ಸಿಲಿಂಡರ್ ದರ ₹465 ರಿಂದ ₹1150ಕ್ಕೆ ಏರಿಸಿದವರು ಯಾರು?
‘ಸತತ 9 ವರ್ಷ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಿಸುತ್ತ ಬಂದವರು ಈಗ ನೂರು ರೂಪಾಯಿ ಇಳಿಸಿದ್ದಾರೆ. ಇಷ್ಟು ದಿನ ಬೆಲೆ ಏರಿಕೆಯ ಅರಿವು ನಿಮಗೆ ಬಂದಿರಲಿಲ್ಲವೇ? ಎಂದು ಯುವಕರು ಬಿಜೆಪಿಯವರನ್ನು ಕೇಳಬೇಕಿದೆ’ ಎಂದು ರಾಜ್ಯ ಕಾರ್ಮಿಕ ನಿಗಮ ಮಂಡಳಿಯ ಉಪಾಧ್ಯಕ್ಷ ಜಿ.ಎಸ್. ಮಂಜುನಾಥ್ ಹೇಳಿದರು. ‘ಸಿಲಿಂಡರ್ ಬೆಲೆಯನ್ನು ₹465 ರಿಂದ ₹1150ಕ್ಕೆ ಏರಿಸಿದವರು ಯಾರು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಚುನಾವಣೆ ಬಂದಿದೆ ಎಂದು ನೂರು ರೂಪಾಯಿ ಕಡಿಮೆ ಮಾಡಿರುವವರು ಹೇಗೆ ಸಾವಿರಾರು ರೂಪಾಯಿ ದೋಚಿದ್ದಾರೆ ಎಂಬುದನ್ನು ಜನತೆ ಮರೆಯಬಾರದು. 21 ಮಂದಿ ಕಾರ್ಪೋರೇಟ್ ಕುಳಗಳ ₹11.50 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಮೋದಿಯವರಿಗೆ ರೈತರ ಬಡವರ ಸಾಲ ಮನ್ನಾ ಮಾಡಿ ಎಂದರೆ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎನ್ನುತ್ತಾರೆ. ಇವರಿಗೆ ಬಡವರ ಕಲ್ಯಾಣದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ’ ಎಂದು ಆರೋಪಿಸಿದರು. ‘ದೇಶದ ಚಿತ್ರಣವನ್ನೇ ಅಭಿವೃದ್ಧಿ ಪಥದತ್ತ ಕೊಂಡೊಯ್ದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಸುಳ್ಳನ್ನೇ ಆಸ್ತಿಯನ್ನಾಗಿಸಿಕೊಂಡಿರುವ ಬಿಜೆಪಿಯವರು ಬೀದಿಯಲ್ಲಿ ನಿಂತು ಸುಳ್ಳು ಹೇಳಿದಾಕ್ಷಣ ಕಾಂಗ್ರೆಸ್ ಪಕ್ಷದ ಸಾಧನೆಗಳಿಗೆ ಧಕ್ಕೆಯಾಗದು’ ಎಂದು ಅವರು ಹೇಳಿದರು.