ನವದೆಹಲಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಮಠಾಧೀಶರ ನಡೆ ಸರಿಯಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ನ ಬಸವರಾಜ ರಾಯರಡ್ಡಿ ಅಭಿಪ್ರಾಯಪಟ್ಟರು.
ಇಲ್ಲಿನ ಕರ್ನಾಟಕ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅರಿಷಡ್ವರ್ಗಗಳನ್ನು ಜಯಿಸಿದ್ದಾರೆ ಎಂಬ ಕಾರಣಕ್ಕೆ ಎಲ್ಲ ಸಮುದಾಯಗಳ ಮಠಾಧೀಶರಿಗೆ ಎಲ್ಲ ಸಮುದಾಯಗಳಿಗೆ ಸೇರಿದ ಜನರು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಭಕ್ತರು ಕಾಲಿಗೆ ಬೀಳುತ್ತಾರೆ. ಆದರೆ, ಮಠಾಧೀಶರು ಒಂದು ಪಕ್ಷದಮುಖಂಡರನ್ನು ಬೆಂಬಲಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
5ನೇ ಅಂಗ ಸಾಷ್ಟಾಂಗ:
ಸಂವಿಧಾನದಲ್ಲಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳು ಪ್ರಮುಖ ಅಂಗಗಳಾದರೂ, ಜನತೆಯೆದುರು ಸತ್ಯ ಹೊರಗಿಡುವ ಪತ್ರಿಕಾ ರಂಗವನ್ನು ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ಅದರ ಜೊತೆಗೆ ಈಗ ರಾಜಕಾರಣಿಗಳು ಸ್ವಾಮೀಜಿಗಳಿಗೆ ಹಾಕುವ 'ಸಾಷ್ಟಾಂಗ'ವೂ ಸೇರಿದೆ. 'ಸಾಷ್ಟಾಂಗ' ಹಾಕುವ ಮೂಲಕ ಅಧಿಕಾರ ಉಳಿಸಿಕೊಳ್ಳುವ ಪರಿಪಾಠ ನಡೆದಿದೆ ಎಂದು ಅವರು ವ್ಯಂಗ್ಯವಾಡಿದರು.
ಕಾಂಗ್ರೆಸ್ ಶಾಸಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಂ.ಬಿ. ಪಾಟೀಲ ಅವರು ಲಿಂಗಾಯತರು ಎಂಬ ಕಾರಣದಿಂದ ಯಡಿಯೂರಪ್ಪ ಅವರಿಗೆ ಬಹಿರಂಗ ಬೆಂಬಲ ನೀಡಿರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಒಂದು ಪಕ್ಷದ ತತ್ವ, ಸಿದ್ಧಾಂತಕ್ಕೆ ಒಳಪಟ್ಟ ಈ ಶಾಸಕರು, ಸಿದ್ಧಾಂತ, ಶಿಸ್ತು ಇಲ್ಲದ ಇನ್ನೊಂದು ಪಕ್ಷದ ಮುಖಂಡರ ಬೆಂಬಲಕ್ಕೆ ನಿಲ್ಲುವುದು ಎಷ್ಟು ಸೂಕ್ತ? ಎಂದು ಅವರು ಪ್ರಶ್ನಿಸಿದರು.