ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಳಕಟ್ಟಿ ವಚನ ಸಾಹಿತ್ಯದ ಅನರ್ಘ್ಯ ರತ್ನ: ಡಾ.ಸಿ.ಸೋಮಶೇಖರ್

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಷ್ಟ್ರಾಧ್ಯಕ್ಷ ಡಾ.ಸಿ.ಸೋಮಶೇಖರ್
Published 3 ಜುಲೈ 2024, 4:44 IST
Last Updated 3 ಜುಲೈ 2024, 4:44 IST
ಅಕ್ಷರ ಗಾತ್ರ

ವಿರಾಜಪೇಟೆ: ‘ಬಸವಾದಿ ಶರಣರು ರಚಿಸಿದ ವಚನ ಸಂರಕ್ಷಿಸಿ ನವಪೀಳಿಗೆಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಾತಃ ಸ್ಮರಣೀಯ ಫಕೀರಪ್ಪ ಗುರಪ್ಪಾ ಹಳಕಟ್ಟಿ ವಚನ ಸಾಹಿತ್ಯದ ಅನರ್ಘ್ಯ ರತ್ನ’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಷ್ಟ್ರಾಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು.

ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ವಚನ ಸಾಹಿತ್ಯದ ಸಂರಕ್ಷಕ ಫ.ಗು.ಹಳಕಟ್ಟಿ ಜನ್ಮದಿನಾಚರಣೆ ಅಂಗವಾಗಿ ಸಮೀಪದ ಬಾಳುಗೋಡು ಏಕಲವ್ಯ ವಸತಿ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿ ಮಾತನಾಡಿದರು. ‘ಬಸವಾದಿ ಶರಣರು 12ನೇ ಶತಮಾನದಲ್ಲಿ ತಾಳೆಗರಿಯಲ್ಲಿ ರಚಿಸಿದ ವಚನಗಳನ್ನು ಪರಿಶೋಧಿಸಿ ಜತನದಿಂದ ಕಾದಿಟ್ಟು ಅವುಗಳನ್ನು ಪುಸ್ತಕಗಳ ರೂಪದಲ್ಲಿ ಪ್ರಕಟಿಸಿ ಜನಮಾನಸದಲ್ಲಿ ಜಾಗೃತಿಗೊಳಿಸಿದ ಕೀರ್ತಿ ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ’ ಎಂದರು.

‘ಇಂದಿನವರು ನೆಮ್ಮದಿ ಬದುಕು ಕಟ್ಟಿಕೊಳ್ಳಲು ವಚನ ಸಾರ ಅರಿಯಬೇಕು. ಇಂದಿನ ಮಕ್ಕಳು ಮೌಲ್ಯಗಳ ಉತ್ತರಾಧಿಕಾರಿಗಳಾಗಬೇಕೆ ಹೊರತು ಆಸ್ತಿಯ ವಾರಸುದಾರರಲ್ಲ’ ಎಂದರು.

ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಶರಣರು ತಾಳೆಗರಿಯಲ್ಲಿ ರಚಿಸಿದ ವಚನ ಸಾಹಿತ್ಯವನ್ನು ತನ್ನ ಮನೆ ಮಾರಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ ಫ.ಗು.ಹಳಕಟ್ಟಿ ಬಹುದೊಡ್ಡ ಮಾಣಿಕ್ಯ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ಕಲಬೇಡ ಕೊಲಬೇಡ ಎಂಬ ವಚನಗಳ ಸಪ್ತಸೂತ್ರಗಳನ್ನು ಅರಿತು ಶ್ರೇಷ್ಠ ವ್ಯಕ್ತಿತ್ವ ಹೊಂದಬೇಕು’ ಎಂದರು.

ಶನಿವಾರಸಂತೆ ಬಳಿಯ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಭಗವಂತನು ಮನುಕುಲಕ್ಕೆ ಕೊಟ್ಟ ಗಾಳಿ, ನೀರು, ಮಣ್ಣನ್ನು ಅಪವಿತ್ರಗೊಳಿಸದೇ ಜೋಪಾನವಾಗಿಡಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಹಾಗೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎ.ಆರ್.ಮಹದೇವಪ್ಪ ಮಾತನಾಡಿದರು.

ತುಮಕೂರಿನ ಶರಣ ಡಾ.ರಾಘವೇಂದ್ರ, ಡಾ.ಸುರೇಶ್, ಚಿದಾನಂದ, ಸರ್ವಮಂಗಳ ಸೋಮಶೇಖರ್, ಜಿಲ್ಲಾ ಶ.ಸಾ.ಪ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಪರಮೇಶ್, ಬಾಳುಗೋಡು ವಸತಿ ಶಾಲೆಯ ಪ್ರಾಂಶುಪಾಲ ಹಾಗೂ ಪೊನ್ನಂಪೇಟೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದಿಲನ್ ಮುತ್ತಣ್ಣ, ಶಾಲೆಯ ಶಿಕ್ಷಕರಾದ ಶೃತಿ ಮತ್ತು ಸುಜಾತ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು.

ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನಾ ಸ್ವಾಮೀಜಿ ಮಾತನಾಡಿದರು.
ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನಾ ಸ್ವಾಮೀಜಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT