ಹೊಳೆನರಸೀಪುರ: ‘ಸರ್ಕಾರದ ದಾಖಲೆಗಳು ನಾಡಿನ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಅತ್ಯಗತ್ಯ. ಇಂತಹ ದಾಖಲೆಗಳು ರಾಷ್ಟ್ರದ ಪರಂಪರೆಯ ಭಾಗವೂ ಆಗಿದೆ. ರಾಜ್ಯ ಪತ್ರಾಗಾರ ಇಲಾಖೆ 180 ವರ್ಷಕ್ಕೂ ಹಳೆಯ ದಾಖಲೆಗಳನ್ನು ಸಂರಕ್ಷಿಸಿದೆ’ ಎಂದು ಮೈಸೂರು ವಿಭಾಗೀಯ ಕಚೇರಿಯ ಸಹಾಯಕ ನಿರ್ದೇಶಕ ಎಚ್.ಎಲ್. ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಪಡವಲಹಿಪ್ಪೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ‘ರಾಜ್ಯದ ಅರಣ್ಯ ಭೂಮಿಗೆ ಸಂಬಂಧಿಸಿದ, ಮೈಸೂರು ಸಂಸ್ಥಾನದಿಂದ ನೀಡಿದ ಮನೆಗಳು, ಆಸ್ತಿಗಳು ಹಾಗೂ ಕೆರೆತೊರೆಯ ದಾಖಲೆಗಳನ್ನು ಸಂರಕ್ಷಿಸಲಾಗಿದ್ದು, ಸಾರ್ವಜನಿಕರಿಗೆ ಈಗಲೂ ಲಭ್ಯ ಇದೆ’ ಎಂದರು.
‘ಈ ಕಡತಗಳು, ನಡವಳಿಗಳು, ಆದೇಶಗಳು, ವಾರ್ಷಿಕ ವರದಿಗಳು, ಭಾಷಣಗಳು, ನಕ್ಷೆಗಳು, ಛಾಯಾಚಿತ್ರಗಳು, ದಿನಪತ್ರಿಕೆಗಳು ಸೇರಿದಂತೆ ಧ್ವನಿ ಸಂಗ್ರಹದ ದಾಖಲೆಗಳು ಇರುತ್ತವೆ’ ಎಂದು ವಿವರಿಸಿದರು.
ಮೈಸೂರು ಸಂಸ್ಥಾನದ ಇತಿಹಾಸ, ಕರ್ನಾಟಕ ಏಕೀಕರಣ ಚಳವಳಿ, ಸ್ವಾತಂತ್ರ್ಯ ಹೋರಾಟ ಕುರಿತು ದಾಖಲೆಗಳಿವೆ’ ಎಂದು ಹೇಳಿದರು.
ಪ್ರಾಂಶುಪಾಲ ಜಿ.ಡಿ. ನಾರಾಯಣ್, ಸರ್ಕಾರದ ದಾಖಲೆಯಲ್ಲಿ ನಮ್ಮ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ದಾಖಲೆಗಳೂ ಲಭ್ಯ ಇವೆ. ಇಂಥ ಇಲಾಖೆ ಇದೆ ಎಂಬುದೇ ಅನೇಕರಿಗೆ ತಿಳಿದಿರಲಿಲ್ಲ’ ಎಂದರು.