ನವದೆಹಲಿ: ರಾಷ್ಟ್ರರಾಜಧಾನಿ ಹಾಗೂ ಎಎಪಿಯ ಭದ್ರಕೋಟೆ ಎಂದೇ ಕರೆಯಲಾಗುತ್ತಿದ್ದ ದೆಹಲಿಯ ಏಳೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ದೆಹಲಿಯ ಏಳು ಕ್ಷೇತ್ರಗಳಿಗೆ ಕಾಂಗ್ರೆಸ್ ಮತ್ತು ಎಎಪಿ ಮೈತ್ರಿ ಮಾಡಿಕೊಂಡಿದ್ದವು.
ಈಶಾನ್ಯ ದೆಹಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ಅವರು ಒಂದು ಲಕ್ಷ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇವರ ಎದುರು ಕಾಂಗ್ರೆಸ್ನ ಕನ್ಹಯ್ಯ ಕುಮಾರ್ ಸ್ಪರ್ಧಿಸಿದ್ದರು.
ಚಾಂದಿನಿಚೌಕ್ ಕ್ಷೇತ್ರದಲ್ಲಿ ಬಿಜೆಪಿಯ ಪ್ರವೀಣ್ ಖಂಡೇಲ್ವಾಲ್ ಅವರು ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್ನ ಜೈ ಪ್ರಕಾಶ್ ಅಗರವಾಲ್ ಪೈಪೋಟಿ ನೀಡಿದ್ದಾರೆ. ನವದೆಹಲಿಯಿಂದ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್, ಪೂರ್ವ ದೆಹಲಿಯಲ್ಲಿ ಹರೀಶ್ ಮಲ್ಹೋತ್ರಾ, ಪಶ್ಚಿಮ ದೆಹಲಿಯಿಂದ ಕಮಲಜೀತ್ ಶೆರಾವತ್, ದಕ್ಷಿಣ ದೆಹಲಿ ರಾಮ್ವೀರ್ ಸಿಂಗ್ ಬಿದೂರಿ, ಆಗ್ನೇಯ ದೆಹಲಿಯಲ್ಲಿ ಯೋಗೇಂದರ್ ಚಂಡೋಲಿಯಾ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಹುತೇಕ ಮತ ಎಣಿಕೆ ಪೂರ್ಣಗೊಂಡಿದ್ದು, ಘೋಷಣೆಯೊಂದು ಬಾಕಿ ಉಳಿದಿದೆ.
ಇತ್ತೀಚಿನ ಮಾಹಿತಿ ಪ್ರಕಾರ ಬಿಜೆಪಿ ಶೇ 54ರಷ್ಟು ಮತಗಳನ್ನು ಪಡೆದಿದ್ದರೆ, ಎಎಪಿ ಶೇ 26ರಷ್ಟು ಮತ್ತು ಕಾಂಗ್ರೆಸ್ ಶೇ 17ರಷ್ಟು ಮತಗಳನ್ನು ಪಡೆದಿದೆ.
ಎಎಪಿಯ ಪ್ರಮುಖ ಪ್ರಚಾರಕ ಅರವಿಂದ ಕೇಜ್ರಿವಾಲ್ ಅವರ ಬಂಧನವಾಗಿತ್ತು. ಚುನಾವಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ನಿಂದ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರು. ಆದರೆ ಕೇಜ್ರಿವಾಲ್ ಸರ್ಕಾರ ಸಾಕಷ್ಟು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪವನ್ನು ಬಿಜೆಪಿ ನಾಯಕರು ಮಾಡುತ್ತಲೇ ಬಂದಿದ್ದರು. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವುದರ ಜತೆಗೆ ನ್ಯಾಯ ಗ್ಯಾರಂಟಿ ನೀಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು.