ಮಸ್ಕಿ: ತಾಲ್ಲೂಕಿನಾದ್ಯಂತ ಶುಕ್ರವಾರ ರಾತ್ರಿ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ.
ಮಳೆಯಿಂದಾಗಿ ಪಟ್ಟಣದಲ್ಲಿ ಚರಂಡಿಗಳು ತುಂಬಿ ಹರಿದ ಕಾರಣ ತ್ಯಾಜ್ಯ ರಸ್ತೆ ಮೇಲೆ ಎಲ್ಲೆಂದರಲ್ಲಿ ಬಿದ್ದಿತ್ತು. ಶನಿವಾರ ಬೆಳಿಗ್ಗೆ ಪುರಸಭೆ ಸಿಬ್ಬಂದಿ ತೆರವುಗೊಳಿಸಿ ರಸ್ತೆ ಸ್ವಚ್ಛಗೊಳಿಸಿದರು.
ಮಸ್ಕಿಯಲ್ಲಿ 26.2 ಎಂ.ಎಂ, ತಲೇಖಾನ 33.2 ಎಂ.ಎಂ, ಹಾಲಾಪುರ 33 ಎಂ.ಎಂ, ಪಾಮನಕಲ್ಲೂರು 18.4 ಎಂ.ಎಂ, ಬಳಗಾನೂರು 26.8 ಎಂ.ಎಂ ಹಾಗೂ ಗುಡದೂರು ಹೋಬಳಿಯಲ್ಲಿ 29.3 ಎಂಎಂ ಮಳೆಯಾಗಿದೆ ಎಂದು ತಹಶೀಲ್ದಾರ್ ಮಲ್ಲಪ್ಪ ಯರಗೋಳ ತಿಳಿಸಿದ್ದಾರೆ.
ಬಳಗಾನೂರು ಗ್ರಾಮದಲ್ಲಿ ಸಿಡಿಲು ಬಡಿದು ಮಲ್ಲಪ್ಪ ಎಂಬ ರೈತ ಮೃತಪಟ್ಟಿದ್ದಾರೆ. ರೈತನ ಕುಟುಂಬಕ್ಕೆ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದರು.
ತಾಲ್ಲೂಕಿನಾದ್ಯಂತ ಮಳೆಯಿಂದಾಗಿ ಆದ ನಷ್ಟದ ಸರ್ವೆ ಮಾಡುವಂತೆ ಗ್ರಾಮ ಆಡಳಿತಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.