣೆ, ಹಾಲು, ಬೆಣ್ಣೆ, ತುಪ್ಪ, ಜೇನು ತುಪ್ಪದಲ್ಲಿ ಕಲಬೆರಕೆ ಮಾಫಿಯಾ ಬೃಹತ್‌ ಮಟ್ಟದಲ್ಲಿ ಬೆಳೆದಿದೆ.

ಬಹುತೇಕ ನೆರೆ ರಾಜ್ಯಗಳ ಖಾಸಗಿ ಡೇರಿಗಳು 30ಕ್ಕೂ ಅಧಿಕ ಬ್ರ್ಯಾಂಡ್‌ ಹೆಸರಿನಲ್ಲಿ ರಾಜ್ಯದಲ್ಲಿ ಹಾಲು ಮಾರಾಟ ಮಾಡುತ್ತಿವೆ. ಅಷ್ಟು ದೂರದಿಂದ ಬರುವ ಹಾಲು ಹಾಳಾಗುವುದನ್ನು ತಪ್ಪಿಸಲು ಹೈಡ್ರೋಜನ್ ಪೆರಾಕ್ಸೈಡ್, ವಾಷಿಂಗ್ ಸೋಡಾ, ಕಾಸ್ಟಿಕ್ ಸೋಡಾ ಬೆರೆಸಲಾಗುತ್ತದೆ. ಹೆಚ್ಚಿನವರು ಎಫ್‌ಎಸ್‌ಎಸ್‌ಎಐ ಮಾನದಂಡ ಅನುಸರಿಸುತ್ತಿಲ್ಲವೆಂದು ಹಾಲು ಒಕ್ಕೂಟಗಳು ದೂರುತ್ತಿವೆ. ಕೆಎಂಎಫ್‌ ಈ ಹಿಂದೆ ನಡೆಸಿದ್ದ ಅಧ್ಯಯನವೊಂದರಲ್ಲಿ ಖಾಸಗಿ ಡೇರಿಗಳು ಹಾಲಿನ ಗುಣಮಟ್ಟ ಕಾಪಾಡಿಕೊಳ್ಳದಿರುವುದು ಕಂಡುಬಂದಿತ್ತು.

ರಿಸಿಮಾಲ್ಡೆಕ್ಸ್‌ ಮಾಲ್ಟೊಡೆಕ್ಸ್‌ಟ್ರಿನ್‌ (RISIMALDEX-MALTODEXTRIN) ಎಂಬ ಪುಡಿ, ಯೂರಿಯಾ, ಸೋಯಾಪುಡಿ, ಹಿಟ್ಟು, ಗೆಣಸಿನಪುಡಿಯನ್ನು ಹಾಲಿಗೆ ಬೆರೆಸುತ್ತಿರುವುದೂ ಪತ್ತೆಯಾಗಿದೆ.

ಹಾಲು ಒಕ್ಕೂಟದ ಸಂಘಗಳಲ್ಲಿ ತಿರಸ್ಕೃತಗೊಳ್ಳುವ ಗುಣಮಟ್ಟವಿಲ್ಲದ ಹಾಲನ್ನು ಖಾಸಗಿ ಡೇರಿಗಳು ಖರೀದಿಸುತ್ತವೆ. ಹಾಲಿನ ಒಕ್ಕೂಟಕ್ಕಿಂತ ಹೆಚ್ಚಿನ ದರ ಸಿಗುತ್ತದೆ ಎಂದು ಕೆಲ ಹೈನುಗಾರರು ಖಾಸಗಿ ಡೇರಿಗೆ ಹಾಲು ಹಾಕುತ್ತಾರೆ ಎನ್ನುವ ಆರೋಪವಿದೆ.

‘ಇತ್ತೀಚೆಗೆ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಕಂಪನಿಯೊಂದರ ತುಪ್ಪದ ಮಳಿಗೆ ಮೇಲೆ ದಾಳಿ ನಡೆಸಿ ಬೆಂಗಳೂರಿನ ಪಬ್ಲಿಕ್‌ ಹೆಲ್ತ್‌ ಇನ್‌ಸ್ಟಿಟ್ಯೂಟ್‌ (ಪಿಎಚ್‌ಐ) ಪ್ರಯೋಗಾಲಯದಲ್ಲಿ ಮಾದರಿ ಪರೀಕ್ಷಿಸಿದಾಗ ತುಪ್ಪ ಅಸುರಕ್ಷಿತ ಎಂಬ ವರದಿ ಬಂದಿದೆ. ಜೇನುತುಪ್ಪವನ್ನೂ ಪರೀಕ್ಷೆಗೆ ಒಳಪಡಿಸಿದ್ದು, ಗುಣಮಟ್ಟವಿಲ್ಲ ಎಂಬ ವರದಿ ಬಂದಿದೆ’ ಎಂದು ಹೇಳುತ್ತಾರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಕೋಲಾರ ಜಿಲ್ಲಾ ಅಂಕಿತ ಅಧಿಕಾರಿ ಡಾ.ರಾಕೇಶ್‌ ಸಿ.

ಅಡುಗೆ ಎಣ್ಣೆಯಲ್ಲಿ ಅಧಿಕ ಕಲಬೆರಕೆ:
ಕಾರ್ಖಾನೆ, ಮಿಲ್‌, ಸಣ್ಣಪುಟ್ಟ ಘಟಕಗಳಲ್ಲಿ ಪ್ಯಾಕ್‌ ಆಗಿ ಮಾರುಕಟ್ಟೆಗೆ ಬರುವ ಹಾಗೂ ಮಾರುಕಟ್ಟೆಯಲ್ಲಿ ಚಿಲ್ಲರೆಯಾಗಿ ಸಿಗುವ ಅಡುಗೆ ಎಣ್ಣೆಯು ಶೇ 50ರಿಂದ 80ರಷ್ಟು ಕಲಬೆರಕೆಯಿಂದ ಕೂಡಿರುವ ಬಗ್ಗೆ ವಿಜ್ಞಾನಿಗಳು, ಆಹಾರ ತಜ್ಞರು ಹಾಗೂ ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪೆಟ್ರೋಲಿಯಂ ಉಪ ಉತ್ಪನ್ನ ‘ಮಿನರಲ್‌ ಆಯಿಲ್‌’ (ವೈಟ್‌ ಆಯಿಲ್‌ ಅಥವಾ ಪ್ಯಾರಾಪಿನ್‌ ಆಯಿಲ್‌) ಅನ್ನು ಅಡುಗೆ ಎಣ್ಣೆಗೆ ಬೆರೆಸಲಾಗುತ್ತದೆ. ಜಾನುವಾರುಗಳ ಕೊಬ್ಬಿನಿಂದ ತೆಗೆದ ಎಣ್ಣೆಯನ್ನು ಸೇರಿಸಿ ಮಾರಾಟ ಮಾಡುತ್ತಿರುವ ದಂಧೆಯೂ ನಡೆಯುತ್ತಿದೆ.

‘ಆಹಾರ ಕಲಬೆರಕೆಯಿಂದ ಮಾರಕ ರೋಗ’

ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡುವುದರಿಂದ ಕ್ಯಾನ್ಸರ್, ಹೆಪಟೈಟಸ್, ಯಕೃತ್‌, ಮೂತ್ರಪಿಂಡ ವೈಫಲ್ಯದಂತಹ ಸಮಸ್ಯೆಗಳು ಚಿಕ್ಕ ವಯಸ್ಸಿ
ನಲ್ಲಿಯೇ ಕಾಣಿಸಿಕೊಳ್ಳಲಿದೆ.

ನಿತ್ಯ ಬಳಸುವ ಹಾಲು, ಹಣ್ಣು, ಮಸಾಲೆ ಪದಾರ್ಥಗಳು, ಹೋಟೆಲ್‌ಗಳಲ್ಲಿನ ಆಹಾರ ರುಚಿಯಾಗಿರಲು ಬಳಸುವ ರುಚಿ ವೃದ್ಧಿಸುವ ರಾಸಾಯನಿಕಗಳು ದೀರ್ಘಾವಧಿಯಲ್ಲಿ ತೊಂದರೆಯನ್ನು ಉಂಟುಮಾಡುತ್ತವೆ.

‘ಮೊಟ್ಟೆಯು ಪರಿಪೂರ್ಣ ಪೌಷ್ಟಿಕ ಆಹಾರ ಎಂದು ನಾವು ಶಿಫಾರಸು ಮಾಡುತ್ತೇವೆ. ಆದರೆ, ಕೋಳಿಗಳಿಗೆ ಇಂಜೆಕ್ಷನ್ ನೀಡುವುದರಿಂದ ಮೊಟ್ಟೆಗಳು ಗುಣಮಟ್ಟವನ್ನು ಕಳೆದು
ಕೊಳ್ಳುತ್ತವೆ. ಅರಿಶಿಣ, ಮಸಾಲೆ ಪುಡಿಗಳಲ್ಲಿ ಅಪಾಯಕಾರಿ ಸೀಸ, ಕ್ರೋಮಿಯಂನಂತಹ ಮಾರಕ ರಾಸಾಯನಿಕಗಳನ್ನು ಬೆರೆಸಲಾಗುತ್ತದೆ. ಇದರಿಂದಾಗಿ ಅಕಾಲದಲ್ಲಿಯೇ ಹಲವು ರೋಗಗಳು ಕಾಡುತ್ತವೆ. ಅಂತಿಮವಾಗಿ ಕಿಡ್ನಿ ವೈಫಲ್ಯ, ಬಂಜೆತನ, ಕರುಳಿನ ಕ್ಯಾನ್ಸರ್‌ನಂತಹ ರೋಗಗಳು ಬರುತ್ತವೆ.

ಇದನ್ನು ತಡೆಯಲು ನಿಯಮಿತವಾಗಿ ಆಹಾರ ಪದಾರ್ಥ, ಹಾಲು, ಹಣ್ಣುಗಳ ಮಾದರಿ ಸಂಗ್ರಹಿಸಿ ತಪಾಸಣೆಗೆ ಒಳಪಡಿಸಬೇಕು.

ಡಾ.ಜಯರಾಜ್ ವಿ. ಬೊಮ್ಮಣ್, ಯಕೃತ್ ತಜ್ಞ, ಜಿಮ್ಸ್ ಆಸ್ಪತ್ರೆ, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT