ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Lifestyle: ಬೇಸಿಗೆಗೆ ಬಾಡದಿರಲಿ ಉತ್ಸಾಹ- ಏನು ಮಾಡಬೇಕು?

Published : 11 ಏಪ್ರಿಲ್ 2023, 0:15 IST
ಫಾಲೋ ಮಾಡಿ
Comments

‘ನಮ್ಮೂರಲ್ಲಿ ಎರಡೇ ಕಾಲ; ಬಿಸಿಲುಕಾಲ ಮತ್ತು ತುಂಬಾ ಬಿಸಿಲುಕಾಲ’ ಎನ್ನುವ ಚಮತ್ಕಾರದ, ಆದರೆ ನೈಜತೆಯ ಛಾಯೆಯಿರುವ ಮಾತುಗಳನ್ನು ಕೇಳಿರುತ್ತೇವೆ. ಚಳಿಗಾಲದ ವೇಳೆ ರಗ್ಗು ಹೊದೆದು ಬೆಚ್ಚನೆ ಮಲಗುವ ಅನೇಕರು ‘ಈ ಋತುವಿನಲ್ಲಿ ಚೆನ್ನಾಗಿ ಮಲಗಿ, ಬೇಸಿಗೆಯಲ್ಲಿ ಘನಂದಾರಿ ಸಾಧನೆ ಮಾಡಿಬಿಡುತ್ತೇನೆ’ ಎಂದು ತಮಗೆ ತಾವೇ ಆಶ್ವಾಸನೆ ನೀಡಿರುತ್ತಾರೆ. ಆದರೆ ಬೇಸಿಗೆಯ ಝಳ ಎಂತಹ ಉತ್ಸಾಹಿಗಳನ್ನೂ ಹೈರಾಣು ಮಾಡಬಲ್ಲದು. ಬೇಸಿಗೆಯನ್ನು ಸಹನೀಯವಾಗಿಸಬಲ್ಲ ಕೆಲವು ಸಲಹೆಗಳು ಇಲ್ಲಿವೆ:

l ವಿಪರೀತ ಬಿಸಿಲಿಗೆ ದೇಹವನ್ನು ಒಡ್ಡದಿರುವುದು ಸೂಕ್ತ. ತಾಪಮಾನ ಹೆಚ್ಚಿರುವಾಗ ಹೆಚ್ಚಿನ ದೇಹಶ್ರಮ ಮಾಡುವ ಪ್ರಮೇಯ ಬಂದರೆ ಎಚ್ಚರ ವಹಿಸಬೇಕು. ಮಕ್ಕಳು, ಸಾಕುಪ್ರಾಣಿಗಳನ್ನು ಬಿಸಿಲಿನಲ್ಲಿ ನಿಂತ ವಾಹನಗಳಲ್ಲಿ ಬಂಧಿಸಿ ಹೆಚ್ಚು ಕಾಲ ಬಿಟ್ಟು ಹೋಗಬಾರದು. ಬಿಸಿಲಿನಲ್ಲಿ ಕೆಲಸ ಮಾಡುವ ವೇಳೆ ಸೂಕ್ತ ಗಾಢತೆಯ ಸನ್-ಸ್ಕ್ರೀನ್ ಮುಲಾಮಿನ ಬಳಕೆಯನ್ನು ವೈದ್ಯರು ಸೂಚಿಸುತ್ತಾರೆ.

l ಶರೀರದ ನೀರಿನ ಪ್ರಮಾಣ ಕಡಿಮೆಯಾಗಬಾರದು. ನೈಸರ್ಗಿಕ ಪಾನೀಯಗಳಾದ ನೀರು, ಎಳೆನೀರು, ನೀರುಮಜ್ಜಿಗೆ, ನಿಂಬೆಹಣ್ಣಿನ ಪಾನಕ, ಸಕ್ಕರೆ ಬೆರೆಸದ ತಾಜಾ ಹಣ್ಣಿನ ರಸ, ಕಲ್ಲಂಗಡಿ, ಕಿತ್ತಳೆ, ಸೌತೆ ಮೊದಲಾದ ದ್ರವಯುಕ್ತ ಹಣ್ಣು-ತರಕಾರಿಗಳನ್ನು ಆಗಾಗ ಸೇವಿಸುವುದು ಒಳಿತು. ಇದರಿಂದ ದೇಹದ ಆಂತರಿಕ ವ್ಯವಸ್ಥೆ ತಂಪಾಗುತ್ತದೆ. ಶರೀರದಲ್ಲಿ ನೀರಿನ ಪ್ರಮಾಣ ಕಡಿಮೆಯಾದಷ್ಟೂ ಒಳಗಿನ ಅಂಗಗಳ ಮೇಲೆ ಒತ್ತಡ ಹೆಚ್ಚುತ್ತದೆ. ಇದು ರಕ್ತದಲ್ಲಿನ ಲವಣದ ಅಂಶಗಳನ್ನು ಏರುಪೇರು ಮಾಡಬಲ್ಲದು. ಇದು ಸ್ನಾಯುಗಳ ಸೆಳೆತದಿಂದ ಹಿಡಿದು ಮಿದುಳಿನ ರಕ್ತಸ್ರಾವದವರೆಗೆ ಅನೇಕ ಪ್ರಮಾದಕಾರಿ ಸಮಸ್ಯೆಗಳಿಗೆ ಕಾರಣವಾಗಬಲ್ಲದು. ಕಾಫಿ, ಟೀ, ಮದ್ಯ, ಸೋಡಾಯುಕ್ತ ಪಾನೀಯಗಳನ್ನು ದೂರವಿಡಬೇಕು. ಇವುಗಳು ಮೂತ್ರಪಿಂಡಗಳನ್ನು ಪ್ರಚೋದಿಸಿ ಶರೀರದಿಂದ ಹೆಚ್ಚು ನೀರಿನ ಅಂಶವನ್ನು ಹೊರಹಾಕುತ್ತವೆ. ಅಂದರೆ, ಒಂದು ಕಪ್ ಟೀ ಸೇವಿಸಿದರೆ, ಅದರ ಪರಿಣಾಮದಿಂದ ಶರೀರ ಆ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನು ಕಳೆದುಕೊಳ್ಳುತ್ತದೆ. ಹೀಗಾಗಿ, ಇಂತಹ ಪಾನೀಯಗಳು ನಿರ್ಜಲೀಕರಣಕ್ಕೆ ದಾರಿಯಾಗುತ್ತವೆ.

l ಹಗುರವಾದ, ಮೈಗೆ ಅಂಟದ, ಹತ್ತಿಯ ಬಟ್ಟೆಗಳನ್ನು ಧರಿಸಬೇಕು. ತೀರಾ ಭಾರಿಯಾದ, ಭಾರವಾದ, ಗಾಢವರ್ಣದ ಬಟ್ಟೆಗಳು ಸೆಖೆಯನ್ನು ಹೆಚ್ಚಿಸುತ್ತವೆ. ಇದರಿಂದ ಹೆಚ್ಚಿನ ಪ್ರಮಾಣದ ಬೆವರು ನಷ್ಟವಾಗಿ ನಿರ್ಜಲೀಕರಣ ಉಂಟಾಗಬಹುದು. ಸುಸ್ತು, ನೀರಸ, ತಲೆಸುತ್ತು ಮೊದಲಾದ ಸಮಸ್ಯೆಗಳಿಗೆ ನಿರ್ಜಲೀಕರಣ ದಾರಿಯಾಗುತ್ತದೆ. ಮುಖದ ಮೇಲೆ ಮತ್ತು ಕತ್ತಿನ ಹಿಂಭಾಗದಲ್ಲಿ ತಣ್ಣೀರಿನಲ್ಲಿ ಹಿಂಡಿದ ತೇವದ ಬಟ್ಟೆಯನ್ನು ಹಾಕಿಕೊಳ್ಳುವುದು; ಸ್ನಾನದ ವೇಳೆ ತಣ್ಣೀರನ್ನೋ ಅಥವಾ ಉಗುರು ಬೆಚ್ಚಗಿನ ನೀರನ್ನೋ ಬಳಸುವುದು ಶರೀರದ ಶಾಖವನ್ನು ಕಳೆಯುವ ಬಾಹ್ಯ ವಿಧಾನಗಳು.

l ಆಹಾರ ಮತ್ತು ನೀರಿನ ಮೂಲಕ ಹರಡುವ ರೋಗಗಳು ಬೇಸಿಗೆಯಲ್ಲಿ ಅಧಿಕ. ಹೀಗಾಗಿ, ಸೇವಿಸುವ ಆಹಾರ ಮತ್ತು ಪಾನೀಯಗಳ ಬಗ್ಗೆ ಗಮನ ಇರಬೇಕು. ಈ ಕಾಲದಲ್ಲಿ ಮಕ್ಕಳಿಗೆ ರಜೆ ಇರುವುದರಿಂದ ಪ್ರವಾಸಗಳಿಗೆ ಹೋಗುವವರ ಸಂಖ್ಯೆ ಹೆಚ್ಚು. ಈ ರೀತಿ ಹೊರಗೆ ಹೋಗುವಾಗ ತಿನಿಸು-ಪಾನೀಯಗಳ ಮೇಲೆ ಹೆಚ್ಚಿನ ನಿಯಂತ್ರಣ ಇರುವುದಿಲ್ಲ. ಸಾಧ್ಯವಾದಷ್ಟೂ ಬಿಸಿಯಾಗಿ ತಯಾರಿಸಿದ ತಾಜಾ ಆಹಾರ ಸೇವನೆ ಸೂಕ್ತ. ಸ್ವಚ್ಛವಾದ ನೀರು, ಭದ್ರಪಡಿಸಿದ ಪಾನೀಯಗಳ ಬಳಕೆ ಒಳ್ಳೆಯದು.

l ನಮ್ಮ ವಾಸದ ಪರಿಸರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ನಮ್ಮಲ್ಲಿ ಕಟ್ಟುವ ಬಹುತೇಕ ಕಟ್ಟಡಗಳು ಶಾಖವನ್ನು ಹೀರಿಕೊಂಡು, ಒಳಗೆ ವಾಸಿಸುವ ಜನರಿಗೆ ಹೆಚ್ಚು ಬಿಸಿಯ ಅನುಭವ ನೀಡುತ್ತವೆ. ನಗರ ಪ್ರದೇಶಗಳಲ್ಲಿ ಒತ್ತೊತ್ತಾಗಿ ಕಟ್ಟಿರುವ ಕಟ್ಟಡಗಳಲ್ಲಿ ಗಾಳಿ ಸಂಚಾರ ಕೂಡ ಸಮಂಜಸವಾಗಿ ಇರುವುದಿಲ್ಲ. ರಾತ್ರಿಯ ವೇಳೆ ಪರಿಸರದ ತಾಪಮಾನ ಕಡಿಮೆ ಇರುವುದರಿಂದ ಗಾಳಿ ತಂಪಾಗಿರುತ್ತದೆ. ಹೀಗಾಗಿ, ಸೂರ್ಯಾಸ್ತದ ನಂತರ ಕಿಟಕಿಗಳನ್ನು ತೆರೆದು ಸಾಧ್ಯವಾದಷ್ಟೂ ನೈಸರ್ಗಿಕ ಗಾಳಿ ಮನೆಯೊಳಗೆ ಸಂಚರಿಸುವಂತೆ ಮಾಡಬೇಕು. ಅಂತೆಯೇ, ಹಗಲಿನ ವೇಳೆ ಕಿಟಕಿಗಳನ್ನು ಮುಚ್ಚಿ, ಗಾಜುಗಳಿಗೆ ಅಡ್ಡಲಾಗಿ ತೆರೆಯನ್ನು ಮುಚ್ಚಬೇಕು. ಮನೆಯೊಳಗಿನ ಗಾಳಿ ಎಲ್ಲೆಡೆ ಹರಡುವಂತೆ ಮಾಡಲು ವಾತಾನುಕೂಲಿಗಳ ಬದಲಿಗೆ ಫ್ಯಾನುಗಳ ಬಳಕೆ ಪರಿಸರಸ್ನೇಹಿ. ಮನೆಯೊಳಗಿನ ತಾಪಮಾನ ಹೊರಗಿನದಕ್ಕಿಂತ 3 ಡಿಗ್ರಿ ಕಡಿಮೆ ಇರುವುದು ನಮ್ಮ ದೇಹದ ಚಯಾಪಚಯಗಳಿಗೆ ಅನುಕೂಲ.

l ವೃದ್ಧರಲ್ಲಿ ಬೆವರನ್ನು ಸ್ರವಿಸುವ ಸಾಮರ್ಥ್ಯ ಕುಂಠಿತವಾಗುವುದರಿಂದ ದೇಹದ ಶಾಖವನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಜೊತೆಗೆ, ವಯೋಸಹಜ ಕಾಯಿಲೆಗಳು ಅವರ ಆಂತರಿಕ ಶಕ್ತಿಯನ್ನು ಕುಂದಿಸುತ್ತವೆ. ಇಂತಹವರು ತೀವ್ರ ಬಿಸಿಲಿನ ವೇಳೆ ಯಾವುದಾದರೂ ತಂಪಾದ ಸ್ಥಳದಲ್ಲಿ ಇರುವುದು ಸಮಂಜಸ.

ಬೇಸಿಗೆ ಅನಿವಾರ್ಯ. ಅದನ್ನು ಜಾಣತನದಿಂದ ನಿರ್ವಹಿಸಲು ಸರಿಯಾದ ಮಾಹಿತಿ ಸಹಾಯಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT