‘ವೈದ್ಯ ರೂಪದ ರಾಕ್ಷಸರು ಬೇಡ’
‘ಹಣದ ಹಿಂದೆ ಬಿದ್ದಿರುವ ಆಸ್ಪತ್ರೆಗಳು ಸಾಮಾನ್ಯ ಜ್ವರಕ್ಕೂ ಹತ್ತಾರು ಪರೀಕ್ಷೆಗಳನ್ನು ನಡೆಸಿ ₹ 10 ಸಾವಿರದಿಂದ ₹ 20 ಸಾವಿರ ದುಡ್ಡನ್ನು ಜನಸಾಮಾನ್ಯರಿಂದ ಕಿತ್ತುಕೊಳ್ಳುತ್ತಿವೆ. ₹ 10 ಪಡೆಯುವಲ್ಲಿ ₹ 100 ಸುಲಿಗೆ ನಡೆಯುತ್ತಿದೆ. ವೈದ್ಯರೂಪದ ರಾಕ್ಷಸರು ನಮಗೆ ಬೇಡ. ರಾಜ್ಯ ಕಾನೂನು ಆಯೋಗದ ಅಧ್ಯಕ್ಷನಾಗಿದ್ದಾಗ ಹಲವಾರು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ್ದೇನೆ. ಹಣ ಮಾಡುವ ಸ್ಪರ್ಧೆಯಲ್ಲಿ ವೈದ್ಯರು ಶಿಕ್ಷಕರು ವಕೀಲರು ಸೇರಿ ವಿವಿಧ ವೃತ್ತಿಯಲ್ಲಿರುವವರು ನಿರತರಾಗಿದ್ದು ನೈತಿಕತೆ ಮರೆಯುತ್ತಿದ್ದಾರೆ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ಬೇಸರ ವ್ಯಕ್ತಪಡಿಸಿದರು. ಸಾಹಿತಿ ಹಂ.ಪ. ನಾಗರಾಜಯ್ಯ ‘ವಾಯುಮಾಲಿನ್ಯ ಜಲಮಾಲಿನ್ಯಕ್ಕಿಂತ ಭಾಷಾ ಮಾಲಿನ್ಯ ಇತ್ತೀಚೆಗೆ ಹೆಚ್ಚಾಗಿದೆ. ಭಾಷಾ ಪ್ರಯೋಗಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳಿಗೆ ಹೈಕೋರ್ಟ್ ಎಚ್ಚರಿಕೆ ನೀಡಿರುವುದು ಶ್ಲಾಘನೀಯ’ ಎಂದು ಹೇಳಿದರು.