ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಧ್ರ–ತೆಲಂಗಾಣ ಚರ್ಚೆ: ನಾಯ್ಡು ಪ್ರಸ್ತಾವಕ್ಕೆ ರೆಡ್ಡಿ ಸಹಮತ; ಜುಲೈ 6ಕ್ಕೆ ಸಭೆ

Published : 2 ಜುಲೈ 2024, 15:50 IST
Last Updated : 2 ಜುಲೈ 2024, 15:50 IST
ಫಾಲೋ ಮಾಡಿ
Comments

ಹೈದರಾಬಾದ್: ಪ್ರತ್ಯೇಕಗೊಂಡ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಆಡಳಿತ ವಿಷಯದಲ್ಲಿ ಉಳಿದಿರುವ ಕೆಲವೊಂದು ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಸ್ತಾವನೆಯನ್ನು ತೆಲಂಗಾಣ ಮುಖ್ಯಮಂತ್ರಿ ರೇವಂತರೆಡ್ಡಿ ಸ್ವಾಗತಿಸಿದ್ದಾರೆ.

ಈ ಸಂಬಂಧ ಹೈದರಾಬಾದ್‌ನ ಮಹಾತ್ಮಾ ಜ್ಯೋತಿ ರಾವ್ ಫುಲೆ ಭವನದಲ್ಲಿ ಜುಲೈ 6ರಂದು ಉಭಯ ರಾಜ್ಯಗಳ ಮುಖ್ಯಮಂತ್ರಿಳ ನಡುವಿನ ಮಾತುಕತೆ ನಡೆಸಲು ದಿನ ನಿಗದಿಪಡಿಸಲಾಗಿದೆ.

‘ಪ್ರತ್ಯೇಕ ರಾಜ್ಯ ಕಾಯ್ದೆಯಡಿ ಬಾಕಿ ಉಳಿದಿರುವ ಸಮಸ್ಯೆಗಳನ್ನು ಬಗೆಹರಿಸಲು ಮುಖಾಮುಖಿ ಚರ್ಚೆ ಸಹಕಾರಿಯಾಗಲಿದೆ. ಪರಸ್ಪರ ಸಹಕಾರ ಹಾಗೂ ಆಲೋಚನೆಗಳ ವಿನಿಮಯದಿಂದ ಎರಡೂ ರಾಜ್ಯಗಳ ಜನರಿಗೆ ಅನುಕೂಲ ಕಲ್ಪಿಸಲು ಸಹಕಾರಿಯಾಗಲಿದೆ’ ಎಂದು ರೆಡ್ಡಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

‘ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಅದ್ಭುತ ಯಶಸ್ಸು ಸಾಧಿಸಿದ ನಾಯ್ಡು ಅವರಿಗೆ ರೇವಂತ್ ಅಭಿನಂದನೆ ಸಲ್ಲಿಸಿದ್ದಾರೆ. ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ದೇಶದ ರಾಜಕೀಯದಲ್ಲೇ ವಿಭಿನ್ನ ನಾಯಕರ ಸಾಲಿಗೆ ಅವರು ನಿಂತಿದ್ದಾರೆ’ ಎಂದು ಬಣ್ಣಿಸಿದ್ದಾರೆ.

‘ತೆಲುಗು ಭಾಷಿಕ ರಾಜ್ಯಗಳು ಪ್ರತ್ಯೇಕಗೊಂಡು 10 ವರ್ಷಗಳಾದವು. ರಾಜ್ಯಗಳ ಪುನರ್‌ ರಚನೆ ಕಾಯ್ದೆಯಡಿ ಹಲವು ವಿಷಯಗಳು ಚರ್ಚೆಗೆ ಬಾಕಿ ಇವೆ. ಇದು ಉಭಯ ರಾಜ್ಯಗಳ ಅಭಿವೃದ್ಧಿಗೆ ನೆರವಾಗಲಿದೆ’ ಎಂದು ನಾಯ್ಡು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

2014ರ ಜೂನ್ 2ರಂದು ಅವಿಭಜಿತ ಆಂಧ್ರಪ್ರದೇಶದಿಂದ ತೆಲಂಗಾಣ ಪ್ರತ್ಯೇಕಗೊಂಡಿತು. ಆಸ್ತಿ ಹಂಚಿಕೆ, ವಿದ್ಯುತ್ ಶುಲ್ಕ ಬಾಕಿ ಸೇರಿದಂತೆ ಹಲವು ವಿಷಯಗಳು ಎರಡೂ ರಾಜ್ಯಗಳ ನಡುವೆ ಬಾಕಿ ಉಳಿದಿವೆ. ಅಂದಿನಿಂದ 2024ರವರೆಗೂ ಉಭಯ ರಾಜ್ಯಗಳಿಗೆ ಹೈದರಾಬಾದ್‌ ರಾಜಧಾನಿಯಾಗಿತ್ತು. ಈಗ ಈ ನಗರ ತೆಲಂಗಾಣಕ್ಕೆ ಮಾತ್ರ ರಾಜಧಾನಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT