ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಛತ್ತೀಸಗಡ | ಮಾವೋವಾದಿಗಳಿಗೆ ಬೆಂಬಲ: ನಾಲ್ವರ ಬಂಧನ

Published 25 ಜೂನ್ 2024, 15:39 IST
Last Updated 25 ಜೂನ್ 2024, 15:39 IST
ಅಕ್ಷರ ಗಾತ್ರ

ಮಾನಪುರ (ಛತ್ತೀಸಗಡ): ಮಾವೋವಾದಿಗಳಿಗೆ ಬೆಂಬಲ ನೀಡುತ್ತಿದ್ದ ನಾಲ್ಕು ಮಂದಿಯನ್ನು ಮೊಹಲಾ–ಮಾನಪುರ–ಅಂಬಾಗಡ ಚೌಕಿ (ಎಂಎಂಎಸಿ) ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಸಿವಿಲ್ ಗುತ್ತಿಗೆದಾರ ಕೂಡ ಬಂಧಿತರಲ್ಲಿ ಸೇರಿದ್ದಾರೆ.

ಇವರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಬಂಧಿತರ ಬಳಿಯಲ್ಲಿ ಇದ್ದ, ನಕ್ಸಲೀಯರಿಗೆ ಸೇರಿದ ಟ್ರ್ಯಾಕ್ಟರ್ ಒಂದನ್ನು ವಶಕ್ಕೆ ಪಡೆಯಲಾಗಿದೆ.

ಮಹೇಶ್ ಮೇಶರಮ್, ಅರವಿಂದ ತುಳಾವಿ, ರಾಮಕಿಶನ್ ಯಾದವ್ ಮತ್ತು ಸುಶೀಲ್ ಸಾಹು ಬಂಧಿತರು ಎಂದು ರಾಜನಂದಗಾಂವ್ ಐಜಿಪಿ ದೀಪಕ್ ಝಾ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಶಪಡಿಸಿಕೊಳ್ಳಲಾದ ಟ್ರ್ಯಾಕ್ಟರ್ ತುಳಾವಿ ಅವರ ಬಳಿ ಇತ್ತು. ಅದನ್ನು ಅವರು ನಿಷೇಧಿತ ಸಂಘಟನೆಯ ಸೂಚನೆ ಆಧರಿಸಿ ಬಾಡಿಗೆಗೆ ನೀಡುತ್ತಿದ್ದರು ಎಂದು ಝಾ ಮಾಹಿತಿ ನೀಡಿದ್ದಾರೆ. ‘ರಾಜ್ಯ ಪೊಲೀಸರ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಮತ್ತು ಇಂಡೊ–ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಸಿಬ್ಬಂದಿ ತುಳಾವಿ ಅವರ ಮನೆ ಮೇಲೆ ದಾಳಿ ನಡೆಸಿ, ಅವರನ್ನು ಬಂಧಿಸಿದರು. ತುಳಾವಿ ಅವರ ಹೇಳಿಕೆ ಆಧರಿಸಿ ಇತರರನ್ನು ಬಂಧಿಸಲಾಯಿತು’ ಎಂದು ಝಾ ತಿಳಿಸಿದ್ದಾರೆ.

ಬಂಧಿತರ ವಿರುದ್ಧ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ), ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಾಜನಂದಗಾಂವ್ ಜಿಲ್ಲೆಯ ನಿವಾಸಿ ರಾಮಕಿಶನ್ ಯಾದವ್ ಅವರು ಸಿವಿಲ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮತ್ತು ರಾಜ್ಯದ ಅರಣ್ಯ ಇಲಾಖೆಯ ಬೇರೆ ಬೇರೆ ರಸ್ತೆ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT