ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಸ್ತೆ ಗುಂಡಿ: ಕಾಮಗಾರಿ ಗುಣಮಟ್ಟ ಪರಿಶೀಲನೆಗೆ ರಾತ್ರಿ ವೇಳೆ ನಗರ ಸಂಚಾರ– ಡಿಕೆಶಿ

Published : 21 ಸೆಪ್ಟೆಂಬರ್ 2024, 7:50 IST
Last Updated : 21 ಸೆಪ್ಟೆಂಬರ್ 2024, 7:50 IST
ಫಾಲೋ ಮಾಡಿ
Comments

ಬೆಂಗಳೂರು: ‘ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯ ಗುಣಮಟ್ಟ ವೀಕ್ಷಿಸಲು ರಾತ್ರಿ ಸಂಚಾರ ನಡೆಸುತ್ತೇನೆ. 2–3 ದಿನಗಳಲ್ಲಿ ದಿನಾಂಕ ತಿಳಿಸುತ್ತೇನೆ’ ಎಂದು ಬೆಂಗಳೂರು ಅಭಿವೃದ್ದಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಎಷ್ಟು ರಸ್ತೆಗುಂಡಿಗಳಿವೆ ಎಂಬುದರ ಬಗ್ಗೆ ನನ್ನ ಬಳಿ ಲೆಕ್ಕವಿದೆ. ಅಭಿಯಾನದ ರೀತಿ ಕೆಲಸ ಮಾಡಿದ್ದೇವೆ. ಇದು ಜವಾಬ್ದಾರಿ. ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಆದೇಶ ಕೊಟ್ಟ ಮೇಲೆ ಅಧಿಕಾರಿಗಳು ಇಷ್ಟು ತ್ವರಿತವಾಗಿ ಕೆಲಸ ಮಾಡಿದ್ದನ್ನು ನಾನು ನೋಡಿರಲಿಲ್ಲ’ ಎಂದರು.

‘ರಸ್ತೆಗುಂಡಿಗಳನ್ನು ಮುಚ್ಚಿಸುವ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳು ಹಗಲು- ರಾತ್ರಿ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು. ಮಧ್ಯೆ ಮಳೆ ಬಂದಿದೆ. ನೀವು (ಮಾಧ್ಯಮ) ಅಷ್ಟೋ, ಇಷ್ಟೊ ಕೆಲಸ ಮಾಡಿದ್ದಾರೆ ಎಂದು ವರದಿ ಮಾಡಿದ್ದೀರಿ. ನಾವು ಬದ್ಧತೆಯಿಂದ ನಾಗರಿಕರಿಗೆ ಅನುಕೂಲ ಮಾಡುವ ಕೆಲಸ ಮಾಡಿದ್ದೇವೆ’ ಎಂಳಿದರು.

ಅವಮಾನ ಮಾಡಲು ಇಷ್ಟವಿಲ್ಲ: ‘ನಾನು ಬೇರೆ ರಾಜ್ಯಗಳಿಗೆಲ್ಲಾ ಭೇಟಿ ನೀಡಿದ್ದೇನೆ. ಅಲ್ಲಿನ ರಸ್ತೆಯ ವಿಡಿಯೊಗಳನ್ನು ಹಾಕಿದರೆ ಆ ರಾಜ್ಯಗಳಿಗೆ ಅವಮಾನವಾಗುತ್ತದೆ. ಅದಕ್ಕಿಂತ ಉತ್ತಮವಾಗಿ ನಮ್ಮವರು ಇಲ್ಲಿನ ರಸ್ತೆಗಳ ಪರಿವರ್ತಿಸಬೇಕು ಎಂದು ಕೆಲಸ ಮಾಡಿದ್ದಾರೆ. ಅದರಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ’ ಎಂದರು.

ಸಂಚು ಕೇಳಿ ದಿಗ್ಬ್ರಮೆ: ‘ಶಾಸಕ ಮುನಿರತ್ನ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸುವ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದ್ದೀರಾ’ ಎಂದು ಕೇಳಿದಾಗ ‘ನನಗೆ ಮುಖ್ಯಮಂತ್ರಿ ಭೇಟಿ ಸಾಧ್ಯವಾಗಿಲ್ಲ. ಆದರೆ, ಆರ್. ಅಶೋಕ ಮೇಲೆ ಮಾಡಿದ್ದ ಸಂಚು ಕೇಳಿ ದಿಗ್ಬ್ರಮೆಯಾಗಿದ್ದೇನೆ. ಈ ರೀತಿಯ ಸಂಚನ್ನು ನಾನು ಕೇಳಿಲ್ಲ’ ಎಂದರು.

‘ಮುನಿರತ್ನ ವಿಚಾರವಾಗಿ ಅಶೋಕ  ಅವರು ಮೊದಲು ಮಾತನಾಡಿದ್ದನ್ನು ಕೇಳಿದ್ದೆ. ಈಗ ಮಾತನಾಡಿದ್ದನ್ನು ನಾನು ನೋಡಿಲ್ಲ. ಅಶೋಕಣ್ಣ, ಸಿ.ಟಿ. ರವಿಯಣ್ಣ, ವಿಜಯೇಂದ್ರಣ್ಣ ಅವರುಗಳು ಮಾತನಾಡಬೇಕು. ಈ ವಿಚಾರದಲ್ಲಿ ಸತ್ಯ ಏನಿದೆ ಎಂದು ತಮ್ಮ ಅಭಿಪ್ರಾಯಗಳನ್ನು ಹೇಳಬೇಕು. ಮುಖ್ಯವಾಗಿ ಕುಮಾರಣ್ಣ, ಡಾ. ಮಂಜುನಾಥ್ ಅವರು ಮಾತನಾಡಬೇಕು. ಯಾರು, ಯಾರಿಗೆ ಏನಾಗಿದೆ ಎಂದು ನಾನು ತಿಳಿದುಕೊಳ್ಳಲು ಆಗಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT