ಉಡುಪಿ: ತ್ಯಾಜ್ಯ ವಿಲೇವಾರಿ ಘಟಕದ ಕಸವನ್ನು ಮಣ್ಣಿನಲ್ಲಿ ಹೂಳುವುದನ್ನು ವಿರೋಧಿಸಿ ಗ್ರಾಮಸ್ಥರು ಮತ್ತು ಬಿಜೆಪಿ ಬೆಂಬಲಿತ ಸದಸ್ಯರು ತೆಂಕನಿಡಿಯೂರು ಗ್ರಾಮ ಪಂಚಾಯಿತಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ತ್ಯಾಜ್ಯ ವಿಲೇವಾರಿ ಘಟಕದಿಂದಾಗಿ ತೆಂಕನಿಡಿಯೂರು ವಿಷ್ಣಮೂರ್ತಿ ನಗರದ ನಿವಾಸಿಗಳಿಗೆ ಸಮಸ್ಯೆಯಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಕೆಲ ದಿನಗಳ ಹಿಂದೆ ಪಂಚಾಯಿತಿ ಅಧ್ಯಕ್ಷೆಯ ಸೂಚನೆ ಮೇರೆಗೆ ತ್ಯಾಜ್ಯ ಘಟಕದ ಬಳಿ ಜೆಸಿಬಿಯಿಂದ ಹೊಂಡ ತೋಡಿ ಕಸವನ್ನು ಮಣ್ಣಿನಡಿಯಲ್ಲಿ ಹೂತು ಹಾಕಲಾಗಿದೆ. ಕಸ ಹೂತು ಹಾಕಿದ ಸ್ಥಳದಲ್ಲಿ ಮಳೆನೀರು ಸಂಗ್ರಹಗೊಂಡು ಸಮೀಪದ ಕೊಳವೆ ಬಾವಿಯ ನೀರು ಕಲುಷಿತಗೊಂಡಿದೆ ಎಂದು ಆರೋಪಿಸಿದರು.
ಮಣ್ಣಿನಲ್ಲಿ ಹೂತುಹಾಕಿದ ಕಸವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.