ನವದೆಹಲಿ: ಉದಯಪುರದಲ್ಲಿ ಟೇಲರ್ ಕನ್ಹಯ್ಯ ಲಾಲ್ ಅವರನ್ನು ಹತ್ಯೆ ಮಾಡಿದವರನ್ನು ಕ್ಷಮಿಸಿದ್ದಾಗಿ ಪಕ್ಷದ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ ಎಂಬ ರೀತಿಯಲ್ಲಿ ತಿರುಚಿದ ವಿಡಿಯೊಗಳನ್ನು ಹರಿಬಿಡುವುದನ್ನು ಮುಂದುವರಿಸಿದರೆ, ಬಿಜೆಪಿ ಮುಖಂಡರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಕಾಂಗ್ರೆಸ್ ಭಾನುವಾರ ಎಚ್ಚರಿಸಿದೆ.
ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಭ್ಯತೆ ಎಂಬುದು ಕಾಂಗ್ರೆಸ್ ಮುಖಂಡರಿಗೆ ಆಭರಣವೇ ಹೊರತು, ಅದು ಸಂಕೋಲೆ ಎಂಬುದಾಗಿ ಯಾರೂ ಅರ್ಥೈಸಬಾರದು’ ಎಂದು ಹೇಳಿದರು.
‘ಸಭ್ಯತೆ ಎಂಬ ಆಭರಣವನ್ನು ತೆಗೆದಿರಿಸಿ, ಬಿಜೆಪಿ ಹಾಗೂ ಆ ಪಕ್ಷದ ಮುಖಂಡರ ವಿರುದ್ಧ ಸೂಕ್ತ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಿದ್ಧ. ಬಿಜೆಪಿ ಹಾಗೂ ಅದರ ಐಟಿ ವಿಭಾಗದ ಕಾರ್ಯವೈಖರಿಯನ್ನು ನಾವೂ ಗಮನಿಸುತ್ತಿದ್ದೇವೆ. ಈಗ ಸುಮ್ಮನೇ ನೋಡುತ್ತಾ ಕುಳಿತುಕೊಳ್ಳುವ ಕಾಲ ಮುಗಿಯಿತು’ ಎಂದು ಎಚ್ಚರಿಸಿದರು.
‘ರಾಜ್ಯವರ್ಧನ್ ರಾಠೋಡ್ವಾರ್ತಾ ಮತ್ತು ಪ್ರಸಾರ ಸಚಿವರಾಗಿದ್ದರು. ಅವರು ಈ ತಿರುಚಿದ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಅವರ ಬೇಜವಾಬ್ದಾರಿ ಹಾಗೂ ಕುಚೋದ್ಯದ ವರ್ತನೆಯನ್ನು ತೋರುತ್ತದೆ’ ಎಂದು ವಾಗ್ದಾಳಿ ನಡೆಸಿದರು.