ಚೆನ್ನೈ: ಹತ್ಯೆಯಾದ ತಮಿಳುನಾಡಿನ ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್ಮ್ಸ್ಟ್ರಾಂಗ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಚೆನ್ನೈನಲ್ಲಿರುವ ಪಕ್ಷದ ಕಚೇರಿಯ ಆವರಣದಲ್ಲಿ ನಡೆಸಲು ಮದ್ರಾಸ್ ಹೈಕೋರ್ಟ್ ಅನುಮತಿ ನಿರಾಕರಿಸಿದೆ.
ಇದರ ಬದಲಾಗಿ ಪಕ್ಕದ ತಿರುವಳ್ಳೂರು ಜಿಲ್ಲೆಯಲ್ಲಿ ಅಂತ್ಯಕ್ರಿಯೆ ನಡೆಸಲು ನ್ಯಾಯಾಲಯ ಅವಕಾಶ ನೀಡಿದೆ.
ಪಕ್ಷದ ಕಚೇರಿ ಆವರಣದಲ್ಲಿ ಅಂತ್ಯಕ್ರಿಯೆಗೆ ಅನುಮತಿ ಕೋರಿ ಆರ್ಮ್ಸ್ಟ್ರಾಂಗ್ ಅವರ ಪತ್ನಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಭಾನುವಾರ ನಡೆಸಿತು. ಪಕ್ಷದ ಕಚೇರಿಯು ಜನವಸತಿ ಪ್ರದೇಶದಲ್ಲಿದೆ, ಹೀಗಾಗಿ ಅಲ್ಲಿ ಅಂತ್ಯಕ್ರಿಯೆ ನಡೆಸುವುದು ಸರಿಯಲ್ಲ ಎಂದು ಸರ್ಕಾರ ಅರ್ಜಿಯನ್ನು ವಿರೋಧಿಸಿತು.
ತಿರುವಳ್ಳೂರಿನಲ್ಲಿರುವ ಆರ್ಮ್ಸ್ಟ್ರಾಂಗ್ ಅವರ ಸಂಬಂಧಿಕರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲು ಅನುಮತಿ ನೀಡಿದ್ದು, ಈ ಸಂಬಂಧ ಆದೇಶವನ್ನೂ ಹೊರಡಿಸಲಾಗಿದೆ ಎಂದು ಸರ್ಕಾರ ಹೇಳಿತು. ಇದಕ್ಕೆ ನ್ಯಾಯಾಲಯ ಸಮ್ಮತಿಸಿತು. ಆರ್ಮ್ಸ್ಟ್ರಾಂಗ್ ಅವರ ಪತ್ನಿಯೂ ಅದನ್ನು ಒಪ್ಪಿಕೊಂಡರು.
ಚೆನ್ನೈನ ಪೆರಂಬೂರಿನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಇರಿಸಲಾಗಿದ್ದ ಆರ್ಮ್ಸ್ಟ್ರಾಂಗ್ ಅವರ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದ ಬಳಿಕ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಮಾತನಾಡಿದರು