ನವದೆಹಲಿ: ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸುವ ಮೂಲಕ ಅಪಹರಣಕ್ಕೀಡಾಗಿದ್ದ ಅಕ್ಕ– ತಮ್ಮನನ್ನು ದೆಹಲಿ ಪೊಲೀಸರು ರಕ್ಷಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
11 ವರ್ಷದ ಬಾಲಕಿ ಹಾಗೂ 3 ವರ್ಷದ ಬಾಲಕನನ್ನು ಅಪರಹರಿಸಿದ್ದ ಆರೋಪಿಗಳು, ಪೋಷಕರಿಗೆ ₹50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.
‘ಶಕರಪುರದ ವಿಕಾಸ್ ರಸ್ತೆಯಲ್ಲಿರುವ ಸ್ವೀಟ್ ಅಂಗಡಿಯಲ್ಲಿ ಸಿಹಿ ತಿನಿಸು ಖರೀದಿಸಲು ನಾನು ಹಾಗೂ ನನ್ನ ಪತ್ನಿ ತೆರಳಿದ್ದೆವು. ಇಬ್ಬರು ಮಕ್ಕಳು ಕಾರಿನಲ್ಲಿಯೇ ಇದ್ದರು. ಇದೇ ಸಮಯವನ್ನು ಗಮನಿಸಿದ ಆರೋಪಿಯು ಪಾರ್ಕಿಂಗ್ ಕೆಲಸಗಾರನಂತೆ ನಟಿಸಿ, ತಮ್ಮ ಕಾರಿನಲ್ಲಿಯೇ ಮಕ್ಕಳನ್ನು ಅಪಹರಿಸಿದ್ದಾನೆ‘ ಎಂದು ಅಪಹರಣಕ್ಕೀಡಾದ ಮಕ್ಕಳ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಆಯುಕ್ತೆ (ಪೂರ್ವ) ಅಪೂರ್ವ ಗುಪ್ತಾ ಮಾಹಿತಿ ನೀಡಿದ್ದಾರೆ.
‘ನಿಮ್ಮ ಪೋಷಕರು ಕಾರನ್ನು ಪಾರ್ಕ್ ಮಾಡಲು ಹೇಳಿ ಹೋಗಿದ್ದಾರೆ‘ ಎಂದು ಮಕ್ಕಳಿಗೆ ತಿಳಿಸಿ ಆರೋಪಿಯು ಕಾರನ್ನು ಹತ್ತಿದ್ದಾನೆ. ಬಳಿಕ ಕಾರನ್ನು ವೇಗವಾಗಿ ಚಲಾಯಿಸಿದ್ದು, ಮಕ್ಕಳಿಗೆ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.ಎಂದು ಪೊಲೀಸರು ಹೇಳಿದ್ದಾರೆ.
ತಂದೆ ನೀಡಿದ ದೂರನ್ನು ಆಧರಿಸಿ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿ ಸತತ ಮೂರು ಗಂಟೆಗಳ ಕಾಲ 20 ವಾಹನಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು. ತಂದೆ ಜತೆ ಲಕ್ಷಿನಗರ ಪೊಲೀಸರ ವಿಶೇಷ ತಂಡ ಹಾಗೂ ತಾಯಿ ಜತೆ ಶಕರಪುರ ಪೊಲೀಸರ ತಂಡ ಕಾರ್ಯಾಚರಣೆ ನಡೆಸಲಾಯಿತು ಎಂದು ಗುಪ್ತಾ ತಿಳಿಸಿದ್ದಾರೆ.
ದೆಹಲಿಯಿಂದ 100 ಕಿ.ಮೀ ಕ್ರಮಿಸಿದ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸರು ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ನೆರೆಯ ಜಿಲ್ಲಾ ಪೊಲೀಸರು, ಆರ್ಸಿಎಫ್ ಪಡೆಯು ಸಹಕರಿಸಿದೆ ಎಂದು ಗುಪ್ತಾ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.